ದೇವರನ್ನು ರಾಜಕೀಯದಿಂದ ದೂರವಿಡಿ: ತಿರುಪತಿ ಲಡ್ಡು ವಿಚಾರದಲ್ಲಿ ಟಿಡಿಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

Most read

ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗುವ ಲಡ್ಡುಗಳನ್ನು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಿ, ದೇವರನ್ನು ರಾಜಕೀಯದಿಂದ ದೂರವಿಡುವಂತೆ ಸುಪ್ರೀಂಕೋರ್ಟ್​ ಹೇಳಿದೆ.

ಪರೀಕ್ಷೆಗೆ ಒಳಪಡಿಸಲಾದ ತುಪ್ಪವು ತಿರಸ್ಕರಿಸಿದ ಮಾದರಿ ಎಂದು ಲ್ಯಾಬ್ ವರದಿಗಳು ಸೂಚಿಸುತ್ತವೆ ಎಂದು ನ್ಯಾಯಾಲಯ ಆಂಧ್ರ ಸರ್ಕಾರದ ವಕೀಲರಿಗೆ ತಿಳಿಸಿದೆ.

ಮಾನದಂಡಗಳಿಗೆ ಹೊಂದಿಕೆಯಾಗದ ತುಪ್ಪವನ್ನು ಲಡ್ಡು ತಯಾರಿಸಲು ಬಳಸಲಾಗಿದೆಯೇ ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರನ್ನು ಕೇಳಿದರು. ಇದು ತನಿಖೆಯಲ್ಲಿದೆ ಎಂದು ಲೂತ್ರಾ ಹೇಳಿದ್ದಾರೆ.

ಹಾಗಾದರೆ ತಿರುಮಲ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬುದು ಸ್ಪಷ್ಟವಾಗದಿರುವಾಗ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಹೇಳಿಕೆ ನೀಡುವ ಅಗತ್ಯ ಏನಿತ್ತು. ಕನಿಷ್ಠ ದೇವರುಗಳನ್ನಾದರೂ ರಾಜಕೀಯದಿಂದ ದೂರವಿಡಬೇಕೆಂದು ನಾವು ನಿರೀಕ್ಷಿಸುತ್ತೇವೆ ಎಂದು ಕಟುವಾಗಿ ಪ್ರಶ್ನಿಸಿದೆ.

ಪ್ರಸಾದ ತಯಾರಿಕೆಗೆ ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಪುರಾವೆ ನೀಡುವಂತೆಯೂ ಸುಪ್ರೀಂಕೋರ್ಟ್ ಕೋರಿದೆ . ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ವರ್ಗಾಯಿಸಲು ನ್ಯಾಯಾಲಯ ನಿರ್ಧರಿಸಿದೆ.

ತಿರುಪತಿ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿಕೆ ನೀಡಿದ ನಂತರ ತಿರುಪತಿ ಪ್ರಸಾದದ ಬಗ್ಗೆ ಗಲಾಟೆ ಪ್ರಾರಂಭವಾಯಿತು.

ಇದಕ್ಕೂ ಮುನ್ನ, ವೈಎಸ್‌ಆರ್‌ಸಿಪಿ ನಾಯಕ ಜಗನ್ ಮೋಹನ್ ರೆಡ್ಡಿ ಮಾತನಾಡಿ, ತಿರುಪತಿ ಲಡ್ಡು ಪ್ರಸಾದದ ಬಗ್ಗೆ ಸಿಎಂ ನಾಯ್ಡು ನೀಡಿರುವ ಹೇಳಿಕೆ ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ತುಪ್ಪ ಖರೀದಿ ಇ-ಟೆಂಡರ್ ದಶಕಗಳಿಂದ ನಡೆಯುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ರಾಕ್ಷಸ ಆಳ್ವಿಕೆ ಮುಂದುವರಿದಿದೆ, ಮುಂಬರುವ ತಿರುಮಲ ದೇಗುಲಕ್ಕೆ ನನ್ನ ಭೇಟಿಗೆ ಅಡ್ಡಿಪಡಿಸಲು ಸರಕಾರ ಯತ್ನಿಸುತ್ತಿದೆ. ದೇವಾಲಯ ದರ್ಶನಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವೈಎಸ್‌ಆರ್‌ಸಿಪಿ ಮುಖಂಡರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ಆಂಧ್ರ ಸಿಎಂ ನಾಯ್ಡು ಅವರು ರಾಜಕೀಯ ಗಮನವನ್ನು ಬೇರೆಡೆ ಸೆಳೆಯಲು ಲಡ್ಡು ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದರು.

More articles

Latest article