ಬೆಂಗಳೂರು:ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಚುನಾವಣಾ ಅಕ್ರಮ ನಡೆದಿದ್ದು ಭಾರಿ ಪ್ರಮಾಣದಲ್ಲಿ ಮತಗಳ ಕಳವಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಬಿಹಾರ ಚುನಾವಣೆಯ ಹೊಸ್ತಿಲಲ್ಲೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಈ ಆರೋಪ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.
ಹಾಗೆಯೇ ಆ ಕ್ಷೇತ್ರ ಯಾವುದಿರಬಹುದು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಕರ್ನಾಟಕದಲ್ಲಿ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಆಳವಾದ ಅಧ್ಯಯನ ನಡೆಸಲಾಗಿದೆ. ಇಡೀ ಕ್ಷೇತ್ರದ ಮತದಾರರ ಪಟ್ಟಿಯನ್ನು ಪಡೆದುಕೊಂಡಿದ್ದೆವು. ಕಾಗದ ರೂಪದಲ್ಲಿದ್ದ ಆ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ವಿಶ್ಲೇಷಣೆಗೆ ಒಳಪಡಿಸಿದ್ದೆವು. ಇದಕ್ಕಾಗಿ 6 ತಿಂಗಳ ಸಮಯ ಹಿಡಿಯಿತು. ಶೀಘ್ರದಲ್ಲೇ ಚುನಾವಣಾ ಆಯೋಗ ಮತ್ತು ಸಾರ್ವಜನಿಕರ ಮುಂದೆ ಈ ಅಕ್ರಮವನ್ನು ಬಹಿರಂಗಪಡಿಸುವುದಾಗಿ ಅವರು ಘೋಷಿಸಿದ್ದಾರೆ.
ಮತದಾರರ ಪರಿಷ್ಕರಣೆ ಕುರಿತು ಅಧ್ಯಯನ ನಡೆಸುವಾಗ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ಹೊಸ ಮತದಾರರನ್ನು ಹೇಗೆ ಸೇರ್ಪಡೆ ಮಾಡಲಾಗುತ್ತದೆ? ಎಲ್ಲಿಂದ ಕರೆತರುತ್ತಾರೆ? ಎಂಬ ಮಾಹಿತಿ ಮತ್ತು ಕಾರ್ಯವಿಧಾನ ಅರ್ಥವಾಗಿದೆ ಎಂದೂ ತಿಳಿಸಿದ್ದರು. ಆದರೆ ಕರ್ನಾಟಕದ ಆ ಕ್ಷೇತ್ರ ಯಾವುದು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ಈ ಆರೋಪವು ದೇಶಾದ್ಯಂತ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಕರ್ನಾಟಕದ ಆ ಒಂದು ಕ್ಷೇತ್ರ ಬೆಂಗಳೂರು ಸೆಂಟ್ರಲ್ ಇರಬಹುದು ಎಂದು ಊಹಿಸಲಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ 32,000 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಸೋಲಿಸಿದ್ದರು. ಈ ಲೋಕಸಭಾ ಕ್ಷೇತ್ರದ ಶಿವಾಜಿನಗರ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದಲ್ಲಿ ಮತದಾರ ಹೆಸರುಗಳನ್ನು ತೆಗೆದು ಹಾಕಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೆಂಟ್ರಲ್ ಇರಬಹುದು ಎಂದು ಊಹಿಸಲಾಗಿದೆ.