ಪಟನಾ: ನವಂಬರ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಸುಮಾರು 69 ಲಕ್ಷ ಮತದಾರರನ್ನು ಮತದಾನದಿಂದ ಹೊರಗಿಡಲು ಸಂಚು ರೂಪಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ವರಿಷ್ಠ,ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿದ್ದ
ಮತದಾರರ ಅಧಿಕಾರ ಯಾತ್ರೆ ಇಂದು ಕೊನೆಗೊಳ್ಳಲಿದೆ.
ಯಾತ್ರೆಯಲ್ಲಿ ಭಾಗವಹಿಸಿದ್ದ ಅನೇಕ ನಾಯಕರು ಇಂದು ಗಾಂಧಿ ಮೈದಾನದಿಂದ ಅಂಬೇಡ್ಕರ್ ಉದ್ಯಾನದಲ್ಲಿರುವ ಡಾ. ಭೀಮ್ ರಾವ್ ಅಂಬೇಡ್ಕರ್ ಪುತ್ಥಳಿವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ಬಿಹಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್,ಸಿಪಿಎಂ ನಾಯಕ ದೀಪಾಂಕರ್ ಭಟ್ಟಾಚಾರ್ಯ, ವಿಕಾಸ್ಶೀಲ ಇನ್ಸಾನ್ ಪಕ್ಷದ ಮುಖೇಶ್ ಸಹಾನಿ ಭಾಗಿಯಾಗಲಿದ್ದಾರೆ.
ಬಿಹಾರದ ಒಟ್ಟು 25 ಜಿಲ್ಲೆಗಳ 110 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸುಮಾರು1,300 ಕಿ.ಮೀನಷ್ಟು ಸಾಗಿದೆ.ಯಾತ್ರೆಯುದ್ದಕ್ಕೂ ಪ್ರತಿದಿನ ಸಾರ್ವಜನಿಕ ಸಭೆಗಳನ್ನು ನಡೆಸಲಾಗುತ್ತಿತ್ತು. ವಿಪಕ್ಷಗಳ ಮುಖಂಡರು ಆಡಳಿತಾರೂಢ ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಕಾರೋಶ ಹೊರಹಾಕುತ್ತಿದ್ದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಹೆಸರಿನಲ್ಲಿ ಚುನಾವಣಾ ಆಯೋಗ ಮತ್ತು ಬಿಜೆಪಿ ಮತಗಳ ಕಳ್ಳತನದಲ್ಲಿ ನಿರತವಾಗಿದೆ ಎಂದು ರಾಹುಲ್ ಗಾಂಧಿ ಆಪಾದಿಸುತ್ತಾ ಬಂದಿದ್ದರು. ಕೇವಲ ಬಿಹಾರ ಮಾತ್ರವಲ್ಲದೆ ಕರ್ನಾಟಕ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲೂ ಮತಗಳ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಅಂಕಿಅಂಶಗಳ ಸಹಿತ ಆರೋಪ ಮಾಡುತ್ತಾ ಬಂದಿದ್ದರು.