ಲಖನೌ: ಆಡಳಿತಾರೂಢ ಬಿಜೆಪಿ ದೇಶವನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ದುರ್ಬಲಗೊಳಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸಮಾಜದಲ್ಲಿ ದ್ವೇಷ ಹರಡುತ್ತಿರುವುದರಿಂದ ದೇಶ ದುರ್ಬಲವಾಗಿದೆ. ಬಿಜೆಪಿಯವರ ನಡವಳಿಕೆ, ಭಾಷೆ ಸಮಾಜವನ್ನು ದುರ್ಬಲಗೊಳಿಸುತ್ತಿದೆಯಲ್ಲದೆ, ಬಿರುಕನ್ನೂ ಮೂಡಿಸುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ, ಅವರನ್ನು ‘ತೀಸ್ ಮಾರ್ ಖಾನ್’ ಎಂದು ಟೀಕಿಸಿದ್ದಾರೆ. ನಮ್ಮ ಮುಖ್ಯಮಂತ್ರಿ ತೀಸ್ ಮಾರ್ ಖಾನ್. ಏಕೆಂದರೆ ನಮ್ಮ ಮುಖ್ಯಮಂತ್ರಿ 30 ಸಂಖ್ಯೆಯನ್ನು ಇಷ್ಟಪಡುತ್ತಾರೆ. ಕುಂಭಮೇಳದಲ್ಲಿ ಸತ್ತವರ ಸಂಖ್ಯೆ ಕೇಳಿದರೆ 30 ಎನ್ನುತ್ತಾರೆ, ಎಷ್ಟು ವ್ಯವಹಾರ ಆಯಿತು ಎಂದರೆ ರೂ.30 ಕೋಟಿ ಎನ್ನುತ್ತಾರೆ. ಇಂತಹ ತೀಸ್ ಮಾರ್ ಖಾನ್ ಲೆಕ್ಕವನ್ನು ನಮ್ಮ ಮುಖ್ಯಮಂತ್ರಿಯವರಲ್ಲದೆ ಬೇರೆಯವರು ಕೊಡಲು ಸಾಧ್ಯವಿಲ್ಲ ಎಂದು ಅಖಿಲೇಶ್ ವ್ಯಂಗ್ಯವಾಡಿದ್ದಾರೆ.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಬಿಜೆಪಿ ದ್ವೇಷ ಹಾಗೂ ಅಪಪ್ರಚಾರ ಮಾಡುತ್ತಿದೆ. ಮುಸ್ಲಿಂ ಸಮುದಾಯದ ವಿರುದ್ಧ ಅವರು ದ್ವೇಷ ಹರಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರ ವಿರುದ್ಧವೂ ದ್ವೇಷ ಸಾಧಿಸುವುದನ್ನು ಬಿಡುವುದಿಲ್ಲ ಎಂದು ನುಡಿದಿದ್ದಾರೆ. 2027ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.