ಬೆಂಗಳೂರು: RSS ಈ ದೇಶಕ್ಕೆ, ಸಮಾಜಕ್ಕೆ, ಸಂವಿಧಾನಕ್ಕೆ ಮಾತ್ರ ಮಾರಕವಲ್ಲ, ಸ್ವತಃ ಬಿಜೆಪಿ ನಾಯಕರಿಗೂ ಮಾರಕವಾಗಿದೆ! ಈ ಸತ್ಯವನ್ನು ಹೇಳಿದ್ದು ಬಿಜೆಪಿಯವರೇ ಹೊರತು ನಾವಲ್ಲ. RSSನ ಸರ್ವಾಧಿಕಾರಿತನಕ್ಕೆ ಬಿಜೆಪಿಯ ಬಲಿಷ್ಠ ನಾಯಕರೂ ಬಲಿಯಾಗಿ ಬಿಲ ಸೇರಿದ್ದಾರೆ. RSS ಎಂಬ ವಿಷಜಂತು ಬಿಜೆಪಿಯವರನ್ನೂ ಸುಟ್ಟು ಬೂದಿ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ, ಮೇಲ್ಮನೆ ಸದಸ್ಯ ಬಿಕೆ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಈಗ ಬಿಜೆಪಿಯವರು ಸ್ಪರ್ಧೆಗೆ ಬಿದ್ದವರಂತೆ RSS ಪರವಾಗಿ ಸಮರ್ಥನೆಗೆ ಇಳಿದು ನಮ್ಮನ್ನು ನಿಂದಿಸುತ್ತಿದ್ದಾರೆ. ಬಿಜೆಪಿಯವರ ಈ ಸಮರ್ಥನಾ ಅಭಿಯಾನ ನಡೆಯುತ್ತಿರುವುದು RSS ಮೇಲಿನ ಭಕ್ತಿಯಿಂದಲ್ಲ ಭಯದಿಂದ! RSSನ ಕಾಲಾಳುಗಳಂತೆ ವರ್ತಿಸದಿದ್ದರೆ ಬಿಜೆಪಿಯವರಿಗೆ ಭವಿಷ್ಯವೂ ಇಲ್ಲ, ಬದುಕೂ ಇಲ್ಲ.
ಆಡ್ವಾಣಿಯವರನ್ನು ಮೂಲೆಗೆ ತಳ್ಳಿದ ಇದೇ ಆರ್ ಎಸ್ ಎಸ್, ಯಡಿಯೂರಪ್ಪನವರನ್ನೂ ನೆಮ್ಮದಿಯಾಗಿರಲು ಬಿಟ್ಟಿರಲಿಲ್ಲ, ಕೊನೆಗೂ ಎಳೆದು ಮೂಲೆಗೆ ಕೂರಿಸುವಲ್ಲಿ ಯಶಸ್ವಿಯಾಗಿತ್ತು.
RSS ಗುಲಾಮಗಿರಿ ಮಾಡದಿದ್ದರೆ ತಮ್ಮ ಪೂಜ್ಯ ತಂದೆಯವರಿಗಾದ ಗತಿ ತಮಗೂ ಆಗಬಹುದೆಂಬ ಭಯ ವಿಜಯೇಂದ್ರರಿಗೆ ಇರಬಹುದೇನೋ. RSSನವರು ಕಡುಭ್ರಷ್ಟರು ಎಂಬ ಸತ್ಯವನ್ನು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಸುರೇಶ್ ಗೌಡರೇ ಹೇಳಿದ್ದಾರೆ,
ಇದಕ್ಕೆ ಉತ್ತರ ಹೇಳುವ ಧೈರ್ಯ @BJP4Karnataka ನಾಯಕರಾದ @BYVijayendra @RAshokaBJP ಅವರಿಗಿದೆಯೇ?
ಸುರೇಶ್ ಗೌಡರ ಈ ಹೇಳಿಕೆ ಹೊರಬಂದ ನಂತರವೂ ಅವರ ವಿರುದ್ದ ಯಾವುದೇ ಕ್ರಮ ಜರುಗಿಸದೆ ಅವರಿಗೆ ಟಿಕೆಟ್ ನೀಡಿ ಅವಕಾಶ ಕಲ್ಪಿಸಲಾಗಿತ್ತು ಅಂದರೆ ಏನರ್ಥ? ಅವರಿಂದ RSS ಬಗೆಗಿನ ಇನ್ನಷ್ಟು ನಿಗೂಢ ಸತ್ಯಗಳು ಹೊರಬರದಿರಲಿ ಎಂಬ ಉದ್ದೇಶದಿಂದ ಅಲ್ಲವೇ?
ಯಡಿಯೂರಪ್ಪನವರು ಕಾಲಕಾಲಕ್ಕೆ RSS ಗೆ ದುಬಾರಿ ಕಾಣಿಕೆ ನೀಡುತ್ತಾ ಕೇಶವ ಕೃಪೆಗೆ ಪಾತ್ರರಾಗಿ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುತ್ತಾ ಬಂದಿದ್ದರೇ? ಯಡಿಯೂರಪ್ಪನವರು ಹಾಗೂ ಸಂಘದವರು ಸೇರಿ ಭ್ರಷ್ಟಾಚಾರದ ಸಹಪಂಕ್ತಿ ಭೋಜನ ಮಾಡಿದ್ದಾರೆಯೇ?
ನೋಂದಣಿಯಾಗದ ಸಂಘವು ತನ್ನ ಇತರ ಅಂಗಸಂಸ್ಥೆಗಳ ಮೂಲಕ ವಸೂಲಿ ದಂಧೆ ನಡೆಸುತ್ತದೆಯೇ?
ಯಡಿಯೂರಪ್ಪನವರಂತೆ ಇನ್ನೆಷ್ಟು ಜನ ಸಂಘಕ್ಕೆ ಅಕ್ರಮ ಹಣದ ಕಾಣಿಕೆ ಸಲ್ಲಿಸಿದ್ದಾರೆ? ಈ ಹಣ ಹವಾಲ ಮೂಲಕ ತಲುಪುತ್ತದೆಯೇ ಅಥವಾ RTGS ಮೂಲಕ ತಲುಪುತ್ತದೆಯೇ?
ಸಂಘಪರಿವಾರಕ್ಕೆ ಎಷ್ಟು ಭೂಮಿಯನ್ನು ಅಕ್ರಮದ ಮೂಲಕ ದಯಪಾಲಿಸಲಾಗಿದೆ?
RSS ನ ಈ ಎಲ್ಲಾ ವ್ಯವಹಾರಗಳು ನಿಗೂಢವಾಗಿಯೂ, ರಹಸ್ಯವಾಗಿಯೂ ಇರುವುದೇಕೆ?
ಐಟಿ, ಇಡಿ, ಸಿಬಿಐಗಳು ಈ ಅಕ್ರಮ, ಅವ್ಯವಹಾರಗಳತ್ತ ಗಮನಿಸುವುದಿಲ್ಲವೇ? ಅವುಗಳೂ ಸಂಘದ ಶಾಖೆಗಳಂತಾಗಿರುವಾಗ ಇದನ್ನು ನಿರೀಕ್ಷಿಸುವುದು ಮೂರ್ಖತನವೇ ಸರಿ ಎಂದು ಟೀಕಿಸಿದ್ದಾರೆ.
ಬಿಜೆಪಿಯ ಭ್ರಷ್ಟಾಚಾರದ ಹಣ ಸಂಘದ ಸೇವೆಗೆ ಸಲ್ಲಿಕೆಯಾಗಿರುವ ಇನ್ನೆಷ್ಟು ಪ್ರಕರಣಗಳಿವೆ ಎಂಬ ಸತ್ಯವನ್ನು ಬಯಲಿಗಿಡಬೇಕಿದೆ, ಎಷ್ಟೆಷ್ಟು ಸರ್ಕಾರದ ಹಣ “ಸಂಘ ಸಮರ್ಪಣಮಸ್ತು” ಆಗಿದೆ ಎಂಬುದನ್ನು ತಿಳಿಯಬೇಕಿದೆ, ಬಿಜೆಪಿ ಹಾಗೂ ಸಂಘದ ನಡುವಿನ ಅಕ್ರಮ ಹಾಗೂ ಅನೈತಿಕ ವ್ಯವಹಾರಗಳನ್ನು ಹೊರಗೆಳೆಯಬೇಕಿದೆ.