ಟೊಮೋಟೋ ಟಚ್ ಮಾಡಬೇಡಿ! ಶಾಕ್ ಹೊಡೆಯುತ್ತೆ!

Most read

ಟೊಮೆಟೊ ಇಲ್ಲದೆ ಅಡುಗೆ ಅಸಾಧ್ಯ. ಯಾವುದೇ ಊಟ, ತಿಂಡಿ ಸಾಂಬಾರ್ ಮಾಡಿದರೂ ಟೊಮೆಟೊ ಇರಲೇಬೇಕು. ಒಮ್ಮೊಮ್ಮೆ ಈರುಳ್ಳಿ ಕಣ್ಣೀರು ತರಿಸುವ ಹಾಗೆ ಬೆಲೆ ಏರಿಕೆಯಾಗಿ ಟೊಮೆಟೊ ಕೂಡಾ ಗೃಹಿಣಿಯರ ಪಾಲಿಗೆ ಹುಳಿಯಾಗಿದೆ. ಟೊಮೆಟೊ ಬೆಲೆ ಕೇಳಿದರೆ ಬೆಚ್ಚಿ ಬೀಳಬೇಕು. ಪ್ರತಿ ಕೆಜಿ ಟೊಮೇಟೊ ಬೆಲೆ 80ರಿಂದ 100 ರೂ. ಗೆ ಏರಿಕೆಯಾಗಿದ್ದು ಟೊಮೆಟೊ ಬಾಂಬ್ ರೀತಿ ಕಾಣಲಾರಂಭಿಸಿದೆ.


ಟೊಮೆಟೊ ಬೆಲೆ ಶತಕ ದಾಟಲು ಹಲವಾರು ಕಾರಣಗಳಿವೆ. ಇಳುವರಿ ಕುಸಿದಿದ್ದು ಮೊದಲ ಕಾರಣವಾದ್ರೆ. ರಫ್ತು ನಿಂತು ಹೋಗಿದ್ದು ಮತ್ತು ಟೊಮೆಟೊಗೆ ಹೊಸ ರೋಗ ಕಾಣಿಸಿಕೊಂಡಿದ್ದು ಎರಡು ಮತ್ತು ಮೂರನೇ ಕಾರಣಗಳಾಗಿವೆ.


ಟೊಮೆಟೊ ಬೆಲೆ ಸ್ಥಿರವಾಗಿಲ್ಲ. ಕಳೆದ ಎರಡು ಮೂರು ವರ್ಷಗಳಿಂದ ಬೆಲೆಯಲ್ಲಿ ಏರಿಳಿತಗಳು ಹೆಚ್ಚಾಗಿ ಕಂಡು ಬಂದಿವೆ. ಅಡುಗೆ ಮನೆಗೆ ಅನಿವಾರ್ಯವಾಗಿರುವ ಟೊಮೆಟೊ ಬೆಲೆ ಕನಿಷ್ಠ 10 ರೂ.ಗೂ ಇಳಿದಿದೆ. ಹಾಗೆಯೇ ಶತಕದ ಗಡಿ ದಾಟಿಯೂ ಇದೆ. ಕೆಲವು ತಿಂಗಳಿನಿಂದ ಟೊಮೆಟೊ ಬೆಲೆ ಸ್ಥಿರವಾಗಿತ್ತು. ಕುಸಿದಿರಲೂ ಇಲ್ಲ. ಏರಿಕೆ ಕಂಡಿರಲೂ ಇಲ್ಲ. ಆದರೆ ಕಳೆದ ಎರಡು ವಾರಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೊ ಸರಬರಾಜು ಕಡಿಮೆಯಾಗಿದ್ದು, ಪ್ರತಿ ಕೆಜಿ ಟೊಮೇಟೊ ಬೆಲೆ 100 ರೂ. ಗೆ ತಲುಪಿದೆ.

ಎಂದಿನಂತೆ ರೈತರಿಗೆ ಲಾಭವಿಲ್ಲದ್ದರೂ ಭಾರತೀಯ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುವುದೇ ಹೆಚ್ಚು. ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಕೆಜೆ ಟೊಮೆಟೊಗೆ 40 ರೂ. ನಿಗದಿಯಾಗಿದ್ದರೆ ಗ್ರಾಹಕರಿಗೆ ಪ್ರತಿ ಕೆಜಿಗೆ 70-90 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ಆನ್ ಲೈನ್ ನಲ್ಲಿ ಕೆಜಿಗೆ 80-100 ರೂ ವರೆಗೂ ಮಾರಾಟ ಮಾಡುತ್ತಿರುವುದಾಗಿಯೂ ತಿಳಿದು ಬಂದಿದೆ.

ಕಳೆದ ಮೂರು ವಾರಗಳಿಂದ ಟೊಮೆಟೊ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಭಾರಿ ಮಳೆಯಿಂದಾಗಿ ಕಳೆದ ಎರಡು ತಿಂಗಳಿನಿಂದ ರೈತರು ಟೊಮೆಟೊ ಬೆಳೆದಿಲ್ಲ. ಜೊತೆಗೆ ಟೊಮೆಟೊ ಬೆಳೆಗೆ ರೋಗ ಕಾಣಿಸಿಕೊಂಡಿದ್ದು, ಉತ್ಪಾದನೆಯಲ್ಲಿ ಕುಸಿತವಾಗಿದೆ. ಈ ಕಾರಣಗಳಿಗಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಪೂರೈಕೆಯಲ್ಲಿ ಕುಸಿತವಾಗಿದೆ ಎಂದು ಹೋಲ್ ಸೇಲ್ ಮಾರಾಟಗಾರೊಬ್ಬರು ಹೇಳುತ್ತಾರೆ. ಜೊತೆಗೆ ದಸರಾ ಆರಂಭವಾಗಿದ್ದು, ಸಧ್ಯಕ್ಕೆ ಬೆಲೆ ಇಳಿಯುದಿಲ್ಲ. ದಸರಾ ಮುಗಿದ ನಂತರ ಟೊಮೇಟೊ ಬೆಲೆ ಇಳಿಯಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಕೇವಲ ಭಾರಿ ಮಳೆಯ ಕಾರಣಕ್ಕೆ ಮಾತ್ರ ಬೆಲೆ ಹೆಚ್ಚಳವಾಗಿಲ್ಲ. ಕಳೆದ ಎರಡು ಮೂರು ವರ್ಷಗಳಿಂದ ಟೊಮೆಟೊಗೆ ಒಂದಲ್ಲ ಒಂದು ರೋಗ ತಗುಲುತ್ತಿದೆ. ಇದರಿಂದಲೂ ಇಳುವರಿ ಕಡಿಮೆಯಾಗಿದೆ. ಐದಾರು ವರ್ಷಗಳಿಂದ ಟೊಮೆಟೊ ಬೆಳೆಯನ್ನು ನಾಶ ಮಾಡುವ ಬ್ಲೈಟ್ ಎಂಬ ರೋಗ ಮತ್ತು
ಚುಕ್ಕಿ ರೋಗ ನಿರಂತರವಾಗಿ ಕಾಡುತ್ತಿದೆ. ಇದೀಗ ಬಿಂಗಿ ಎಂಬ ಹೊಸ ರೋಗ ಕಾಣಿಸಿಕೊಂಡಿದ್ದು ಇದು ಟೊಮೆಟೊ ಹೂ ಬಿಡುವಾಗ ಕಾಣಿಸಿಕೊಳ್ಳುತ್ತದೆ. ಇದರಿದ ಶೇ.80-90ರಷ್ಟು ಇಳುವರಿ ಕಡಿಮೆಯಾಗುತ್ತದೆ ಎಂದು ಬೆಳೆಗಾರರು ಅಲವತ್ತುಕೊಳ್ಳುತ್ತಾರೆ.

ಉತ್ತಮ ಬೆಲೆ ಸಿಗುತ್ತದೆ ಎಂದು ಕೋಲಾರದ ಬಹುತೇಕ ರೈತರು ಟೊಮೆಟೊ ಬೆಳೆಯಲು ಆರಂಭಿಸಿದ್ದರು. ಇದಕ್ಕಾಗಿ ಹೆಚ್ಚಿನ ಬಂಡವಾಳವನ್ನೂ ಹೂಡಿದ್ದರು. ಆದರೆ ಇಳುವರಿಯಲ್ಲಿ ಕುಂಠಿತವಾಯಿತು. ಅಚ್ಚರಿ ಎಂಬಂತೆ ಟೊಮೇಟೊ ಜೀವಿತಾವಧಿ 48 ಗಂಟೆಗಳಿಗೆ ಕುಸಿದಿದ್ದು, ರಫ್ತು ಮಾಡಲು ಸಾಧ್ಯವಾಗಿಲ್ಲ. ಬಹುತೇಕ ರೈತರು ಪಾಕಿಸ್ತಾನ, ಬಾಂಗ್ಲಾದೇಶ ಶ್ರೀಲಂಕಾ ಮತ್ತಿತರ ನೆರೆಯ ದೇಶಗಳು ಮತ್ತು ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ಕಳುಹಿಸುತ್ತಿದ್ದರು. ಆದರೆ ಈಗ ಟೊಮೆಟೊ ಬೇಗ ಕೆಡುತ್ತಿರುವುದರಿಂದ ಇಲ್ಲಿಯೇ ಉಳಿದಿದೆ. ರೈತರಿಗೆ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ ಎಂದು ರೈತ ಸಂಘದ ಮುಖಂಡರೊಬ್ಬರು ವಿವರಿಸುತ್ತಾರೆ.

ಹವಾಮಾನ ವೈಪರೀತ್ಯದಿಂದ ಟೊಮೆಟೊ ಕೆಡುತ್ತಿದೆ ಎಂದು ಹೇಳುವ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕೀಟನಾಶಕ ಸಿಂಪಡಿಸಲು ಸಲಹೆ ನೀಡುತ್ತಾರೆ. ಇದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ. ಬದಲಾಗಿ ಮುಂದಿನ ಬೆಳೆಗೆ ಭೂಮಿಯನ್ನು ಹೇಗೆ ಸಿದ್ದಪಡಿಸಬೇಕು ಎಂದು ರೈತರಿಗೆ ಪ್ರಾತ್ಯಕ್ಷಿಕೆ ನೀಡಬೇಕು. ಆಗ ಮಾತ್ರ ರೈತರಿಗೆ ಸಹಾಯವಾಗುತ್ತದೆ ಎನ್ನುತ್ತಾರೆ.

ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲದಿದ್ದರೆ ಭವಿಷ್ಯದಲ್ಲಿ ಕೋಲಾರ ಜಿಲ್ಲೆಯಲ್ಲಿ ಟೊಮೇಟೊ ಬೆಳೆಗಾರರೇ ಇಲ್ಲವಾಗುತ್ತಾರೆ. ಬಹುತೇಕ ರೈತರು ಟೊಮೇಟೊ ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ ಇಲ್ಲವೇ ನಿಲ್ಲಿಸಿ ಬಿಟ್ಟಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕಷ್ಟದ ದಿನಗಳನ್ನು ಕಾಣಬೇಕಾಗುತ್ತದೆ.

ಇದು ಕೇವಲ ಟೊಮೆಟೊ ಹಣ್ಣಿನ ಕತೆಯಲ್ಲ. ಬಹುತೇಕ ಹಣ್ಣು, ತರಕಾರಿ ಸೊಪ್ಪಿನ ಕತೆಯೂ ಹೌದು. ರೈತನ ಉತ್ಪನ್ನಗಳನ್ನು ಕೆಡದ ಹಾಗೆ ಒಂದೆರಡು ವಾರದ ಮಟ್ಟಿಗೆ ಸಂಗ್ರಹಿಸಿಡುವ ವ್ಯವಸ್ಥೆ ಇಲ್ಲ. ನಷ್ಟಕ್ಕೆ ಮಾರಬೇಕು ಇಲ್ಲವೇ ರಸ್ತೆಗೆ ಸುರಿಯಬೇಕು. ಇದೇ ತರಕಾರಿ ಹಣ್ಣು ಸೊಪ್ಪಿನಿಂದ ತಯಾರಿಸಿದ ಉತ್ಪನ್ನಗಳನ್ನು ತಿಂಗಳುಗಟ್ಟಲೆ ಕೆಡದ ಹಾಗೆ ಇಡಬಹುದಾದರೆ ಕೃಷಿ ತೋಟಗಾರಿಕಾ ಉತ್ಪನ್ನಗಳನ್ನು ಕೆಡದ ಹಾಗೆ ಇರಿಸಲು ಸಾಧ್ಯವಿಲ್ಲವೇ ಎಂದು ಕೇಳಬೇಕಿದೆ. ಆದರೆ ಯಾರನ್ನು ಕೇಳುವುದು ?

ಸ್ವಾತಂತ್ರ್ಯ ಲಭಿಸಿ 8 ದಶಕಗಳು ಕಳೆದಿವೆ. ವಿಜ್ಞಾನ ತಂತ್ರಜ್ಞಾನದಲ್ಲಿ ದಾಪುಗಾಲು ಹಾಕುತ್ತಿದ್ದೇವೆ. ಆದರೆ ಈ ಐಟಿ ಬಿಟಿ ಅಷ್ಟಾಗಿ ರೈತರ ಪ್ರಯೋಜನಕ್ಕೆ ಬಂದಿಲ್ಲ ಎನ್ನುವುದು ವಿಪರ್ಯಾಸ.

More articles

Latest article