ಮಂಗಳೂರು : ಸಂಘ ಪರಿವಾರದ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಜಾಮೀನು ಅರ್ಜಿ ವಿಚಾರಣೆ ಡಿಸೆಂಬರ್ 5 ಕ್ಕೆ ಮುಂದೂಡಲ್ಪಟ್ಟಿದೆ. ಈಶ್ವರಿ ಪದ್ಮುಂಜ ಪರ ವಕೀಲ ಸತೀಶನ್ ಅವರ ಬಿಎನ್ಎಸ್ಎಸ್ ಸೆಕ್ಷನ್ 338 – 339 ಅರ್ಜಿಯನ್ನು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಪುರಸ್ಕೃತಗೊಳಿಸಿದೆ. ಈ ಮೂಲಕ ಸತೀಶನ್ ಅವರು, ಪ್ರಭಾಕರ ಭಟ್ ಸಲ್ಲಿಸಿರುವ ಜಾಮೀನು ಅರ್ಜಿಗೆ ವಿರುದ್ಧವಾಗಿ ವಾದ ಮಂಡಿಸುವ ಅವಕಾಶ ಲಭ್ಯವಾಗಿದೆ. ಇದು ಮಹತ್ವದ ಬೆಳವಣಿಗೆ ಎಂದು ಭಾವಿಸಲಾಗಿದೆ.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಧ್ವೇಷ ಭಾಷಣ ಮಾಡಿದ್ದಾರೆಂದು ಆರೋಪಿಸಿ ಜನವಾದಿ ಮಹಿಳಾ ಸಂಘಟನೆಯ ಈಶ್ವರಿ ಪದ್ಮುಂಜರವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಸಂಘಟಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಪ್ರಭಾಕರ ಭಟ್ ಬಂಧನ ಭೀತಿಯಿಂದ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಅಲ್ಲಿಸಿದ್ದರು. ಅಕ್ಟೋಬರ್ 27 ರಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ‘ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ’ ನೀಡಿ ಪೂರ್ಣ ಪ್ರಮಾಣದ ವಿಚಾರಣೆ ಮತ್ತು ನಿರೀಕ್ಷಣಾ ಜಾಮೀನು ಸಂಬಂಧ ಅದೇಶವನ್ನು ಅಕ್ಟೋಬರ್ 29 ಕ್ಕೆ ಮುಂದೂಡಿತ್ತು.
ಅ. 29 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಸತೀಶನ್ ಅವರು, ಪ್ರಭಾಕರ ಭಟ್ ಬಂಧನದಿಂದ ರಕ್ಷಣೆ ಪಡೆಯಲು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರು ಅಗತ್ಯ ವಿಚಾರಗಳನ್ನು ನ್ಯಾಯಾಲಯದಿಂದ ಮರೆಮಾಚಿದ್ದಾರೆ. ಅದರ ಫಲವಾಗಿ ಅವರಿಗೆ ತಾತ್ಕಾಲಿಕ ರಕ್ಷಣೆ ದೊರೆತಿದೆ. ಆದ್ದರಿಂದ ಪ್ರಭಾಕರ ಭಟ್ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ಮತ್ತು ವಾದ ಮಂಡಿಸಲು ಅವಕಾಶ ಕೊಡಬೇಕು ಎಂದು ವಾದಿಸಿದ್ದರು.
ನಂತರ ಸತೀಶನ್ ಅವರ ಬಿಎನ್ಎಸ್ಎಸ್ ಸೆಕ್ಷನ್ 338 – 339 ಅರ್ಜಿಗೆ ತಕರಾರು ಸಲ್ಲಿಸಲು ಪ್ರಕರಣವನ್ನು ನ. 4ಕ್ಕೆಮುಂದೂಡಲಾಗಿತ್ತು. ನ.4 ರಂದು ಸರ್ಕಾರಿ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದರು. ಅಂದು ವಿಚಾರಣೆಯನ್ನು ನ. 10 ಕ್ಕೆ ಮುಂದೂಡಲಾಗಿತ್ತು. ನ. 10 ರಂದು ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರ ವಕೀಲರು ಪ್ರಭಾಕರ ಭಟ್ ಅವರ ಜಾಮೀನು ಅರ್ಜಿಗೆ ಸಂಬಂಧಿಸಿ ಹಲವು ಪುಟಗಳ ಸುದೀರ್ಘ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ನಂತರ ದೂರುದಾರರಿಗೆ ಯಾವ ಕಾರಣಕ್ಕೆ ಬಿಎನ್ಎಸ್ಎಸ್ ಸೆಕ್ಷನ್ 338 – 339 ಅಡಿ ಅವಕಾಶ ಕೊಡಬೇಕು ಎಂಬ ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಸತೀಶನ್ ಅವರ ವಾದ ಆಲಿಸಿದ ನ್ಯಾಯಾಲಯವು ಪ್ರಕರಣವನ್ನು ನ. 15 ಕ್ಕೆ ಮುಂದೂಡಿತ್ತು. ವಕೀಲ ಸತೀಶನ್ ಅವರು ಸುದೀರ್ಘ ವಾದ ಮಂಡಿಸಿದ್ದರ ಫಲವಾಗಿ ನ. 15, 17, 19 ಮತ್ತು ನವೆಂಬರ್ 27 ರಂದು ನ್ಯಾಯಾಲಯವು ಈ ಸಂಬಂಧ ಆದೇಶ ನೀಡಲು ಸಾಧ್ಯವಾಗಲಿಲ್ಲ. ಈ ನಾಲ್ಕೂ ದಿನಾಂಕಗಳಲ್ಲಿ ‘ಆದೇಶ ಸಿದ್ದಗೊಂಡಿಲ್ಲ’ ಎಂದು ನ್ಯಾಯಾಧೀಶರು ಡೈಲಿ ಆರ್ಡರ್ ನಲ್ಲಿ ನಮೂದಿಸಿ ಪ್ರಕರಣವನ್ನು ಡಿಸೆಂಬರ್ 2 ಕ್ಕೆ ಮುಂದೂಡಿದ್ದರು.
ಡಿಸೆಂಬರ್ 2 ರಂದು ದೂರುದಾರರಾಗಿರುವ ಈಶ್ವರಿ ಪದ್ಮುಂಜ ಅವರ ವಕೀಲರಾಗಿರುವ ಸತೀಶನ್ ಅವರು ಸಲ್ಲಿಸಿರುವ ಬಿಎನ್ಎಸ್ಎಸ್ ಸೆಕ್ಷನ್ 338 – 339 ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

