ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಒಪ್ಪಿಗೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರನ್ನು ಒಳಗೊಂಡ ನ್ಯಾಯಪೀಠ, ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ತಿಳಿಸಿದೆ.
ಇದಕ್ಕೂ ಮುನ್ನ ನ್ಯಾಯಪೀಠವು, ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಿದ್ದರೆ ಮಂಗಳವಾರ ವಿಚಾರಣೆ ನಡೆಸಬಹುದೇ ಎಂದು ವಕೀಲ ಮತ್ತು ಅರ್ಜಿದಾರ ಮ್ಯಾಥ್ಯೂ ನೆದುಂಪಾರಾ ಅವರನ್ನು ಪ್ರಶ್ನಿಸಿತು. ಮಂಗಳವಾರ ತಾವು ಅಲಭ್ಯರಾಗಿದ್ದು, ಬುಧವಾರ ವಿಚಾರಣೆ ನಡೆಸುವಂತೆ ಕೇಳಿಕೊಂಡರು. ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು ಬುಧವಾರ ವಿಚಾರಣೆ ನಡೆಯಲಿದೆ.