ಭಾರತ್ ಮಾತಾ ಕೀ ಜೈ ಅನ್ನೋದು ಬಿಜೆಪಿಯವರ ಅಪ್ಪನ ಮನೆಯ ಆಸ್ತಿನಾ : ಲಕ್ಷ್ಮಣ ಸವದಿ ಪ್ರಶ್ನೆ

Most read

ಕಲಬುರ್ಗಿ: ಬಿಜೆಪಿಯವರು ಯಾವ ಮನೆಯ ಒಳ ಹೊಕ್ಕಿರುತ್ತಾರೋ ಆ ಮನೆಗೆ ಉಜ್ವಲ ಭವಿಷ್ಯ ಇರಲ್ಲ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಟೀಕಿಸಿದ್ದಾರೆ.

ಬಿಜೆಪಿಯವರ ಮನೆ ಒಳ ಹೊಕ್ಕ ಮನೆ ಹಾಳು ಅಂದು ಶಾಸ್ತ್ರದಲ್ಲೇ ಇದೆ ಎಂದು ಲೇವಡಿ ಮಾಡಿದ ಅವರು ಬಿಜೆಪಿಯವರು ಈ ಚುನಾವಣೆಯಲ್ಲಿ ಸೋಲಲಿದ್ದಾರೆ. ವಿನಾಶಕಾಲೆ ವಿಪರೀತ ಬುದ್ದಿ ಅನ್ನೋ ಹಾಗಾಗಿದೆ ಬಿಜೆಪಿ ಪಾಡು ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಹೇಳಿದ್ದಾರೆ.

ಭಾರತ್ ಮಾತಾ ಕೀ ಜೈ ಅನ್ನೋದು ಬಿಜೆಪಿಯವರ ಅಪ್ಪನ ಮನೆಯ ಆಸ್ತಿನಾ ಅಂತಾ ಪ್ರಶ್ನಿಸಿದ ಸವದಿ, ಇಡಿ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು ನಮ್ಮ ಅಭಿಮಾನ , ನಮ್ಮ ದೇಶ ಭಕ್ತಿ. ಇದು ಬಿಜೆಪಿಯವರ ಗುತ್ತಿಗೆಯಲ್ಲ. ನಾವೂ ಕೂಡ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ, ವಂದೇ ಮಾತರಂ ಎನ್ನುತ್ತೇವೆ, ಜೈ ಹಿಂದ್ ಕೂಡ ಎನ್ನುತ್ತೇವೆ. ಇದು ಬಿಜೆಪಿಯವರಿಗೆ ಕೇಳಿಸಿಲ್ಲವೇ ಎಂದರು.

ಇವರಿಗಿಂತಲು ದೇಶಾಭಿಮಾನ ನಮ್ಮಲ್ಲಿ ಹೆಚ್ಚಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರೋದೆ ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯ ಹೋರಾಟಕ್ಕೆ ಇವರದೇನು ಕೊಡುಗೆ ಇದೆ ಎಂದು ಪ್ರಶ್ನಿಸಿದ ಅವರು ಚಿಲ್ಲರೆ ಟ್ವಿಟ್ ಮಾಡೋದು ,ನಿಂದನೆ ಮಾಡೋದು ಇವರ ಕೆಲಸ. ನಿಜವಾದ ದೇಶ ದ್ರೋಹಿಗಳು ಬಿಜೆಪಿಯವರು. ಇವರು ಕೇವಲ ತೋರಿಕೆಗೆ, ಆಟಕ್ಕೆ , ಅಧಿಕಾರಕ್ಕೆ ದೇಶ ಭಕ್ತಿ ತೋರಿಸ್ತಾರೆ. ಇವರು ಸಂವಿಧಾನ ವಿರೋಧಿ , ಜಾತಿ ವಿರೋಧಿ ಮಾಡ್ತಾರೆ. 400 ಸೀಟ್ ಬಂದ್ರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಟೀಕಿಸಿದರು.

ನನ್ನ ಹೆಸರೇ ಲಕ್ಷ್ಮಣ. ರಾಮನ ತಮ್ಮನ ಹೆಸರು ಲಕ್ಷ್ಮಣ. ಜೈ ಶ್ರೀರಾಮ ಘೋಷಣೆ ಕೂಗೋದಕ್ಕೆ ಇವರ ಅಪ್ಪನ ಮನೆಯ ಪರ್ಮಿಷನ್ ತೆಗೆದುಕೋಬೇಕ? ಎಲ್ಲೆಲ್ಲಿ ನನ್ನ ಮಾತಿಗೆ ಮನ್ನಣೆ ಸಿಗುತ್ತೆ ಆ ಎಲ್ಲಾ ಕಡೆ ಪ್ರಚಾರ ಮಾಡ್ತೆನೆ. ನಾಳೆ ಬೀದರ್‌ ಹೋಗುತ್ತೇನೆ. ರಾಯಚೂರು , ಧಾರವಾಡ , ಹಾವೇರಿ ಹೋಗುತ್ತೇನೆ, ಪ್ರಚಾರ ಮಾಡುತ್ತೇನೆ. ಕನಿಷ್ಠ 20 ಸ್ಥಾನ ಗೆಲ್ಲುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ತಲುಪುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

More articles

Latest article