ಚೆನ್ನೈ: ಜಾರಿ ನಿರ್ದೇಶನಾಲಯವು (ಇ.ಡಿ.) ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಾಕು ನಾಯಿ ಇದ್ದಂತೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಆರೋಪ ಮಾಡಿದ್ದಾರೆ. ಛತ್ತೀಸಗಢ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಮಗ ಚೈತನ್ಯ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸುತ್ತಿರುವ ಸಂಬಂಧ ಮಾಣಿಕ್ಕಂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಜಾರಿ ನಿರ್ದೇಶನಾಲಯವು ಮೋದಿ ಹಾಗೂ ಅಮಿತ್ ಶಾ ಅವರ ಸಾಕು ನಾಯಿಯಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅವರು ಆ ನಾಯಿಯನ್ನು ಎಲ್ಲಿಗೆ ಬೇಕಾದರೂ ಕಳುಹಿಸಬಲ್ಲರು. ಬಘೇಲ್ ಅವರು ಕಾಂಗ್ರೆಸ್ ಪ್ರಬಲ ನಾಯಕರಾಗಿದ್ದು, ಇಂತಹ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಛತ್ತೀಸಗಢದ ಜನರು ಅವರೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡಿನ ವಿರುಧುನಗರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಾಣಿಕ್ಕಂ, ಬಿಜೆಪಿ ಹಾಗೂ ಆರ್ಎಸ್ಎಸ್ ನಡೆಸುತ್ತಿರುವ ಇಂತಹ ನಕಲಿ ನಿರೂಪಣೆಗಳು ಯಶಸ್ವಿಯಾಗುವುದಿಲ್ಲ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ಹಿಂದುಳಿದ ವರ್ಗದ ನಾಯಕ ಜನರೊಂದಿಗೆ ನಿಂತದ್ದಕ್ಕೆ ಮತ್ತು ಅವರ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದಕ್ಕಾಗಿ ಬಿಜೆಪಿ ಅವರನ್ನು ಗುರಿಯಾಗಿಸಿದೆ ಎಂದು ಆರೋಪಿಸಿದ್ದಾರೆ.
ಭೂಪೇಶ್ ಬಘೇಲ್ ಅವರು ಛತ್ತೀಸಗಢದ ಮುಖ್ಯಮಂತ್ರಿಯಾಗಿದ್ದಾಗ 2019–2022ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಬಕಾರಿ ಹಗರಣ ಸಂಬಂಧ ಇ.ಡಿ. ತನಿಖೆ ನಡೆಸುತ್ತಿದೆ. ಚೈತನ್ಯ ಬಘೇಲ್ ಹಾಗೂ ಅವರೊಂದಿಗೆ ನಂಟು ಹೊಂದಿರುವ ಇತರರಿಗೆ ಸೇರಿದ ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಇಂದು (ಮಾ.10) ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೂ. 205 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಇ.ಡಿ. ಈವರೆಗೆ ಮುಟ್ಟುಗೋಲು ಹಾಕಿಕೊಂಡಿದೆ.