ಸರ್ಕಾರವೇ ಸಿದ್ಧಪಡಿಸಿರುವ ಅನುವಾದ ತಂತ್ರಾಂಶ ಕನ್ನಡ ಕಸ್ತೂರಿ ಶೀಘ್ರ ಲೋಕಾರ್ಪಣೆ: ಡಾ.ಪುರುಷೋತ್ತಮ ಬಿಳಿಮಲೆ

Most read

ಬೆಂಗಳೂರು: ಕನ್ನಡದ ತಂತ್ರಜ್ಞಾನವು ಹೊಸ ತಲೆಮಾರಿನ ಆದ್ಯತೆಗಳನ್ನು ಅರ್ಥೈಸಿಕೊಂಡು ರೂಪುಗೊಳ್ಳದೇ ಹೋದಲ್ಲಿ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅಸ್ತಿತ್ವದ ಪ್ರಶ್ನೆಯನ್ನು ಎದುರಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಇ-ಕನ್ನಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಇಂದಿನ ಎಲ್ಲ ಬಿಕ್ಕಟ್ಟುಗಳ ನಡುವೆ ಕನ್ನಡ ತಂತ್ರಜ್ಞಾನವು ಜನ ಸಾಮಾನ್ಯರ ದೈನಂದಿನ ಬದುಕಿನ ಭಾಗವಾಗಬೇಕಾದಲ್ಲಿ ಆಡಳಿತ ಯಂತ್ರದ ಕಾಳಜಿ ಮತ್ತು ಜವಾಬ್ದಾರಿ ಪ್ರಮುಖವಾಗುತ್ತದೆ. ಕೃತಕಬುದ್ಧಿಮತ್ತೆಯ ತಂತ್ರಜ್ಞಾನವು ಬದುಕಿನ ಎಲ್ಲ ಆಯಾಮಗಳನ್ನು ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಯಂತ್ರಗಳು ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಇನ್ನಷ್ಟು ವೃತ್ತಿಪರತೆಯನ್ನು ರೂಢಿಸಿಕೊಳ್ಳುವ ಮೂಲಕ ಕನ್ನಡ ಭಾಷಾ ಸೇವೆಯನ್ನು ನೆರವೇರಿಸಬೇಕಾದ ಅವಶ್ಯಕತೆ ಇದೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾಸಗಿ ತಂತ್ರಾಂಶಗಳ ಮಾರುಕಟ್ಟೆ ಆಧಾರಿತ ಕಾರ್ಯ ನಿರ್ವಹಣೆಯಲ್ಲಿ ಸಾರ್ವಜನಿಕ ಬದ್ಧತೆಯ ಕೊರತೆ ಇದ್ದು, ಜನ ಸಾಮಾನ್ಯರೆಡೆಗೆ ತಂತ್ರಾಂಶಗಳನ್ನು ಮುಕ್ತವಾಗಿ ಕೊಂಡ್ಯೊಯುವ ನಿಟ್ಟಿನಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿರುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ವಲಯದ ಅಭಿವೃದ್ಧಿ ಮತ್ತು ಪ್ರಗತಿಗೆ ಅನುಗುಣವಾಗಿ ಸರ್ಕಾರದ ಉಪಕ್ರಮಗಳಲ್ಲಿ ಬದಲಾವಣೆಯಾದಾಗ ಮಾತ್ರ ಹೊಸ ತಲೆಮಾರಿನ ಕನ್ನಡದ ಸವಾಲುಗಳನ್ನು ಎದುರಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಕನ್ನಡ ಕಸ್ತೂರಿ ಶೀಘ್ರ ಲೋಕಾರ್ಪಣೆ:
ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವ ಸಮರ್ಥ ತಂತ್ರಾಂಶವನ್ನು ಇ-ಆಡಳಿತ ಇಲಾಖೆ ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಈ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಲಾಗುವುದೆಂದು ತಿಳಿಸಿರುವ ಡಾ. ಬಿಳಿಮಲೆ, ಉದ್ದೇಶಿತ ತಂತ್ರಾಂಶವು ಇಂದಿನ ಖಾಸಗಿ ತಂತ್ರಾಂಶಗಳಿಗಿಂತ ಅತಿ ಹೆಚ್ಚು ದಕ್ಷತೆಯನ್ನು ಹೊಂದಿದ್ದು, ಸುಮಾರು 2.3 ಕೋಟಿ ಆಂಗ್ಲ ಮತ್ತು ಕನ್ನಡ ಸಮಾನಾಂತರ ವಾಕ್ಯಗಳನ್ನು ಆಧರಿಸಿ ಸಿದ್ಧಗೊಂಡಿದೆ. ಈ ತಂತ್ರಾಂಶವು ಲೋಕಾರ್ಪಣೆಗೊಂಡಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯದ ಬಹುದೊಡ್ಡ ಕೊಡುಗೆ ನೀಡುವುದರ ಜೊತೆಗೆ ಖಾಸಗಿ ವಲಯದ ತಂತ್ರಾಂಶಕ್ಕೆ ತೀವ್ರ ಪೈಪೋಟಿ ನೀಡಲಿದೆ ಎಂದಿದ್ದಾರೆ.

ಅಲ್ಲದೇ, 200ಕ್ಕೂ ಹೆಚ್ಚು ಪದಕೋಶ/ ನಿಘಂಟುಗಳನ್ನು ಬಳಸಿ ಅತ್ಯಾಧುನಿಕ ಪದಕಣಜ ತಂತ್ರಾಂಶವನ್ನು ರಾಜ್ಯ ಸರ್ಕಾರವು ಸಾರ್ವಜನಿಕ ಬಳಕೆಗೆ ನೀಡಿದ್ದು, ಸುಮಾರು 2 ಲಕ್ಷ 20 ಸಾವಿರ ಕನ್ನಡ ಪದಗಳು ಹಾಗೂ 1 ಲಕ್ಷ 20 ಸಾವಿರ ಆಂಗ್ಲ ಮೂಲ ಪದಗಳು ಈ ತಂತ್ರಾಂಶದಲ್ಲಿ ಲಭ್ಯವಿದೆ. ಪದಕಣಜ ಮೊಬೈಲ್ ತಂತ್ರಾಂಶವನ್ನು ಸಹ ಬಳಕೆಗೆ ನೀಡಲಾಗಿದ್ದು, ಸಾರ್ವಜನಿಕರು ಈ ತಂತ್ರಾಂಶದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಾ.ಬಿಳಿಮಲೆ ತಿಳಿಸಿದ್ದಾರೆ.

ಇ-ಕಲಿಕಾ ಕನ್ನಡ ಪೋರ್ಟಲ್:
ಜಗತ್ತಿನ ಬೇರೆ ಭಾಗಗಳಿಂದ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಇಲ್ಲಿ ನೆಲೆಸಿರುವ ಅನ್ಯಭಾಷಿಕರಿಗೆ, ಕನ್ನಡ ಕಲಿಯಲು ಉತ್ಸಾಹ ಇರುವವರಿಗೆ ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ಉದ್ದೇಶದಿಂದ ಸರ್ಕಾರವು ಇ-ಕಲಿಕಾ ಕನ್ನಡ ಪೊರ್ಟಲ್ ರೂಪಿಸಿದ್ದು, ಇದು ಪ್ರಾಧಿಕಾರದ ಆಶಯಕ್ಕೆ ಪೂರಕವಾಗಿದೆ. ಕನ್ನಡೇತರರು ಕನ್ನಡ ಭಾಷೆಯನ್ನು ಕಲಿಯುವಲ್ಲಿ ಇ-ಕಲಿಕಾ ಕನ್ನಡ ಪೋಟರ್ಲ್ ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಡಾ.ಬಿಳಿಮಲೆ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಇ-ಕನ್ನಡ ಯೋಜನೆಯ ಯೋಜನಾ ನಿರ್ದೇಶಕಿ ನಂದಿನಿ ಹಾಜರಿದ್ದರು.

More articles

Latest article