ಬೆಂಗಳೂರು: ಬೆಂಗಳೂರು ನಗರದ ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕು ಕಚೇರಿಯಲ್ಲಿ ಯಾವ ಕೆಲಸಕ್ಕೆ ನಿಮಗೆಲ್ಲಾ ಎಷ್ಟೆಷ್ಟು ಹಣ ಕೊಡಬೇಕು ಎಂದು ರೇಟ್ಬೋರ್ಡ್ ಹಾಕಿಬಿಡಿ. ಎಷ್ಟು ಹಣ ಕೊಟ್ಟರೆ ಕೆಲಸವಾಗುತ್ತದೆ ಎಂಬುದು ಆಗ ಎಲ್ಲ ಜನರಿಗೂ ಗೊತ್ತಾಗುತ್ತದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿದ ಸಚಿವರು ಕಚೇರಿ ಅವಧಿ ಆರಂಭವಾಗಿ ಗಂಟೆಗಳೇ ಕಳೆದಿದ್ದರೂ ಕೆಲವು ಸಿಬ್ಬಂದಿ ಮತ್ತು ಅಧಿಕಾರಿಗಳು ಕಚೇರಿಗೆ ಬಾರದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಮ್ಮ ಕೆಲಸಕ್ಕಾಗಿ ಕಾದುನಿಂತಿದ್ದ ಸಾರ್ವಜನಿಕರೊಬ್ಬರು, ಹಲವು ಬಾರಿ ಅಲೆದರೂ ತಮ್ಮ ಕೆಲಸ ಆಗುತ್ತಿಲ್ಲ ಎಂದು ಸಚಿವರ ಕೈಗೆ ದಾಖಲೆ ಪತ್ರಗಳನ್ನು ಕೊಟ್ಟರು. ಅದನ್ನು ಪರಿಶೀಲಿಸಿದ ಸಚಿವರು ಕೆಲಸ ಮಾಡಿಕೊಡದೆ ಇರುವುದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಪಹಣಿ ತಿದ್ದುಪಡಿಗೆ ಜನವರಿಯಲ್ಲೇ ಆದೇಶವಾಗಿದೆ. ಆರು ತಿಂಗಳಾದರೂ ತಿದ್ದುಪಡಿ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದಾಗಿ ಆ ಅಧಿಕಾರಿ ಕೇಸ್ ವರ್ಕರ್ ಕಡತವನ್ನು ನೀಡಿಲ್ಲ ಎಂದರು. ಇವರು ಹತ್ತಾರು ಬಾರಿ ಬಂದಿದ್ದಾರೆ. ಕೇಸ್ ವರ್ಕರ್ ಕಡತ ರವಾನೆ ಮಾಡಿಲ್ಲ ಎಂದಾದರೆ, ನೀವೇ ಕಡತವನ್ನು ಏಕೆ ತರಿಸಿಕೊಳ್ಳಲಿಲ್ಲ ಎಂದೂ ಪ್ರಶ್ನಿಸಿದರು. ಆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕಡತ ಕೊಡಬೇಡಿ ಎಂದು ನೀವೇ ಹೇಳಿರುತ್ತೀರಿ. ಕೆಲಸ ಆಗಬೇಕು ಎಂದರೆ ಎಷ್ಟು ಹಣ ಕೊಡಬೇಕು ಮತ್ತು ರೇಟ್ ಕಾರ್ಡ್ ಎಷ್ಟು ಎಂಬುದನ್ನು ಹೇಳಿಬಿಡಿ. ಜನ ಹಣ ಕೊಟ್ಟು ಮಾಡಿಸಿಕೊಳ್ಳುತ್ತಾರೆ ಎಂದರು.
ಯಾವ ಕೆಲಸಕ್ಕೆ ಎಷ್ಟು ಕೊಡಬೇಕು ಎಂದು ಬೋರ್ಡ್ನಲ್ಲಿ ಬರೆಸಿ ಹಾಕಿಬಿಡಿ. ಜನ ಬದುಕಬೇಕಲ್ಲ, ಇಲ್ಲಿಗೆ ಬಂದು ಅಲೆದಾಡುವ ಬದಲು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಎಷ್ಟು ಹಣ ಕೇಳುತ್ತೀರಿ ಎಂದು ನಾನುನ ಹೇಳಬೇಕಾಗಿಲ್ಲ. ಅಲ್ಲಿ ನಿಂತಿರುವ ಜನರ ಬಳಿಗೆ ಹೋದರೆ ಅದನ್ನು ಹೇಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಎಲ್ಲ ಕೆಲಸವನ್ನೂ ಆನ್ಲೈನ್ ಮತ್ತು ಡಿಜಿಟಲ್ ರೂಪದಲ್ಲಿ ನಡೆಸುವುದೇ ಇದಕ್ಕೆ ಪರಿಹಾರ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಆನ್ಲೈನ್ನಲ್ಲಿ ಈ ಕೆಲಸ ಮಾಡುವಂತೆ ವ್ಯವಸ್ಥೆ ರೂಪಿಸಲಾಗುತ್ತಿದೆ. ಕಡತ ಎಲ್ಲಿದೆ ಯಾರ ಬಳಿ ಎಷ್ಟು ದಿನಗಳಿಂದ ಇದೆ ಎಂಬುದರಲ್ಲಿ ಪಾರದರ್ಶಕತೆ ತರಲು ಇದರಿಂದ ಸಾಧ್ಯವಾಗುತ್ತದೆ. ಆಗ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.