ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತ ಸಾಮಾನ್ಯ ಭಾರತೀಯರ ಜೇಬುಗಳನ್ನು ಖಾಲಿ ಮಾಡಿ, ಆಯ್ದ ಶತಕೋಟ್ಯಧಿಪತಿಗಳನ್ನು ಜೋಳಿಗೆಯನ್ನು ತುಂಬಿಸಿದೆ. ಜನರಲ್ಲಿ ಖರ್ಚು ಮಾಡಲು ಹೆಚ್ಚಿನ ಆದಾಯವೇ ಇಲ್ಲವಾಗಿದೆ ಎಂದು ಕೇಂದ್ರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಭಾರತ ಜಾಗತಿಕ ಸುಂಕ ಹಾಗೂ ವ್ಯಾಪಾರ ಅಡೆತಡೆಗಳನ್ನು ಎದುರಿಸುತ್ತಿದೆ. ಆದರೆ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಈ ಬಗ್ಗೆ ಉಲ್ಲೇಖವೇ ಇಲ್ಲ ಎಂದು ಅವರು ಎಕ್ಸ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನರೇಂದ್ರ ಮೋದಿಯವರೇ, 100 ಕೋಟಿ ಭಾರತೀಯರಿಗೆ ಖರ್ಚು ಮಾಡಲು ಹೆಚ್ಚಿನ ಆದಾಯವೇ ಇಲ್ಲ. ನಮ್ಮ ಜಿಡಿಪಿಯ ಶೇ 60ರಷ್ಟು ಜನರ ಖರೀದಿಯಿಂದಲೇ ಅವಲಂಬಿತವಾಗಿದೆ. ಭಾರತದ ಶೇ 10 ರಷ್ಟು ಜನರು ಮಾತ್ರ ಆರ್ಥಿಕ ಬೆಳವಣಿಗೆ ಮತ್ತು ಬಳಕೆಯನ್ನು ಮುನ್ನಡೆಸುತ್ತಿದ್ದಾರೆ. ಶೇ 90 ರಷ್ಟು ಜನರಿಗೆ ಮೂಲಭೂತ ದೈನಂದಿನ ಅಗತ್ಯಗಳನ್ನು ಖರೀದಿಸುವ ಶಕ್ತಿಯೂ ಇಲ್ಲ. ತೆರಿಗೆ ಪಾವತಿಸುವ ಶೇ 50ರಷ್ಟು ಜನರ ವೇತನ ಕಳೆದ ದಶಕದಲ್ಲಿ ಕನಿಷ್ಠ ಏರಿಕೆಯಾಗಿದೆ ಅಥವಾ ಏರಿಕೆಯೇ ಕಂಡಿಲ್ಲ. ಹಳ್ಳಿಗಳಲ್ಲಿ ವೇತನ ಋಣಾತ್ಮಕ ಬೆಳವಣಿಗೆ ಕಂಡಿದೆ. ಸಂಪತ್ತಿನ ಕೇಂದ್ರೀಕರಣ ಹೆಚ್ಚಾಗುತ್ತಿದೆ. ನಿಮ್ಮ ನೀತಿಗಳು ಎಲ್ಲರಿಗೂ ಆದಾಯ ವಿತರಿಸುವಲ್ಲಿ ವಿಫಲವಾಗಿವೆ ಎಂದು ಕಿಡಿಕಾರಿದ್ದಾರೆ.
ಕಳೆದ 10 ವರ್ಷಗಳಲ್ಲಿ ಹೆಚ್ಚಳವಾಗದ ವೇತನ, ನಿರಂತರ ಹಣದುಬ್ಬರ ಹಾಗೂ ಬಳಕೆಯಲ್ಲಿ ಇಳಿಕೆಯಿಂದಾಗಿ ಮನೆಗಳಲ್ಲಿ ಉಳಿತಾಯ 50 ವರ್ಷಗಳ ಕನಿಷ್ಠಕ್ಕೆ ಇಳಿದಿದೆ. ಆದಾಯ ತಾರತಮ್ಯ 100 ವರ್ಷಗಳ ಗರಿಷ್ಠಕ್ಕೇರಿದೆ, ಮನೆಗಳಲ್ಲಿ ಸಾಲ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ನಿರುದ್ಯೋಗ ಪ್ರಮಾಣವು ಯುವಜನರಿಗೆ ಸಹಿಸಲಾಗದಷ್ಟು ಇದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.