ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೈ, ಚೂರಲ್‌ ಮಲದಲ್ಲಿ ಪ್ರವಾಹ ಭೀತಿ; ಆತಂಕದಲ್ಲಿ ಸ್ಥಳೀಯರು

Most read

ತಿರುವನಂತಪುರ: ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೈ, ಚೂರಲ್‌ ಮಲದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಮತ್ತೆ ಪ್ರವಾಹ, ಭೂಕುಸಿತ ಸಂಭವಿಸುವ ಭೀತಿ ಎದುರಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮುಂಡಕ್ಕೈ, ಚೂರಲ್‌ ಮಲದಲ್ಲಿ ಭೂಕುಸಿತ ಸಂಭವಿಸಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು.

ಚೂರಲ್‌ ಮಲ ನದಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ನವೀಕರಣ ಕಾಮಗಾರಿಗಳಿಗಾಗಿ ನದಿ ದಂಡೆಯಲ್ಲಿ ಸಂಗ್ರಹಿಸಲಾದ ಮಣ್ಣು ಕೊಚ್ಚಿಹೋಗಿದೆ ಮತ್ತು ಅಟ್ಟಮಾಲ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ನುಗ್ಗಿದೆ.

ಪಂಚಿರಿಮಟ್ಟಂ ಬಳಿ ಅರಣ್ಯ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬೆಟ್ಟಗಳ ಮೇಲೆ ವ್ಯಾಪಕ ಮಳೆಯಾಗುತ್ತಿರುವುದು ದಿಢೀರ್ ಪ್ರವಾಹಕ್ಕೆ ಕಾರಣವಾಗಿದೆ. ಆದರೂ, ತಕ್ಷಣಕ್ಕೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಬಿನಿ ನದಿಯ ಕೆಳಭಾಗದಲ್ಲಿ ಮಾನಂತವಾಡಿ ಮತ್ತು ಪನಮರಂನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬಾಣಾಸುರ ಅಣೆಕಟ್ಟು ಭರ್ತಿಯಾಗುತ್ತಿರುವುದರಿಂದ ಹತ್ತಿರದ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಯನಾಡು, ತಿರುವನಂತಪುರ, ಕೊಲ್ಲಂ ಮತ್ತು ಆಲಪ್ಪುಳ ಸೇರಿದಂತೆ 11 ಜಿಲ್ಲೆಗಳಲ್ಲಿ ಬಿರುಗಾಳಿ ಸಮೇತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಡಕ್ಕೈ, ಚೂರಲ್‌ ಮಲದಲ್ಲಿ 2024ರ ಜುಲೈನಲ್ಲಿ ಸಂಭವಿಸಿದ್ದ ಭೂಕುಸಿತದಿಂದಾಗಿ ನೂರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದರು. ಜನರ ಸಾವು ನೋವಿಗೆ ಕಾರಣವಾಗಿದ್ದ ವಿಪತ್ತು ಮತ್ತೆ ಮರುಕಳಿಸಬಹುದು ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

More articles

Latest article