ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಅಪರಾಧ ಪ್ರಕರಣಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ ) ನೇತ್ರಾವತಿ ನದಿ ಸಮೀಪದ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಇಂದೂ ಸಹ ಶೋಧ ಮತ್ತು ಮಹಜರು ಕಾರ್ಯವನ್ನು ಆರಂಭಿಸಿದೆ.
ಇದೇ ಸ್ಥಳದಲ್ಲಿ ನಿನ್ನೆಯೂ ಶೋಧ ಕಾರ್ಯ ನಡೆಸಿದ ಸಂದರ್ಭದಲ್ಲಿ ಹಲವೆಡೆ ನೆಲದ ಮೇಲೆಯೇ ಮೃತದೇಹಗಳ ಅವಶೇಷಗಳು ಸಿಕ್ಕಿದ್ದವು. ಅವುಗಳ ಮಹಜರು ಕಾರ್ಯ ನಡೆಸಲಾಗಿರಲಿಲ್ಲ. ರಾತ್ರಿ ಸುಮಾರು 7 ಗಂಟೆವರೆಗೂ ಎಸ್ಐಟಿ ತಂಡ ಕಾಡಿನಲ್ಲೇ ಉಳಿದಿತ್ತು. ನಿನ್ನೆ ನಡೆದ ಶೋಧದಲ್ಲಿ 9 ಕಡೆ ಮೃತದೇಹಗಳ ಅವಶೇಷಗಳು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಎಸ್ ಐಟಿ ಇಂದು ಸಂಜೆಯೊಳಗೆ ಎಲ್ಲದರ ಮಹಜರು ಪೂರ್ಣಗೊಳಿಸಲಿದೆ.
ಧರ್ಮಸ್ಥಳದಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಶವಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿ ದೂರು ನೀಡಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಪಕ್ಕ ಬಂಗ್ಲೆಗುಡ್ಡೆಯ ಅರಣ್ಯದಿಂದ ಹೊರತೆಗೆಯಲಾಗಿತ್ತು. ತಲೆಬುರುಡೆ ಇದ್ದ ಸ್ಥಳವನ್ನು ಸೌಜನ್ಯ ಅವರ ಮಾವ ಧರ್ಮಸ್ಥಳ ಗ್ರಾಮದ ಪಾಂಗಾಳ ವಿಠಲ ಗೌಡ ತೋರಿಸಿದ್ದರು. ಇತ್ತೀಚೆಗೆ ಎಸ್ ಐಟಿ ಅಧಿಕಾರಿಗಳು ವಿಠಲಗೌಡ ಅವರನ್ನು ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ವಲಯದ ವ್ಯಾಪ್ತಿಯಲ್ಲಿರುವ ಈ ಕಾಡಿಗೆ ಕರೆದೊಯ್ದು ಮಹಜರು ನಡೆಸಿದ್ದರು. ಈ ಸಂದರ್ಭದಲ್ಲಿ ಭೂ ಮೇಲೆಯೇ ಮೇಲೆಯೇ ಮೃತದೇಹಗಳ ಅವಶೇಷ ಸಿಕ್ಕಿದ್ದವು.
ಬುರುಡೆ ಸಿಕ್ಕಿದ್ದ ಸ್ಥಳದ ಮಹಜರು ನಡೆಸುತ್ತಿದ್ದಾಗ ಅದೇ ಸ್ಥಳದಲ್ಲಿ ಒಂದೇ ಕಡೆ ಮೂರು ಮೃತದೇಹಗಳ ಹಾಗೂ ಮತ್ತೊಂದು ಕಡೆ ಎಂಟು ಮೃತದೇಹಗಳಿಗೆ ಸಂಬಂಧಿಸಿದ ಅವಶೇಷಗಳು ಪತ್ತೆಯಾಗಿದ್ದವು. ಈ ವಿಷಯವನ್ನು ವಿಠಲ ಗೌಡ ಅವರೇ ಹೇಳಿಕೊಂಡಿದ್ದರು.
ಇಂದು ಈ ಪ್ರದೇಶಕ್ಕೆ ಎಸ್ಐಟಿ ಅಧಿಕಾರಿಗಳು, ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ಅಧಿಕಾರಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕೆಲಸಗಾರರನ್ನೂ ಕರೆದೊಯ್ಯಲಾಗಿದೆ.
ಎಸ್ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಅವರ ಮೇಲುಸ್ತುವಾರಿಯಲ್ಲಿ ಶೋಧ ನಡೆಯುತ್ತಿದೆ.