ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು; ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲಿರುವ ಚಿನ್ನಯ್ಯ

Most read

ಮಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪ ಮಾಡಿದ್ದ  ಸಾಕ್ಷಿ ದೂರುದಾರ ಚಿನ್ನಯ್ಯನನ್ನು ಇಂದು ಮಧ್ಯಾಹ್ನ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದರು.

ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಿಂದ ಬಿಗಿಭದ್ರತೆಯಲ್ಲಿ ಕರೆ ತರಲಾಗಿತ್ತು.

ಪ್ರಕರಣ ಕುರಿತು ಚಿನ್ನಯ್ಯ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲಿದ್ದಾನೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ ಎಸ್‌ ಎಸ್) ಸೆಕ್ಷನ್ 183ರ ಅಡಿಯಲ್ಲಿ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲು ಚಿನ್ನಯ್ಯನನ್ನು ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿನ್ನಯ್ಯ ತಾನೇ ಹೂತು ಹಾಕಿದ್ದ ಮೃತದೇಹವೊಂದರ ತಲೆಬುರುಡೆಯನ್ನು ಪೊಲೀಸರಿಗೆ ಒಪ್ಪಿಸಿದ್ದ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ ಐಟಿ) ವಿಚಾರಣೆ ಕೈಗೊಂಡಾಗ ತಲೆಬುರುಡೆಯನ್ನು ತಂದ ಸ್ಥಳವನ್ನು ತೋರಿಸಲು ನಿರಾಕರಿಸಿದ್ದ. ಸಾಕಷ್ಟು ವಿಚಾರಣೆ ನಂತರ ಆತ ತಲೆಬುರುಡೆಯನ್ನು ತಾನು ಹೊರತೆಗೆದಿಲ್ಲ. ಜಯಂತ್‌ ಎಂಬಾತ ತನಗೆ ಒಪ್ಪಿಸಿದ್ದ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಂತರದ ಬೆಳವಣಿಗೆಯಲ್ಲಿ ಚಿನ್ನಯ್ಯನನ್ನು ಎಸ್‌ ಐಟಿ ಪೊಲೀಸರು ಬಂಧಿಸಿ ಅಗಸ್ಟ್ 23ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಅವಧಿ ಮುಗಿದ ನಂತರ ಚಿನ್ನಯ್ಯನನ್ನು ಸೆ.18ರಂದು ಮತ್ತೆ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಚಿನ್ನಯ್ಯ ನೀಡಿದ ತಪ್ಪೊಪ್ಪಿಗೆ ಹೇಳಿಕೆ ನಂತರ ಧರ್ಮಸ್ಥಳ ಪ್ರಕರಣಕ್ಕೆ ಮಹತ್ವದ ತಿರುವು ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

More articles

Latest article