ನವದೆಹಲಿ: ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯಲ್ಲಿ (ಐಸಿಎಚ್ ಆರ್) 14 ಕೋಟಿ ರೂಗಳ ಹಗರಣವನ್ನು ಉಲ್ಲೇಖಿಸಿ ವೃತ್ತಿಪರ ಸಂಸ್ಥೆಗಳಲ್ಲಿ ಆರ್ ಎಸ್ ಎಸ್ ವ್ಯವಸ್ಥಿತವಾಗಿ ನುಸುಳುತ್ತಿದೆ ಎಂದು ಕಾಂಗ್ರೆಸ್ ಗಂಭೀರವಾಗಿ ಆರೋಪಿಸಿದೆ.
ಹಗರಣದ ಕುರಿತು ಮಾತನಾಡಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಬಿಜೆಪಿ ಅಧಿಕಾರಕ್ಕೆ ಬಂದ 2014ರಿಂದ ವೃತ್ತಿಪರ ಸಂಸ್ಥೆಗಳಲ್ಲಿ ಆರ್ ಎಸ್ ಎಸ್ ವ್ಯವಸ್ಥಿತವಾಗಿ ನುಸುಳುತ್ತಿದೆ. ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐಸಿಎಚ್ ಆರ್) ಅದಕ್ಕೊಂದು ಉದಾಹರಣೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಐಸಿಎಚ್ ಆರ್ ನಡೆದ ಅಕ್ರಮಗಳ ಬಗ್ಗೆ ಕೇಂದ್ರ ಜಾಗೃತ ದಳ (ಸಿವಿಸಿ) ತನಿಖೆ ನಡೆಸುತ್ತಿದ್ದು, ಆರ್ಎಸ್ ಎಸ್ನ ‘ಅಖಿಲ ಭಾರತೀಯ ಇತಿಹಾಸ್ ಸಂಕಲನ್ ಯೋಜನೆ‘ (ಎಬಿಐಎಸ್ ವೈ) ಸದಸ್ಯರ ಮೇಲೆ ದೋಷಾರೋಪಣೆ ಮಾಡಿದೆ. ಇದು ರೂ.14 ಕೋಟಿ ಹಗರಣ. ಐಸಿಎಚ್ ಆರ್ಗೆ ಇದು ದೊಡ್ಡ ಮೊತ್ತವಾಗಿದೆ ಎಂದು ಹೇಳಿದ್ದಾರೆ. ಐಸಿಎಚ್ ಆರ್ ಒಂದೇ ಅಲ್ಲ, ಉನ್ನತ ವಿಶ್ವವಿದ್ಯಾಲಯಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳನ್ನು ಆರ್ ಎಸ್ ಎಸ್ ಬೆಂಬಲಿಗರು ನಾಶಪಡಿಸುತ್ತಿದ್ದಾರೆ. ಇದರಲ್ಲಿ ಅಚ್ಚರಿಪಡುವಂತದ್ದು ಏನಿಲ್ಲ ಎಂದು ಹೇಳಿದ್ದಾರೆ.
ಐಸಿಎಚ್ ಆರ್ ನಲ್ಲಿ ನಡೆದ ರೂ.14 ಕೋಟಿ ಹಗರಣವನ್ನು ಸಿವಿಸಿ ತನಿಖೆ ನಡೆಸುತ್ತಿದ್ದು, ಎಬಿಐಎಸ್ ವೈನ ಕೆಲವು ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದ್ದವು.