ಬೆಂಗಳೂರು (ಏಪ್ರಿಲ್ 3, 2026): ಕರ್ನಾಟಕ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯದ ಅಂಕಗಳನ್ನು 625 ರಿಂದ 525 ಕ್ಕೆ ಕಡಿತಗೊಳಿಸಿ, ಕೇವಲ ‘ಗ್ರೇಡ್’ ನೀಡಲು ನಿರ್ಧರಿಸಿರುವ ಬೆನ್ನಲ್ಲೇ, ಭಾಷೆಗಳ ಕುರಿತಾದ ಸುಪ್ರೀಂ ಕೋರ್ಟ್ನ ಹಳೆಯ ತೀರ್ಪೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಹಾಗಾದರೆ, ಸುಪ್ರೀಂ ಕೋರ್ಟ್ ನಿಜವಾಗಿಯೂ ಹಿಂದಿ ಮತ್ತು ಉರ್ದು ಒಂದೇ ಎಂದು ಹೇಳಿದೆಯಾ? ಈ ಕುರಿತ ಸತ್ಯಾಸತ್ಯತೆ ಇಲ್ಲಿದೆ.
2025ರ ಏಪ್ರಿಲ್ 15ರಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ‘ವರ್ಷಾತಾಯಿ ವರ್ಸಸ್ ಮಹಾರಾಷ್ಟ್ರ ಸರ್ಕಾರ’ ಪ್ರಕರಣದಲ್ಲಿ ಈ ಮಹತ್ವದ ತೀರ್ಪನ್ನು ನೀಡಿತ್ತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಹಿಂದಿ ಮತ್ತು ಉರ್ದು ಭಾಷೆಗಳ ವ್ಯಾಕರಣ, ವಾಕ್ಯರಚನೆ ಮತ್ತು ಧ್ವನಿವಿಜ್ಞಾನ (Phonology) ಒಂದೇ ಆಗಿವೆ. ಕೇವಲ ಲಿಪಿಗಳು ಮಾತ್ರ ಬೇರೆಯಾಗಿವೆ ಹಿಂದಿಗೆ ದೇವನಾಗರಿ, ಉರ್ದುವಿಗೆ ನಸ್ತಲಿಕ್. ಲಿಪಿಗಳು ಬದಲಾದಾಕ್ಷಣ ಭಾಷೆ ಬದಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ಹೇಳಿದೆ.
ಹಿಂದಿಯನ್ನು ಹಿಂದೂಗಳಿಗೆ ಮತ್ತು ಉರ್ದುವನ್ನು ಮುಸ್ಲಿಮರಿಗೆ ಸೀಮಿತಗೊಳಿಸುವುದು “ವಾಸ್ತವದಿಂದ ದೂರವಿರುವ ಶೋಚನೀಯ ಸಂಗತಿ” ಎಂದು ಕೋರ್ಟ್ ಟೀಕಿಸಿದೆ. ಇದು ಬ್ರಿಟಿಷರ ಕಾಲದ ‘ಒಡೆದು ಆಳುವ’ ನೀತಿಯ ಪ್ರತಿಫಲನ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.ಉರ್ದು ಭಾಷೆಯು ಹಿಂದಿ ಮತ್ತು ಮರಾಠಿಯಂತೆ ಭಾರತದಲ್ಲೇ ಹುಟ್ಟಿದ ಇಂಡೋ-ಆರ್ಯನ್ ಭಾಷೆಯಾಗಿದೆ. ಇದು ಹೊರಗಿನಿಂದ ಬಂದ “ಪರಕೀಯ” ಭಾಷೆಯಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ದೈನಂದಿನ ಜೀವನದಲ್ಲಿ ನಾವು ಮಾತನಾಡುವ ಹಿಂದಿಯಲ್ಲಿ ಉರ್ದು ಪದಗಳನ್ನು ಬಳಸದೆ ಸಂಭಾಷಣೆ ನಡೆಸಲು ಸಾಧ್ಯವಿಲ್ಲ. ಉರ್ದುವಿನ ವಿರುದ್ಧ ಮಾತನಾಡುವುದು ಪರೋಕ್ಷವಾಗಿ ಹಿಂದಿಯನ್ನೇ ಟೀಕಿಸಿದಂತೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ಉರ್ದು ಭಾಷೆಯನ್ನು “ಹಿಂದೂಸ್ತಾನಿ ಸಂಸ್ಕೃತಿಯ ಅತ್ಯುತ್ತಮ ಮಾದರಿ” ಎಂದು ಬಣ್ಣಿಸಿದ ನ್ಯಾಯಾಲಯ, ಭಾಷೆಯು ಜನರನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು ಎಂದು ಆಶಯ ವ್ಯಕ್ತಪಡಿಸಿ. 2025ರ ಏಪ್ರಿಲ್ 15ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
https://api.sci.gov.in/supremecourt/2024/24812/24812_2024_12_1501_60900_Judgement_15-Apr-2025.pdf
ವರ್ಷಾತಾಯಿ ವರ್ಸಸ್ ಮಹಾರಾಷ್ಟ್ರ ಕೇಸ್ನ ಹಿನ್ನಲೆ ಏನು?
ಈ ವಿವಾದವು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಮುನ್ಸಿಪಲ್ ಕೌನ್ಸಿಲ್ ತನ್ನ ಅಧಿಕೃತ ನಾಮಫಲಕಗಳು ಮತ್ತು ಮಾರ್ಗಸೂಚಿಗಳಲ್ಲಿ ಮರಾಠಿಯ ಜೊತೆಗೆ ಉರ್ದು ಭಾಷೆಯನ್ನು ಬಳಸಿದ್ದರಿಂದ ಪ್ರಾರಂಭವಾಯಿತು. ಇದನ್ನು ಪ್ರಶ್ನಿಸಿ ವರ್ಷಾತಾಯಿ ಎಂಬುವವರು, “ಮಹಾರಾಷ್ಟ್ರದ ಏಕೈಕ ಅಧಿಕೃತ ಭಾಷೆ ಮರಾಠಿ ಮಾತ್ರ, ಹೀಗಾಗಿ ಉರ್ದು ಬಳಸುವುದು ಕಾನೂನುಬಾಹಿರ” ಎಂದು ವಾದಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಕರ್ನಾಟಕದ ಎಸ್ಎಸ್ಎಲ್ಸಿ ಬದಲಾವಣೆಗೆ ಇದರ ಸಂಬಂಧವೇನು?
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹಿಂದಿಯನ್ನು ಕೇವಲ ಒಂದು ಸಂವಹನ ಮಾಧ್ಯಮವಾಗಿ ಕಲಿಯುವುದು ಸಾಕು, ಆದರೆ ಅದರ ಅಂಕಗಳು ವಿದ್ಯಾರ್ಥಿಯ ಒಟ್ಟು ‘ಪರ್ಸೆಂಟೇಜ್’ ಮೇಲೆ ಪರಿಣಾಮ ಬೀರಬಾರದು ಎಂಬುದು ಕನ್ನಡಿಗರ ಬಹುಕಾಲದ ಬೇಡಿಕೆಯಾಗಿತ್ತು. ಸರ್ಕಾರದ ಈ ಕ್ರಮವು ಕನ್ನಡ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಬಗ್ಗೆ ಯಾವಾಗಲೂ ಆತಂಕವಿರುತ್ತದೆ. ಪರೀಕ್ಷೆಯಲ್ಲಿ ಹಿಂದಿ ಅಂಕಗಳನ್ನು ಕಡ್ಡಾಯಗೊಳಿಸದಿರುವುದು, ಭಾಷಾ ಸ್ವಾತಂತ್ರ್ಯವನ್ನು ಗೌರವಿಸಿದಂತೆ ಮತ್ತು ಯಾವುದೇ ಒಂದು ಭಾಷೆಯನ್ನು ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳ ಮೇಲೆ ಹೇರುವುದನ್ನು ತಡೆದಂತೆ ಆಗುತ್ತದೆ.
ಎಸ್ಎಸ್ಎಲ್ಸಿ ಹಂತದಲ್ಲಿ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಂತಹ ಕಠಿಣ ವಿಷಯಗಳ ಜೊತೆಗೆ ಮೂರು ಭಾಷೆಗಳನ್ನು ಸಮಾನವಾಗಿ ಓದಬೇಕಾಗುತ್ತದೆ. ಹಿಂದಿ ವಿಷಯದಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವುದರಿಂದ, ವಿದ್ಯಾರ್ಥಿಗಳು ತಮ್ಮ ಮುಖ್ಯ ವಿಷಯಗಳ ಮೇಲೆ ಹೆಚ್ಚು ಗಮನಹರಿಸಲು ಮತ್ತು ಹೆಚ್ಚಿನ ಅಂಕ ಗಳಿಸಲು ಅನುಕೂಲವಾಗುತ್ತದೆ.
ಸುಪ್ರೀಂ ಕೋರ್ಟ್ ತನ್ನ 2025ರ ತೀರ್ಪಿನಲ್ಲಿ “ಹಿಂದಿ ಮತ್ತು ಉರ್ದು ಒಂದೇ” ಎಂದು ಹೇಳುವ ಮೂಲಕ ಭಾಷೆಯ ಸಾಂಸ್ಕೃತಿಕ ಮಹತ್ವವನ್ನು ತಿಳಿಸಿದೆ. ಕರ್ನಾಟಕ ಸರ್ಕಾರವು ಭಾಷೆಯನ್ನು ಪಠ್ಯಕ್ರಮದಿಂದ ತೆಗೆದುಹಾಕುತ್ತಿಲ್ಲ, ಬದಲಾಗಿ ಅದರ ಪರೀಕ್ಷಾ ವಿಧಾನವನ್ನು ಬದಲಾಯಿಸುತ್ತಿದೆ ಅಷ್ಟೆ. ಅದನ್ನು ಒಳ್ಳೆ ಮನಸ್ಸಿನಿಂದ ಸ್ವೀಕರಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ.

