ಅಪರಾಧಿ ಎಂದು ಸಾಬೀತಾದರೂ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್ ಅಸಮಾಧಾನ

Most read

ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಕೆಡವಲು ಬುಲ್ಡೋಜರ್‌ ಕಾನೂನು ಈಗಾಗಲೇ ಉತ್ತರ ಪ್ರದೇಶ ಸೇರಿ ಹಲವು ಉತ್ತರ ಭಾರತದ ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ. ಆದರೆ ಈ ನಡೆಯನ್ನು ಸುಪ್ರೀಂ ಕೋರ್ಟ್ ವಿರೋಧಿಸಿದ್ದು, ಅಪರಾಧಿ ಎಂದು ಸಾಬೀತಾದರೂ ಅವರ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ ಎಂದು ಖಾರವಾಗಿ ಟೀಕಿಸಿದೆ.

ವಿವಿಧ ಪ್ರಕರಣಗಳಲ್ಲಿನ ಆರೋಪಿಗಳ ಮನೆ ಧ್ವಂಸ ಮಾಡಿರುವುದನ್ನು ಪ್ರಶ್ನಿಸಿ ಜಮಿಯತ್ ಉಲಮಾ-ಎ-ಹಿಂದ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ, ತಂದೆಗೆ ದಂಗೆಕೋರ ಮಗನಿರಬಹುದು. ಹಾಗಂತ ಇರುವ ಮನೆ ಕೆಡವಿದರೆ ಅವರು ಎಲ್ಲಿಗೆ ಹೋಗುತ್ತಾರೆ? ಇದು ಸೂಕ್ತವಾದ ಮಾರ್ಗವಲ್ಲ ಎಂದು ಕಿಡಿಕಾರಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾನೂನು ಉಲ್ಲಂಘನೆಯಾದಾಗ ಮನೆಗಳನ್ನು ಕೆಡವಲಾಗುತ್ತಿದೆ. ಮುಖ್ಯವಾಗಿ ನಗರಸಭೆ ಕಾನೂನು ಉಲ್ಲಂಘನೆಯಾದರೆ ಮಾತ್ರ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಯಮ ಉಲ್ಲಂಘಿಸಿದರೆ ಧ್ವಂಸ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆರೋಪಿಗಳ ಮನೆ ಧ್ವಂಸ ಒಪ್ಪುವುದಿಲ್ಲ ಎಂದು ಹೇಳಿದೆ.

ಈ ವೇಳೆ ಅನಧಿಕೃತ ಕಟ್ಟಡಗಳನ್ನು ಕೆಡವಲು ಮಾರ್ಗಸೂಚಿಯ ಅಗತ್ಯವನ್ನು ನ್ಯಾಯಮೂರ್ತಿ ವಿಶ್ವನಾಥನ್ ಗಮನಿಸಿದ್ದಾರೆ. ನ್ಯಾಯಮೂರ್ತಿ ಗವಾಯಿ, ಸಲಹೆಗಳು ಬರಲಿ. ನಾವು ಭಾರತದಾದ್ಯಂತ ಈ ಆಧಾರದ ಮೇಲೆ ಮಾರ್ಗಸೂಚಿಗಳನ್ನು ನೀಡುತ್ತೇವೆ ಎಂದು ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ವಿಚಾರಣೆ ಮುಂದೂಡಲಾಗಿದೆ.

More articles

Latest article