ನವದೆಹಲಿ: ದೇಶದ ಎಲ್ಲ ನಗರ ಪ್ರದೇಶಗಳಲ್ಲಿ ಆಂಬುಲೆನ್ಸ್ ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಆಗ್ರಹಪಡಿಸಿದ್ದಾರೆ.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನಮ್ಮ ದೇಶದಲ್ಲಿ ಪಿಜ್ಜಾ 30 ನಿಮಿಷದಲ್ಲಿ, ದಿನಸಿ ಪದಾರ್ಥಗಳು 15 ನಿಮಿಷದಲ್ಲಿ ಮನೆ ಬಾಗಿಲಿಗೆ ತಲುಪುತ್ತವೆ. ಆದರೆ, ರೋಗಿಗಳು ಆಸ್ಪತ್ರೆಗೆ ತಲುಪಲು ಸಾಧ್ಯವಾಗದೆ ಸಾವನ್ನಪಪುತ್ತಿದ್ದಾರೆ. ಈ ಬಗ್ಗೆ ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿಯು ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಆಂಬುಲೆನ್ಸ್ ಗಳು ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುತ್ತಿರುವುದರಿಂದ ರೋಗಿಗಳು ಸಾಯುತ್ತಿದ್ದಾರೆ. 2018ರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ಅಂಬುಲೆನ್ಸ್ ಗಳಿಗಾಗಿ ವಿಶೇಷ ತುರ್ತು ಮಾರ್ಗಗಳಿಲ್ಲ. ಶೇ 60ರಷ್ಟು ಆಂಬುಲೆನ್ಸ್ ಗಳು ನಿಗದಿತ ಸಮಯಕ್ಕೆ ಬರುವುದೇ ಇಲ್ಲ. ಹಸಿರು ಕಾರಿಡಾರ್ಗಳು ಮತ್ತು ಪೊಲೀಸ್ ಬೆಂಗಾವಲುಗಳ ಅನುಪಸ್ಥಿತಿಯಿಂದಾಗಿ ಅಂಬುಲೆನ್ಸ್ ಗಳು ಮತ್ತಷ್ಟು ವಿಳಂಬವಾಗುತ್ತಿವೆ. ಅಪಘಾತಕ್ಕೊಳಗಾದವರಲ್ಲಿ ಶೇ. 55ರಷ್ಟು ಜನರು ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಜಯಾ ಬಚ್ಚನ್ ಆಗ್ರಹಪಡಿಸಿದರು.

