ನವದೆಹಲಿ: ಇಸ್ರೇಲ್–ಇರಾನ್ ಯುದ್ಧ ತಾರಕಕ್ಕೇರುತ್ತಿದ್ದು, ಇರಾನ್ ದೇಶಕ್ಕೆ ರಫ್ತಾಗಬೇಕಿದ್ದ ಅಪಾರ ಪ್ರಮಾಣದ ಬಾಸ್ಮತಿ ಅಕ್ಕಿಯು ದೇಶದ ಬಂದರುಗಳಲ್ಲೇ ಸಿಲುಕಿದೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಸಂಘ ತಿಳಿಸಿದೆ.
ಇರಾನ್ ಗೆ ಸಾಗಿಸಲಾಗುತ್ತಿದ್ದ ಸುಮಾರು 1 ಲಕ್ಷ ಟನ್ ಬಾಸ್ಮತಿ ಅಕ್ಕಿಯನ್ನು ಹೊತ್ತ ಹಡಗುಗಳು ಸದ್ಯ ಭಾರತದ ಬಂದರುಗಳಲ್ಲೇ ಉಳಿದಿವೆ. ಭಾರತ ರಫ್ತು ಮಾಡುವ ಒಟ್ಟು ಬಾಸ್ಮತಿ ಅಕ್ಕಿಯಲ್ಲಿ ಶೇ 18–20ರಷ್ಟು ಇರಾನ್ ದೇಶಕ್ಕೆ ರಫ್ತಾಗುತ್ತಿದೆ ಹೊಂದಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೋಯಲ್ ತಿಳಿಸಿದ್ದಾರೆ.
ಗುಜರಾತ್ನ ಕಾಂಡ್ಲಾ ಹಾಗೂ ಮುಂದ್ರಾ ಬಂದರುಗಳಲ್ಲಿ ಬಾಸ್ಮತಿ ಅಕ್ಕಿ ಸಾಗಿಸುತ್ತಿದ್ದ ಸರಕು ಸಾಗಣೆ ಹಡಗುಗಳು ಸಿಲುಕಿವೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸದ್ಯ ಉದ್ವಿಗ್ನೆತೆ ಉಲ್ಪಣಿಸಿದೆ. ಇರಾನ್ ಗೆ ಹೋಗುವ ಹಡಗುಗಳಿಗೆ ಯಾವುದೇ ರೀತಿಯ ವಿಮಾ ಸೌಲಭ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಂಘರ್ಷಗಳು ಪ್ರಮಾಣಿತ ಸಾಗಣೆ ವಿಮಾ ಪಾಲಿಸಿಗಳ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ರಫ್ತುದಾರರು ಸರಕುಗಳನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಹಡಗುಗಳ ಸಂಚಾರದಲ್ಲಿನ ವಿಳಂಬ, ಪಾವತಿಯ ಅನಿಶ್ಚಿತತೆಯು ಆರ್ಥಿಕ ಸಂಕಷ್ಟ ಸೃಷ್ಟಿಸಲಿದೆ ಎಂದಿರುವ ಗೋಯಲ್, ಬಾಸ್ಮತಿ ಅಕ್ಕಿ ಬೆಲೆಯು ದೇಶೀಯ ಮಾರುಕಟ್ಟೆಯಲ್ಲಿ ಈಗಾಗಲೇ ರೂ. 4 ರಿಂದ ರೂ.5 ರಷ್ಟು ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.