ಬೆಂಗಳೂರು: ಮಧ್ಯಾಹ್ನದ ಊಟ ಮುಗಿಸಿಕೊಂಡು ಸರಿಯಾದ ಸಮಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿಯಾದ ಪ್ರಸಂಗ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಸಭೆಯಲ್ಲಿ ಕಂಡು ಬಂದಿತು.
ಇಂದು ಬೆಳಗ್ಗೆಯಿಂದಲೇ DC ಮತ್ತು CEO ಗಳ ಸಭೆ ನಡೆಯುತ್ತಿದ್ದು ಮಧ್ಯಾಹ್ನದ ಊಟಕ್ಕೆ ಹೊರಟ ಮುಖ್ಯಮಂತ್ರಿಗಳು ಸರಿಆಗಿ ಅರ್ಧ ಗಂಟೆಯಲ್ಲಿ ಬರುವುದಾಗಿ ಹೇಳಿದ್ದರು.
ಅಧಿಕಾರಿ ವರ್ಗಕ್ಕೆ ಮತ್ತು ಸಚಿವರುಗಳಿಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಮನೆಗೆ ಹೋಗಿದ್ದರಿಂದ ಅವರು ಊಟ ಮುಗಿಸಿ ಬರುವುದು ತಡವಾಗಬಹುದು ಎಂದು ಅಧಿಕಾರಿಗಳು ರಿಲಾಕ್ಸ್ ಮೂಡ್ ನಲ್ಲಿ ನಿಧಾನವಾಗಿ ಊಟ ಮಾಡುತ್ತಿದ್ದರು. ಆದರೆ, ಮುಖ್ಯಮಂತ್ರಿಗಳು ಊಟ ಮುಗಿಸಿ ಸರಿಯಾಗಿ 30 ನಿಮಿಷಕ್ಕೆ ಸಮ್ಮೇಳನ ಸಭಾಂಗಣಕ್ಕೆ ಆಗಮಿಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು, “ಸರ್ ಅಧಿಕಾರಿಗಳು ಇನ್ನೂ ಊಟಕ್ಕೆ ಹೋಗಿದ್ದಾರೆ, ಬರುತ್ತಾರೆ ಎಂದು ಸಮಾಧಾನಗೊಳಿಸಿದರು. ಮುಖ್ಯಮಂತ್ರಿಗಳು ಸರಿಯಾದ ಸಮಯಕ್ಕೆ ಬಂದ ಸುದ್ದಿ ಕೇಳಿ ಬ್ಯಾಂಕ್ವೆಂಟ್ ಹಾಲ್ ನಲ್ಲಿದ್ದ ಅಧಿಕಾರಿಗಳು, ಸಚಿವರು ತಡಬಡಾಯಿಸಿ ಸಭಾಂಗಣಕ್ಕೆ ದೌಡಾಯಿಸಿದರು.
ಊಟಕ್ಕೆ ಬಿಡುವು ಕೊಡುವಾಗಲೇ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು 45 ನಿಮಿಷ ಬಿಡುವು ಕೊಡೋಣ ಎಂದಿದ್ದರು. ಮುಖ್ಯಮಂತ್ರಿಗಳು 30 ನಿಮಿಷ ಸಾಕು ಎಂದು ಹೇಳಿದ್ದರು. ತಮ್ಮ ಸೂಚನೆಯಂತೆ ಮುಖ್ಯಮಂತ್ರಿಗಳು ಸರಿಯಾಗಿ 30 ನಿಮಿಷಕ್ಕೆ ಬಂದಿದ್ದು ಅಧಿಕಾರಿಗಳು, ಸಚಿವರನ್ನು ಕಕ್ಕಾಬಿಕ್ಕಿಯಾಗಿಸಿತು.