ಲಖನೌ: ತಾನು ಸಾಕಿದ ಮುದ್ದಿನ ಬೆಕ್ಕಿನ ಸಾವಿನ ಆಘಾತವನ್ನು ತಡೆಯಲಾದ ಮಹಿಳೆಯಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಅಮ್ರೋಹ ಜಿಲ್ಲೆಯ ಹಸನ್ಪುರ ನಿವಾಸಿ 32 ವರ್ಷದ ಪೂಜಾ ಮೃತ ಮಹಿಳೆ. ಮುದ್ದಿನ ಬೆಕ್ಕಿನ ಸಾವಿನಿಂದ ಕಂಗೆಟ್ಟು, ಎರಡು ದಿನ ಮೃತ ಬೆಕ್ಕಿನ ದೇಹದ ಜತೆ ಕಾಲ ಕಳೆದು ಮೂರನೇ ದಿನ ಪೂಜಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎಂಟು ವರ್ಷಗಳ ಹಿಂದೆ ಪೂಜಾ ದೆಹಲಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಎರಡು ವರ್ಷದ ನಂತರ ವಿಚ್ಛೇದನ ಪಡೆದಿದ್ದರು. ನಂತರ ತನ್ನ ತಾಯಿ ಗಜ್ರಾದೇವಿ ಅವರೊಂದಿಗೆ ವಾಸವಾಗಿದ್ದರು. ಒಂಟಿತನವನ್ನು ನಿಭಾಯಿಸಲು ಪೂಜಾ ಬೆಕ್ಕೊಂದನ್ನು ಸಾಕಿಕೊಂಡಿದ್ದರು. ಬೆಕ್ಕು ಸಾವಿಗೀಡಾದಾಗ ತುಂಬಾ ದುಃಖಿತರಾಗಿದ್ದರು. ತಾಯಿ ಗಜ್ರಾದೇವಿ ಬೆಕ್ಕನ್ನು ಹೂಳಲು ಸೂಚಿಸಿದಾಗಲೂ ಪೂಜಾ ಒಪ್ಪಿರಲಿಲ್ಲ. ತನ್ನ ಮುದ್ದಿನ ಬೆಕ್ಕು ಮರಳಿ ಬದುಕಿ ಬರುತ್ತದೆ ಎಂಬ ವಿಶ್ವಾಸ ಹೊಂದಿದ್ದರು. ಹೀಗೆ ಪೂಜಾ ಎರಡು ದಿನ ಮೃತ ಬೆಕ್ಕಿನ ಜೊತೆ ಕಾಲ ಕಳೆದಿದ್ದರು. ಕೊನೆಗೆ ಅದು ಬದುಕಿ ಬರಲಿಲ್ಲ ಎಂದು ದುಃಖಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ಬೆಕ್ಕಿನ ಮೃತದೇಹವೂ ಇತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.