ಬೆಂಗಳೂರು: ಆರ್ ಎಸ್ ಎಸ್ ಅಸ್ತಿತ್ವಕ್ಕೆ ಬಂದಿದ್ದು ಕೇವಲ ನೂರು ವರ್ಷಗಳ ಹಿಂದೆ, ಆದರೆ ಸಾವಿರಾರು ವರ್ಷಗಳಿಂದ ಹಿಂದೂ ಎಂದು ಗುರುತಿಸಿಕೊಂಡಿರುವ ಧರ್ಮಾಚರಣೆ ಅಸ್ತಿತ್ವದಲ್ಲಿದೆ. ಈ ಸತ್ಯ ನಿಮಗೆ ತಿಳಿದಿಲ್ಲವೇ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮುಖಂಡ ಸಂಸದ ಜಗದೀಶ ಶೆಟ್ಟರ್ ಅವರಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ನಾಯಕರಿಗೆ RSS ಹೊಗಳುವುದು ಅನಿವಾರ್ಯವಾಗಿದೆ. RSS ಅವರಿಗಂತೂ ಬಸವಣ್ಣನವರ ತತ್ವದಲ್ಲಿ ನಂಬಿಕೆ ಇಲ್ಲ. ತಮಗೂ ಇಲ್ಲವೇ? ನಿಜವಾಗಿಯೂ ಬಸವ ತತ್ವದಲ್ಲಿ ನಂಬಿಕೆ ಇರುವವರು ಆರ್ಎಸ್ಎಸ್ ಅನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಹಿಂದೆ, ಇಂದು, ಎಂದಿಗೂ ಈ ಭಾರತ ಜಾತ್ಯತೀತ ತತ್ವಗಳ ನೆಲವಾಗಿದೆ, ಮುಂದೆಯೂ ಜಾತ್ಯತೀತ ನೆಲವಾಗಿಯೇ ಇರಲಿದೆ.
ಇಷ್ಟಕ್ಕೂ, ಹಿಂದೂ ಧರ್ಮೋದ್ದಾರದಲ್ಲಿ, ಈ ದೇಶದ ಏಳಿಗೆಯಲ್ಲಿ RSS ನೀಡಿದ ಕನಿಷ್ಠ ಹತ್ತು ಕೊಡುಗೆಗಳನ್ನು ತಿಳಿಸಿ ಎಂದು ಜಗದೀಶ ಶೆಟ್ಟರ್ ಅವರಿಗೆ ಸವಾಲು ಹಾಕಿದ್ದಾರೆ.