ಬೆಂಗಳೂರು : ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ಸಾರ್ವಜನಿಕರಿಂದ ಹಾಗೂ ನಿವೇಶನ ಮಾಲೀಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರ ಸೂಚನೆ ಮೇರೆಗೆ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರ ನೇತೃತ್ವದಲ್ಲಿ ಖಾಲಿ ನಿವೇಶನಗಳ ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಂಡಿದ್ದು, ನಿವೇಶನಗಳ ಮಾಲೀಕರು ಸ್ವಯಂಪ್ರೇರಿತರಾಗಿ ಕೈಜೋಡಿಸುತ್ತಿದ್ದಾರೆ.
ಖಾಲಿ ನಿವೇಶನಗಳ ಸ್ವಚ್ಛತಾ ಪ್ರಗತಿ ವಿವರ
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,847 ಖಾಲಿ ನಿವೇಶನಗಳನ್ನು ಗುರುತಿಸಲಾಗಿದ್ದು, ಈವರೆಗೆ 300 ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗಾಗಿ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆಯ ಜಾಗೃತಿ ಹಾಗೂ ನೋಟಿಸ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ ಇದುವರೆಗೆ 1,847 ಖಾಲಿ ನಿವೇಶನಗಳ ಪೈಕಿ 815 ನಿವೇಶನಗಳನ್ನು ಸ್ವತಃ ಮಾಲೀಕರೇ ಸ್ವಚ್ಛಗೊಳಿಸಿದ್ದಾರೆ.
ಮುಂದುವರೆದು ನೋಟಿಸ್ ಗೆ ಸ್ಪಂದಿಸದ 12 ಖಾಲಿ ನಿವೇಶನಗಳನ್ನು ಪಾಲಿಕೆ ವತಿಯಿಂದಲೇ ಸ್ವಚ್ಛಗೊಳಿಸಲಾಗಿದೆ. ಪ್ರಸ್ತುತ ಇನ್ನೂ 1,020 ನಿವೇಶನಗಳ ಸ್ವಚ್ಛತೆ ಬಾಕಿಯಿದ್ದು, ಉಳಿದ 738 ನಿವೇಶನಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಆಯುಕ್ತರು ತಿಳಿಸಿದರು.
ವಿಭಾಗವಾರು ಕಾರ್ಯಾಚರಣೆ ವಿವರ
ಬಿಟಿಎಂ ವಿಭಾಗದಲ್ಲಿ ಗುರುತಿಸಲಾದ 104 ಖಾಲಿ ನಿವೇಶನಗಳ ಪೈಕಿ 27 ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, 10 ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸಿದ್ದರೆ, 2 ನಿವೇಶನಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಲಾಗಿದೆ. ಇನ್ನೂ 92 ಖಾಲಿ ನಿವೇಶನಗಳ ಸ್ವಚ್ಛತೆ ಬಾಕಿಯಿರುತ್ತದೆ.
ಜಯನಗರ ವಿಭಾಗದ 50 ಖಾಲಿ ನಿವೇಶನಗಳಲ್ಲಿ 34 ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, 19 ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸಿದ್ದು, 2 ನಿವೇಶನಗಳನ್ನು ಪಾಲಿಕೆ ವತಿಯಿಂದ ಸ್ವಚ್ಛಗೊಳಿಸಲಾಗಿರುತ್ತದೆ. ಹಾಗೂ 29 ಖಾಲಿ ನಿವೇಶನಗಳ ಸ್ವಚ್ಛತೆ ಪ್ರಗತಿಯಲ್ಲಿದೆ.
ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಟ್ಟು 1,136 ಖಾಲಿ ನಿವೇಶನಗಳ ಪೈಕಿ 160 ಮಾಲೀಕರಿಗೆ ನೋಟಿಸ್ ಜಾರಿಯಾಗಿದ್ದು, 522 ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸಿದ್ದಾರೆ. 3 ನಿವೇಶನಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಲಾಗಿದ್ದು, 611 ನಿವೇಶನಗಳ ಸ್ವಚ್ಛತೆ ಬಾಕಿ ಇರುತ್ತದೆ.
ಪದ್ಮನಾಭನಗರ ವಿಭಾಗದ 80 ಖಾಲಿ ನಿವೇಶನಗಳ ಪೈಕಿ 18 ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, 30 ನಿವೇಶನಗಳನ್ನು ಮಾಲೀಕರು ಹಾಗೂ 4 ನಿವೇಶನಗಳನ್ನು ಪಾಲಿಕೆ ಸ್ವಚ್ಛಗೊಳಿಸಿದ್ದು, 46 ನಿವೇಶನಗಳ ಸ್ವಚ್ಛತೆ ಬಾಕಿ ಇರುತ್ತದೆ.
ಬೊಮ್ಮನಹಳ್ಳಿ ವಿಭಾಗದಲ್ಲಿ ಗುರುತಿಸಲಾದ 477 ಖಾಲಿ ನಿವೇಶನಗಳಲ್ಲಿ 61 ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, 234 ನಿವೇಶನಗಳನ್ನು ಮಾಲೀಕರೇ ಸ್ವಚ್ಛಗೊಳಿಸಿದ್ದರೆ, 1 ನಿವೇಶನವನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಲಾಗಿದೆ. ಇನ್ನೂ 242 ನಿವೇಶನಗಳ ಸ್ವಚ್ಛತೆ ಬಾಕಿ ಇರುತ್ತದೆ.
ಕಾನೂನು ನಿಯಮಗಳ ಉಲ್ಲೇಖ ಹಾಗೂ ಎಚ್ಚರಿಕೆ
ಘನತ್ಯಾಜ್ಯ ನಿರ್ವಹಣಾ ನಿಯಮಗಳು-2016ರ ನಿಯಮ 15(2), ಘನತ್ಯಾಜ್ಯ ನಿರ್ವಹಣಾ ಉಪ-ನಿಯಮಗಳು-2020ರ ಉಪ-ನಿಯಮ 18(1)(a), 18(1)(b) ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024ರ ಸೆಕ್ಷನ್ 274(1), 285(2) ಮತ್ತು 290ರ ಅನ್ವಯ ಖಾಲಿ ನಿವೇಶನಗಳಲ್ಲಿ ಕಸ ಸುಡುವುದು ಮತ್ತು ತ್ಯಾಜ್ಯ ಎಸೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪಾಲಿಕೆಯಿಂದ ತೆರವುಗೊಳಿಸಲಾಗುವ ನಿವೇಶನಗಳ ಸಂಪೂರ್ಣ ಸ್ವಚ್ಛತಾ ವೆಚ್ಚ, ಕಸ ಸಾಗಾಣಿಕೆ ವೆಚ್ಚ ಹಾಗೂ ನಿಯಮಾನುಸಾರ ದಂಡವನ್ನು ಸಂಬಂಧಪಟ್ಟ ಮಾಲೀಕರ ಆಸ್ತಿ ತೆರಿಗೆಯೊಂದಿಗೆ (Property Tax) ಸೇರಿಸಿ ವಸೂಲಿ ಮಾಡಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

