ನವದೆಹಲಿ: 1991ರಲ್ಲಿ ಡಾ. ಮನಮೋಹನ್ ಸಿಂಗ್ ಮಂಡಿಸಿದ ಆರ್ಥಿಕ ಉದಾರೀಕರಣ ಬಜೆಟ್ ನ ಮಾದರಿಯಲ್ಲಿ ಇಂದು ದೇಶಕ್ಕೆ ಅಂತಹುದ್ದೇ ಒಂದು ಎರಡನೇ ತಲೆಮಾರಿನ ಆರ್ಥಿಕ ಸುಧಾರಣೆಯ ತುರ್ತು ಬಜೆಟ್ ಅಗತ್ಯವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಡಾ. ಮನಮೋಹನ್ ಸಿಂಗ್ ಅವರು 1991ರಲ್ಲಿ ಮಂಡಿಸಿದ ಆರ್ಥಿಕ ಉದಾರೀಕರಣ ಬಜೆಟ್ನ 34ನೇ ವರ್ಷಾಚರಣೆಯ ನೆನಪಿನಲ್ಲಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಮಧ್ಯಮ ವರ್ಗ ಮತ್ತು ಅವಕಾಶ ವಂಚಿತರಿಗೆ ನೆರವಾಗಲು ಈಗ ಎರಡನೇ ಸುಧಾರಣಾ ನೀತಿಯ ಅಗತ್ಯವಿದೆ. ಆದರೂ ಕಳೆದ 11 ವರ್ಷಗಳಿಂದ ಪ್ರಧಾನಿ ಮೋದಿ ಸರ್ಕಾರ ಜಡಗೊಂಡಿದೆ. ಮೋದಿ ಸರ್ಕಾರ ವಿನಾಶಕಾರಿ ಆರ್ಥಿಕ ನೀತಿಗಳಿಂದಾಗಿ ದೂರದೃಷ್ಟಿ ಮತ್ತು ಕ್ರಿಯೆ ಎರಡನ್ನೂ ಕಳೆದುಕೊಂಡಿದೆ. ಇದರಿಂದ ದೇಶದ ಬೆಳವಣಿಗೆ ದರ ಪಾತಾಳಕ್ಕೆ ಕುಸಿಯುತ್ತಿದೆ. ಸಮಾಜದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಾಗುತ್ತಿದೆ. ವೇತನ ಹೆಚ್ಚಳವಾಗದೆ ಸಾರ್ವಜನಿಕರು ಮತ್ತು ನೌಕರ ವರ್ಗ ತತ್ತರಿಸಿದೆ. ಕಾರ್ಪೊರೇಟ್ ಉದ್ಯಮಿಗಳಿಗೆ ಸಹಾಯ ಮಾಡಲು ಮಧ್ಯಮ ವರ್ಗ ಹಾಗೂ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳು ಕೃಷಿ ಮತ್ತು ತಯಾರಿಕಾ ಘಟಕದಲ್ಲೂ ತಲೆದೋರಿವೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
1991ರ ಬಜೆಟ್ ಭಾರತದ ಪಾಲಿಗೆ ಅತ್ಯಂತ ಪ್ರಮುಖ ಕ್ಷಣವಾಗಿತ್ತು. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಮಾರ್ಗದರ್ಶನದಲ್ಲಿ ಅಂದಿನ ವಿತ್ತ ಸಚಿವ ಮನಮೋಹನ ಸಿಂಗ್ ಅವರು ಆರ್ಥಿಕ ಸುಧಾರಣೆಗೆ ಸರಣಿ ನೀತಿಗಳನ್ನು ಜಾರಿಗೆ ತಂದ ಪರಿಣಾಮ ದೇಶದಲ್ಲಿ ಪರಿವರ್ತನೆ ಆರಂಭವಾಯಿತು. ದೇಶದಲ್ಲಿ ವ್ಯಾಪಕ ಬದಲಾವಣೆ, ಜನರ ಜೀವನ ಮಟ್ಟದಲ್ಲಿ ಸುಧಾರಣೆ ನಡೆಯಿತು ಎಂದು ನೆನಪಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವು ಆರ್ಥಿಕ ಸುಧಾರಣಾ ನೀತಿಯ ಕುರಿತು ಸದಾ ಹೆಮ್ಮೆ ಪಡುತ್ತದೆ. ಭಾರತದ ಆರ್ಥಿಕತೆಯನ್ನು ಗಣನೀಯವಾಗಿ ಉತ್ತೇಜಿಸಿದ ಮತ್ತು ದೇಶದ ಕೋಟಿಗಟ್ಟಲೆ ಜನರನ್ನು ಬಡತನದಿಂದ ಹೊರತಂದ ಸಾರ್ಥಕತೆ ಪಕ್ಷಕ್ಕಿದೆ. ಇಂದು ಅಂತಹುದ್ದೇ ಒಂದು ಎರಡನೇ ತಲೆಮಾರಿನ ಆರ್ಥಿಕ ಸುಧಾರಣೆಯ ತುರ್ತು ಅಗತ್ಯದಲ್ಲಿದೆ. ದೇಶದ ಹಣಕಾಸು ನೀತಿಗಳನ್ನು ರೂಪಿಸುವಲ್ಲಿ, ಬೆಲೆ ಏರಿಕೆ ನಿಯಂತ್ರಿಸುವಲ್ಲಿ, ಖಾಸಗಿ ಹೂಡಿಕೆಗಳನ್ನು ತಗ್ಗಿಸುವಲ್ಲಿ ಮತ್ತು ನೌಕರ ವರ್ಗದ ವೇತನ ಹೆಚ್ಚಿಸುವಲ್ಲಿ ಮತ್ತು ಸಾಮಾನ್ಯ ಜನರ ಕಷ್ಟ ನಿವಾರಣೆಯಲ್ಲಿ ಮೋದಿ ಸರ್ಕಾರ ಸದಾ ವಿಫಲವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.