ದರ್ಶನ್‌ ಲೈಟ್‌ ಬಾಯ್‌ ಆಗಿದ್ದೂ ಕೂಡ ಸುಳ್ಳು: ದೊಡ್ಮನೆ ಮೇಲೆ ಯಾಕಿಷ್ಟು ಕೋಪ?

Most read

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನವಾಗಿದೆ. ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ದರ್ಶನ್‌ ವೈಯಕ್ತಿಕ ವರ್ತನೆ ಬಗ್ಗೆ ಹಲವರಿಗೆ ಅಸಮಾಧಾನವಿತ್ತು. ನಟನ ಬಂಧನ ಬಳಿಕ ಈಗೀಗ ದರ್ಶನ್‌ಗೆ ಸಂಬಂಧಿಸಿದ ಒಂದೊಂದೆ ವಿಚಾರಗಳು ಹೊರ ಬರುತ್ತಿದೆ.

ಸದಾ ನಾನು ಲೈಟ್‌ ಬಾಯ್‌ ಆಗಿದ್ದವನು ಹೀರೋ ಆದೆ ಎನ್ನುವ ದರ್ಶನ್‌ ಲೈಟ್ ಬಾಯ್ ಆಗಿ ಕೆಲಸ ಮಾಡಿಲ್ಲ ಎನ್ನುವ ವಿಚಾರವನ್ನು ನಿರ್ದೇಶಕರೊಬ್ಬರು ಬಹಿರಂಗ ಪಡಿಸಿದ್ದಾರೆ. ಅಲ್ಲದೇ ನಟ ದರ್ಶನ್‌ ಚಿತ್ರರಂಗದ ದೊಡ್ಮನೆ ಡಾ.ರಾಜ್‌ಕುಮಾರ್‌ ಕುಟುಂಬದ ಮೇಲೆ ಯಾಕೆ ಅಸಮಾಧಾನಗೊಂಡಿದ್ದರು ಎನ್ನುವ ವಿಚಾರದ ಬಗ್ಗೆ ನಿರ್ದೇಶಕ ಪ್ರಕಾಶ್‌ ರಾಜ ಮೆಹೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸವಿವರ ಇಲ್ಲಿದೆ. “ನಾನು “ಜನುಮದ ಜೋಡಿ” ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ, ದರ್ಶನ್ ಅದೇ ಸಿನಿಮಾದಲ್ಲಿ ಛಾಯಾಗ್ರಹಕರಾದ ಬಿ.ಸಿ ಗೌರಿಶಂಕರ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. (ಎಲ್ಲಾ ಕಡೆ ನಾನು ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದೆ, ಲೈಟ್‌ಗಳನ್ನು ಎತ್ತುತ್ತಿದ್ದೆ ಅಂತ ಹೇಳಿಕೊಳ್ಳುತ್ತಾರೆ ಅದು ಸುಳ್ಳು, ಕ್ಯಾಮೆರಾಮೆನ್ ಅಸ್ಟೆಂಟ್ ಬೇರೆ. ಲೈಟ್ ಬಾಯ್ಸ್ ಬೇರೆ)

ನಾನು “ನೀನಾಸಂ” ನಲ್ಲಿ ಕೋರ್ಸ್ ಮುಗಿಸಿಕೊಂಡು ಚಿತ್ರರಂಗಕ್ಕೆ ಬಂದಿದ್ದೆ, ದರ್ಶನ್ ಸಹ ಅದೇ ಸ್ಕೂಲ್‌ನಿಂದ ಬಂದಿದ್ದರು, ನನಗಿಂತ ಎರಡು-ಮೂರು ವರ್ಷ ಜೂನಿಯರ್. ಹಾಗಾಗಿ ನಮ್ಮಿಬ್ಬರ ನಡುವೆ ಆ ಒಂದು ಸೆಂಟಿಮೆಂಟಲ್ ಅಟ್ಯಾಚ್ಮೆಂಟ್ ಇತ್ತು.

“ಜನುಮದ ಜೋಡಿ” ಸಿನಿಮಾ ಬಿಡುಗಡೆಯಾಗಿ ಸೂಪರ್-ಡೂಪರ್ ಹಿಟ್ಟಾಗಿತ್ತು ಆ ಸಮಯಕ್ಕೆ ಭಾರತಕ್ಕೆ Zimmi Zib” ಅನ್ನುವ ಒಂದು ಕ್ಯಾಮೆರಾ ಯಂತ್ರ ಹೊಸದಾಗಿ ಬಂದಿತ್ತು ಅದನ್ನು ವಜ್ರೇಶ್ವರಿಗೆ ತರಿಸಬೇಕೆನ್ನುವುದು ಅಪ್ಪು ಅವರ ಆಸೆಯಾಗಿತ್ತು. ಪಾರ್ವತಮ್ಮ ಅವರು ಆ ಕ್ಯಾಮೆರಾ ತರಿಸುವ ನಿರ್ಧಾರ ಮಾಡಿ ಅದರ ಬಗ್ಗೆ ಮಾಹಿತಿ ಪಡೆದರು.

ಆ Zimmi ಯನ್ನು ಮಾಮೂಲಿ ಕ್ಯಾಮೆರಾ ಮನ್‌ಗಳು ಆಪರೇಟ್ ಮಾಡಲು ಸಾಧ್ಯವಿಲ್ಲ ಅದಕ್ಕೇ ಸಪರೇಟಾಗಿ ಟ್ರೈನಿಂಗ್ ಆಗಬೇಕು ಅದಕ್ಕಾಗಿ ಬಾಂಬೆಯಲ್ಲಿ ಮೂರು ತಿಂಗಳೋ, ಆರು ತಿಂಗಳೋ ಟ್ರೈನಿಂಗ್ ಕೊಡಲಾಗುವುದು ಅನ್ನುವ ವಿಷಯ ತಿಳಿದ ಅಮ್ಮ, ಕ್ಯಾಮೆರಾ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ಅವರನ್ನು ಕರೆಸಿ ಜಿಮ್ಮಿ ವಿಷಯ ಹೇಳಿ, “ಬಾಂಬೆಗೆ ಕಳುಹಿಸಿಕೊಡುತ್ತೇನೆ, ತರಬೇತಿ ಪಡೆದು ಬಂದು ಆ ಜಿಮ್ಮಿಯನ್ನು ನೀನೆ ನೋಡಿಕೋ” ಅಂತ ಹೇಳಿದರು. ಅಮ್ಮ ಅವರ ಉದ್ದೇಶ ದರ್ಶನ್ ಅವರಿಗೆ ಒಂದು ಉದ್ಯೋಗ ಆಗಲಿ ಅನ್ನುವುದಾಗಿತ್ತೆ ವಿನಃ ಮತ್ತೇನೂ ಅಲ್ಲ. ದರ್ಶನ್ ಅದನ್ನು ಒಪ್ಪಲಿಲ್ಲ. ಅದು ಅವರಿಷ್ಟ, ಅದರಲ್ಲೇನು ತಪ್ಪಿಲ್ಲ. ಮುಂದೆ ದರ್ಶನ್ ಹೀರೋ ಆದರು, ಸ್ಟಾರ್ ಆದರು ಸಂತೋಷ. ಆದರೆ ಮೇಲಿನ ವಿಷಯದ ಬಗ್ಗೆ ದರ್ಶನ್ ಹೇಳಿಕೊಳ್ಳುತ್ತಿದ್ದದ್ದು ಏನು ಗೊತ್ತೆ? ‘ತನ್ನ ಮಗ ಪುನೀತ್‌ಗೆ ಇವನು ಪ್ರತಿಸ್ಪರ್ಧಿ ಆಗುತ್ತಾನೆ ಅದನ್ನು ತಪ್ಪಿಸಿ, ನನ್ನನ್ನು ಜಿಮ್ಮಿ ಆಪರೇಟರ್ ಮಾಡಲು ಪ್ಲಾನ್ ಮಾಡಿದ್ದರು, ನಾನು ತಪ್ಪಿಸಿಕೊಂಡೆ’ ಅಂತ. ಮುಂದೆ ಅಪ್ಪು ಸ್ಟಾರ್ ಆಗುತ್ತಾನೆ, ದರ್ಶನ್ ಅವನ ಪ್ರತಿಸ್ಪರ್ಧಿಯಾಗುತ್ತಾನೆ ಅಂತ ಪಾರ್ವತಮ್ಮನವರು ಕನಸು ಕಂಡಿದ್ದರೆ? ಏನೋ ಅವನ ಜೀವನೋಪಾಯಕ್ಕೆ ಒಂದು ದಾರಿಯಾಗಲಿ ಅನ್ನುವ ಒಳ್ಳೆಯ ಉದ್ದೇಶದಿಂದ ಹೇಳಿದ ಮಾತನ್ನು ಈ ರೀತಿ ಗ್ರಹಿಸಿಲಾಗಿತ್ತು” ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

More articles

Latest article