ದೇವೇಗೌಡರೇ, ಈ ಪ್ರಶ್ನೆಗೆ ಉತ್ತರ ಕೊಡುತ್ತೀರಾ? ಎಲ್ಲಿ ಹೋಯ್ತು ನಿಮ್ಮ ಕಾಳಜಿ?

Most read

ಹಾಸನ: ಈ ಸಮಾಜದ ಸ್ವಾಸ್ಥ್ಯವನ್ನು ಕಡೆಸಿ ಹೆಣ್ಣಿನ ಘನತೆಯನ್ನು ಕುಗ್ಗಿಸಿರುವ ವ್ಯಕ್ತಿಗೆ ನೀಡುವ ಶಿಕ್ಷೆ ಇಂತಹ ಕೆಲಸ ಮಾಡುವ ಯಾರಿಗೇ ಆದರೂ ಎಚ್ಚರಿಕೆಯ ಗಂಟೆ ಆಗಬೇಕು. ಯಾವ ಮಹಿಳೆಯ ಮೇಲೆ, ಯಾವ ಪುರುಷ ಬಲಾತ್ಕಾರ ಮಾಡಿ ಆಕೆ ಇರೋದೆ ನಮ್ಮ ಅನುಭೋಗಕ್ಕೆ ಎಂಬ ಮನಸ್ಥಿತಿಯ ಪ್ರಜ್ವಲನಂತಹ ವ್ಯಕ್ತಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷರಾದ ಎಸ್ ವರಲಕ್ಷ್ಮಿ ಆಗ್ರಹಿಸಿದರು.

ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹುಬ್ಬಳ್ಳಿಯ ನೇಹಾ ಹತ್ಯೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಅವರ ಚಮಚ ಸಂಘಟನೆಗಳು, ಬಿಜೆಪಿ ನಾಯಕರು ಸಾಲು ಸಾಲು ಪ್ರತಿಭಟನೆ ಮಾಡಿ ಆ ಕುಟುಂಬವನ್ನು ಭೇಟಿ ಮಾಡಿದವು. ಆದರೆ, ಇಂದು ಹಾಸನದ ಯಾವ ಹೆಣ್ಣುಮಕ್ಕಳನ್ನು ಸಾಂತ್ವನ ಮಾಡಲು ಯಾಕೆ ಬಂದಿಲ್ಲ? ಇಂಥ ಹೀನ ದೌರ್ಜನ್ಯಗಳನ್ನು ನೋಡಿಕೊಂಡು ಯಾಕೆ ಸುಮ್ಮನಿದ್ದಾರೆ? ಎಂದು ಅವರು ಪ್ರಶ್ನಿಸಿದರು.

ಮಹಿಳಾ ಮೀಸಲಾತಿ ಪರಿಚಯಿಸಿದಾಗ ಮಹಿಳೆಯರ ಬಗ್ಗೆ ನಮಗೆ ಕಾಳಜಿ ಇದೆ ಅಂತ ದೇವೇಗೌಡರು ಹೇಳಿದರು. ಆದರೆ, ಹಾಸನದ ಹೆಣ್ಣುಮಕ್ಕಳ ಬಗ್ಗೆ ಯಾಕೆ ಆ ಕಾಳಜಿ ಮಾಜಿ ಪ್ರಧಾನಿ ಹಾಗೂ ಹಾಲಿ ಪ್ರಧಾನಿಯಲ್ಲಿ ಕಾಣ್ತಿಲ್ಲ. ಹಾಸನದ ಅಕ್ಕತಂಗಿಯರೇ ನಮ್ಮ ಹಕ್ಕುಗಳು ಯಾರ ಭಿಕ್ಷೆಯೂ ಅಲ್ಲ, ಹೋರಾಟದ ಫಲವಾಗಿ ನಮಗೆ ಸಿಕ್ಕಂತವು. ಈ ಸಂದರ್ಭದಲ್ಲಿ ಕೇರಳದ ವೀರ ಮಹಿಳೆ ನಂಗೇಲಿಯನ್ನು ನೆನೆಯಬೇಕು. ಸ್ತನ ತೆರಿಗೆ ವಿರುದ್ಧ ಒಬ್ಬಂಟಿಯಾಗಿ ಹೋರಾಡಿ ಸ್ತನವನ್ನೇ ಕತ್ತರಿಸಿ ಕೊಟ್ಟ ನಂಗೇಲಿ, ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಶತ್ರುಗಳ ರುಂಡ ಚಂಡಾಡಿದ ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ನಮಗೆ ನೆನಪಾಗಬೇಕು. ಈ ದೌರ್ಜನ್ಯದ ಸಂಧರ್ಭದಲ್ಲೂ ನಾವೆಲ್ಲರೂ ಗಟ್ಟಿಯಾದ ಹೋರಾಟ ಮಾಡಬೇಕು.

More articles

Latest article