ಕ್ವಾಲಾಲಂಪುರ: ಭಾರತವು ಪಾಕಿಸ್ತಾನದೊಂದಿಗೆ ಭವಿಷ್ಯದಲ್ಲಿ ನಡೆಸುವ ಮಾತುಕತೆಗಳು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ವಾಪಸ್ ಪಡೆಯುವುದಕ್ಕಷ್ಟೇ ಸೀಮಿತವಾಗಿರಲಿವೆ ಎಂದು ಸರ್ವಪಕ್ಷಗಳ ಸಂಸದರ ನಿಯೋಗಗಳು ಸ್ಪಷ್ಟಪಡಿಸಿವೆ. ಜತೆಗೆ ಭಯೋತ್ಪಾದನೆ ವಿರುದ್ಧ ಜಾಗತಿಕ ಸಮುದಾಯ ಸಮ್ಮತದ ನಿಲುವು ಹೊಂದಿರಬೇಕು ಎಂದೂ ಪ್ರತಿಪಾದಿಸಿವೆ.
ನಿಯೋಗದಲ್ಲಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು, ಕ್ವಾಲಾಲಂಪುರದಲ್ಲಿ ಭಾರತ ಮೂಲದವರ ಜತೆ ಸಂವಾದ ನಡೆಸಿ, ಪಾಕಿಸ್ತಾನದ ಜೊತೆಗಿನ ಮುಂದಿನ ಮಾತುಕತೆಗಳು ಪಿಒಕೆಯನ್ನು ಹಿಂಪಡೆಯುವುದಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ಹೇಳಿದ್ದಾರೆ.
ಸರ್ಕಾರಗಳು ಬದಲಾಗುತ್ತಿದ್ದರೂ, ದಶಕಗಳಿಂದಲೂ ಪಾಕ್ ಜತೆ ಮಾತುಕತೆ ನಡೆಸುತ್ತಲೇ ಇದ್ದೇವೆ. ಆದರೂ ಪಾಕ್ ಜೊತೆಗಿನ ಸಂಘರ್ಷ ಮುಂದುವರೆದಿದೆ. ಏಪ್ರಿಲ್ 22ರಂದು 26 ಜನರನ್ನು ಅವರ ಧರ್ಮ ಹಾಗೂ ಲಿಂಗದ ಆಧಾರದಲ್ಲಿ ಹತ್ಯೆ ಮಾಡಿದ ನಂತರ ಏನಾಗಿದೆ? ಕೇಂದ್ರ ಸರ್ಕಾರವು ಪಿಒಕೆಯನ್ನು ಹಿಂಪಡೆಯುವ ಕುರಿತಷ್ಟೇ ಪಾಕಿಸ್ತಾನ ಜೊತೆ ಚರ್ಚಿಸಬೇಕೆಂದು ಬಯಸುತ್ತೇನೆ. ಇಲ್ಲದಿದ್ದರೆ, ಭಯೋತ್ಪಾದನಾ ದಾಳಿಗಳು ಮುಂದುವರಿಯುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬ್ಯಾನರ್ಜಿ ಅವರು ಜೆಡಿಯು ಸಂಸದ ಸಂಜಯ್ ಕುಮಾರ್ ಝಾ ನೇತೃತ್ವದ ನಿಯೋಗದಲ್ಲಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನ ಹುಲ್ಲುಗಾವಲಿನಲ್ಲಿ ಪಾಕ್ ಬೆಂಬಲಿತ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ‘ಆಪರೇಷನ್ ಸಿಂಧೂರ‘ ಕಾರ್ಯಾಚರಣೆ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕ್ ಸೇನೆ ಗಡಿಯುದ್ದಕ್ಕೂ ದಾಳಿ ನಡೆಸಿತ್ತು. ಇದರಿಂದಾಗಿ, ಉಭಯ ರಾಷ್ಟ್ರಗಳ ನಡುವೆ ಸಂಘರ್ಷದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕದನ ವಿರಾಮ ಒಪ್ಪಂದ ಜಾರಿಯಲ್ಲಿದ್ದು ಯಾವುದೇ ದಾಳಿ ನಡೆಯುತ್ತಿಲ್ಲ.
ಇತ್ತೀಚೆಗೆ ಕೇಂದ್ರ ಸರ್ಕಾರವು, ಭಯೋತ್ಪಾದನೆಗೆ ಪ್ರಾಯೋಜಕತ್ವ ವಹಿಸಿರುವ ಪಾಕಿಸ್ತಾನದ ಮುಖವಾಡವನ್ನು ಜಾಗತಿಕ ಮಟ್ಟದಲ್ಲಿ ಬಯಲು ಮಾಡುವ ನಿಟ್ಟಿನಲ್ಲಿ ಸರ್ವಪಕ್ಷಗಳ ಸಂಸದರನ್ನೊಳಗೊಂಡ 7 ನಿಯೋಗಗಳನ್ನು ರಚಿಸಿದೆ.