ಮೈಸೂರು: ಗುಣಮಟ್ಟದ ಆರೋಗ್ಯ ಸೇವೆಗಳನ್ನು ಎಲ್ಲ ಜಿಲ್ಲೆಗಳಿಗೂ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಮೈಸೂರು ಜಿಲ್ಲೆಗೆ ಎಂ.ಆರ್.ಐ. ಸೌಲಭ್ಯವನ್ನು ಒದಗಿಸಲು ತೀರ್ಮಾನಿಸಲಾಗಿದೆ ಮತ್ತು ಎಲ್ಲ ಜಿಲ್ಲೆಗಳಲ್ಲೂ ಶೀಘ್ರವೇ ಕೀಮೋಥೆರಪಿ ಕೇಂದ್ರವನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಜಿಲ್ಲಾ ಆಸ್ಪತ್ರೆ ಮೇಟಗಳ್ಳಿ ಯಲ್ಲಿ ಆಯೋಜಿಸಲಾಗಿದ್ದ ಡೇ ಕೇರ್ ಕಿಮೋಥೇರಪಿ ಕೇಂದ್ರ ವನ್ನು ವಿಡಿಯೋ ಸಂವಾದ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಮೊದಲು ಕೀಮೋಥೆರಪಿ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದು ರೋಗಿಗಳ ಪಾಲಿಗೆ ಕಷ್ಟ ಸಾಧ್ಯವಾಗಿತ್ತು. ರಾಜ್ಯದಲ್ಲಿ ಪ್ರತಿವರ್ಷ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. ಬಡ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ದೊರೆಯದ ಕಾರಣ, ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದರು. ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಸಂಖ್ಯೆಯಲ್ಲಿ ತಮಿಳುನಾಡಿನ ನಂತರದ ಸ್ಥಾನವನ್ನು ಕರ್ನಾಟಕ ಪಡೆದಿದೆ. ಈ ಕಾಯಿಲೆ ತಕ್ಷಣ ಪತ್ತೆಯಾದರೆ ಗುಣಪಡಿಸುವ ಸಾಧ್ಯತೆಯಿದ್ದು, ಪತ್ತೆಯಾಗದ ಸಂದರ್ಭದಲ್ಲಿ ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಆದರೆ ಆಧುನಿಕ ಔಷದೋಪಚಾರಗಳು ಲಭ್ಯವಿದ್ದರೂ, ದುಬಾರಿಯಾಗಿದೆ ಎಂದರು.
ವೈದ್ಯಕೀಯ ಸೇವೆ ರಾಜ್ಯದ ಬಡವರಿಗೂ ದೊರೆಯಬೇಕು
ಭಾರತದಲ್ಲಿ ಸುಮಾರು 100 ಕೋಟಿ ಜನರಿಗೆ ಬಡತನದಿಂದಾಗಿ ಚಿಕಿತ್ಸೆ ಪಡೆಯುವ ಶಕ್ತಿಯಿರುವುದಿಲ್ಲ. 2013 ರಲ್ಲಿ ರಾಜ್ಯದ ಬಡವರ ಸಂಕಷ್ಟಕ್ಕೆ ಸ್ಪಂದಿಸಲು ನಮ್ಮ ಸರ್ಕಾರ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. 2023ರಲ್ಲಿ ರಾಜ್ಯದ ಯಾವ ಬಡವರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಸರ್ಕಾರ ನೀಡುತ್ತಿದೆ. ಹಸಿವು ಮುಕ್ತ ರಾಜ್ಯ ನಿರ್ಮಿಸುವ ಜೊತೆಗೆ ಶಿಕ್ಷಣ, ವೈದ್ಯಕೀಯ ಸೇವೆ ರಾಜ್ಯದ ಪ್ರತಿಯೊಬ್ಬರಿಗೂ ದೊರೆಯಬೇಕೆಂಬುದು ಸರ್ಕಾರದ ಗುರಿ.
.ಬಿ.ಆರ್.ಅಂಬೇಡ್ಕರ್ ರವರು ತಿಳಿಸಿದಂತೆ ಸಮಾಜದಲ್ಲಿ ಸಮಾನತೆ ನೆಲೆಸಬೇಕಾದರೆ ಜಾತಿ ವ್ಯವಸ್ಥೆ ತೊಲಗಬೇಕು ಮತ್ತು ಆರ್ಥಿಕ, ಸಾಮಾಜಿಕ ಸಮಾನತೆ ಸಾಧಿಸಬೇಕು ಎಂದರು. 2013ರಲ್ಲಿ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಮೈಸೂರಿನಲ್ಲಿ ಜಿಲ್ಲಾ ಆಸ್ಪತ್ರೆ ಇರಲಿಲ್ಲ. ಈ ಪ್ರಮುಖ ಜಿಲ್ಲೆಯಲ್ಲಿ ಸಕಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿಯುಳ್ಳ ವೈದ್ಯರಿದ್ದಾರೆ
ಡಯಾಲಿಸಿಸ್ ಎನ್ನುವುದು ಈಗ ಸಾಮಾನ್ಯ ರೋಗ ಎಂಬಂತಾಗಿದೆ. ಇದಕ್ಕೆ ದುಬಾರಿ ಬೆಲೆಯಾಗಿರುವುದರಿಂದ ಖಾಸಗಿ ಆಸ್ಪತ್ರೆಗೆ ಬಡ ಜನರು ಹೋಗಲಾಗುವುದಿಲ್ಲ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.5 ಲಕ್ಷಗಳಷ್ಟು ಕೊಟ್ಟರೂ ಸಂಪೂರ್ಣ ಚಿಕಿತ್ಸೆಗೆ ಸಾಲುವುದಿಲ್ಲ. ಇತ್ತೀಚೆಗೆ ಜನರಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋದರೆ ಮಾತ್ರ ಖಾಯಿಲೆ ವಾಸಿಯಾಗುತ್ತದೆ ಎಂಬ ಭಾವನೆ ಇದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಅನುಭವ ಮತ್ತು ಪರಿಣಿತಿ ಇರುವ ವೈದ್ಯರಿದ್ದಾರೆ ಎಂದರು. ಜನರು ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಖಾಯಿಲೆ ವಾಸಿಯಾಗುತ್ತದೆ ಎಂದು ಅರಿಯಬೇಕು. ಜಯದೇವ ಆಸ್ಪತ್ರೆಗಳಲ್ಲಿ ನೀಡುವ ಚಿಕಿತ್ಸೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎಂದರು.
ಕೀಮೋಥೆರಪಿ ಕೇಂದ್ರಗಳ ಸದುಪಯೋಗವಾಗಬೇಕು:
ನಿಮ್ಹಾನ್ಸ್ ಕೇಂದ್ರ ಮೈಸೂರು ನಗರದಲ್ಲಿ ಆಗಬೇಕೆಂಬ ಕಾರಣದಿಂದ ಬಾರಿಯ ಬಜೆಟ್ ನಲ್ಲಿ ಅನುದಾನವನ್ನು ಮೀಸಲಿರಿಸಲಾಗಿದೆ. ಶೇ 60% ರೋಗಿಗಳು ಚಿಕಿತ್ಸೆಗಾಗಿ ನೂರು ಕಿಮೀ ವರೆಗೆ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ಅದಕ್ಕಾಗಿ ನಾವು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೀಮೋಥೆರಪಿ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ಇದರ ಲಾಭವನ್ನು ಮೂತ್ರಪಿಂಡ ಖಾಯಿಲೆಗೆ ತುತ್ತಾದವರು ಪಡೆದುಕೊಳ್ಳಬೇಕು ಎಂದರು.
ಉಳಿದ ಜಿಲ್ಲೆಗಳಲ್ಲಿ ಶೀಘ್ರವೇ ಕೀಮೋಥೆರಪಿ ಕೇಂದ್ರ ಆರಂಭ:
ಕೀಮೋಥರೆಪಿ ಸೌಲಭ್ಯಗಳಿಲ್ಲದೇ ಇರುವ ಜಿಲ್ಲೆಗಳಲ್ಲಿ ಶೀಘ್ರವಾಗಿಯೇ ಕೀಮೋಥೆರಪಿ ಕೇಂದ್ರಗಳನ್ನು ತೆರೆಯಲಾಗುವುದು ಎಂದ ಮುಖ್ಯಮಂತ್ರಿಗಳು ಕ್ಯಾನ್ಸರ್ ಖಾಯಿಲೆ ಬಂದವರು ಧೃತಿಗೆಬೇಕಾದ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು. ತಾವೂ ಕೂಡ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ 25 ವರ್ಷಗಳ ಹಿಂದೆ ಒಳಗಾಗಿದ್ದನ್ನು ನೆನೆದ ಮುಖ್ಯಮಂತ್ರಿಗಳು ಇನ್ನೂ 25 ವರ್ಷಗಳ ಕಾಲ ನಾನು ಬದುಕುತ್ತೇನೆ ಎಂದರು. ನಾವು ಮಾನಸಿಕವಾಗಿ ಎಷ್ಟು ಗಟ್ಟಿಯಾಗಿರತ್ತೇವೋ ಅಷ್ಟರ ಮಟ್ಟಿಗೆ ನಮ್ಮ ಆಯಸ್ಸು ಗಟ್ಟಿಯಾಗಿರುತ್ತದೆ. ನಮ್ಮ ಆಯಸ್ಸು ಮುಗಿದುಹೋಯಿತು ಎಂದು ಯಾರು ಅಂದುಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.