ದೇವರು, ದೇವಾಲಯ, ಧರ್ಮ ಬಿಟ್ಟರೆ ಹೊಟ್ಟೆ ತುಂಬಿಸುವ ಕೆಲಸ ಬಿಜೆಪಿ ಮಾಡಿಲ್ಲ:ಡಿಸಿಎಂ ಶಿವಕುಮಾರ್

Most read

ಬೆಂಗಳೂರು: ಹಾಸನ ಜಿಲ್ಲೆಯ ಜನ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಾಣ್ಯದ ಎರಡೂ ಮುಖಗಳನ್ನು ನೋಡಿಯಾಗಿದೆ. ಹೀಗಾಗಿ 2028ರ ಚುನಾವಣೆಯಲ್ಲಿ ಹಾಸನದ 7ಕ್ಕೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಗುರುವಾರ ಹಾಸನ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ನಮ್ಮವರೇ ನಮಗೆ ಮೋಸ ಮಾಡಿದ್ದಾರೆ. ಅದು ನನಗೆ ಗೊತ್ತಿದೆ. ಮುಂದಿನ ಚುನಾವಣೆಗೆ ನಾವು ಸಿದ್ಧರಾಗೋಣ. ಬಿಜೆಪಿ ಹಾಗೂ ಜೆಡಿಎಸ್ ನ ನಾಯಕರು ಸಾವಿರ ಬಾರಿ ತಬ್ಬಿಕೊಳ್ಳಲಿ. ಆದರೆ ಕಾರ್ಯಕರ್ತರು ಒಂದಾಗಲು ಸಾಧ್ಯವೇ ಇಲ್ಲ. ಆ ಪಕ್ಷಗಳಲ್ಲಿ ನಾಯಕರನ್ನು ಬಳಸಿ ಬಿಸಾಡುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ ಈ ಸಮುದ್ರದಲ್ಲಿ ತಿಮಿಂಗಲ, ವಜ್ರ, ಸಣ್ಣ ಮೀನು, ದೊಡ್ಡ ಮೀನು ಎಲ್ಲವೂ ಇರುತ್ತದೆ. ಎಲ್ಲದಕ್ಕೂ ಈ ಸಮುದ್ರ ಆಸರೆಯಾಗಿರುತ್ತದೆ. ಈ ಪಕ್ಷಕ್ಕೆ ತನ್ನದೇ ಆದ ದೊಡ್ಡ ಇತಿಹಾಸವಿದೆ. ಈ ಪಕ್ಷದ ಧ್ವಜ ದೇಶಕ್ಕೆ ರಾಷ್ಟ್ರ ಧ್ವಜವನ್ನು ತಯಾರಿಸಿಕೊಟ್ಟಿದೆ. ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ ಕೊಟ್ಟ ಪಕ್ಷ ಇದು. ಕಾರಣಾಂತರಗಳಿಂದ ನಮ್ಮ ಪಕ್ಷ ಕೆಲವು ಕಡೆ ಹಿನ್ನಡೆ ಅನುಭವಿಸಿರಬಹುದು. ಆದರೆ ಈ ಹಿನ್ನಡೆ ಶಾಶ್ವತವಾಗಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ದೇಶ ಯುದ್ಧದ ಪರಿಸ್ಥಿತಿ ಎದುರಾದಾಗ ಎಲ್ಲರೂ ಸ್ಮರಿಸಿದ್ದು ಇಂದಿರಾ ಗಾಂಧಿ ಅವರನ್ನು. ಬೆಂಗಳೂರಿನಲ್ಲಿರುವ ಬಹುತೇಕ ಎಲ್ಲಾ ಸಾರ್ವಜನಿಕ ಉದ್ಯಮಗಳು ಆರಪಂಭವಾಗಿದ್ದೇ ನೆಹರೂ ಅವರ ಕಾಲದಲ್ಲಿ. ದೇಶದಲ್ಲಿನ ಪ್ರಮುಖ ಅಣೆಕಟ್ಟುಗಳನ್ನು ಕಟ್ಟಿದ್ದು ಕಾಂಗ್ರೆಸ್ ಅವಧಿಯಲ್ಲಿ. ಬಿಜೆಪಿ, ದಳದ ಅವಧಿಯಲ್ಲಿ ಒಂದು ಅಣೆಕಟ್ಟು ಕಟ್ಟಲಾಗಿದೆಯೇ?  ನಿಮ್ಮ ಜಿಲ್ಲೆಯಿಂದ ಎತ್ತಿನಹೊಳೆ ಕುಡಿಯುವ ನೀರನ್ನು ತರುತ್ತಿದ್ದೇವೆ. ಈ ಯೋಜನೆಯನ್ನು ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಜೆಡಿಎಸ್, ಬಿಜೆಪಿ ಅಲ್ಲ ಎಂದರು.

ನಮ್ಮ ಸರ್ಕಾರಕ್ಕಿಂತ ಮುನ್ನ ಬಿಜೆಪಿಯವರು ನಾಲ್ಕು ವರ್ಷ ರಾಜ್ಯದಲ್ಲಿ ಅಧಿಕಾರ ಮಾಡಿದರು. ಅವರ ಕಾಲದಲ್ಲಿ ದೇವರು, ದೇವಾಲಯ, ಧರ್ಮ ವಿಚಾರ ಬಿಟ್ಟರೆ, ಜನರ ಹೊಟ್ಟೆ ತುಂಬಿಸಲು ಯಾವುದಾದರೂ ಒಂದು ಯೋಜನೆಯನ್ನು ನೀಡಿದ್ದಾರಾ? ನಿಮ್ಮ ಪಕ್ಕದ ಜಿಲ್ಲೆ ಮಂಗಳೂರಿನಲ್ಲಿ ಯುವಕರು ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯ, ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ಬಿಜೆಪಿ ಕೋಮು ದ್ವೇಷದ ಮೇಲೆ ರಾಜಕೀಯ ಮಾಡುತ್ತಿದೆ. ಈ ಕೋಮುಗಲಭೆಯಲ್ಲಿ ಬಿಜೆಪಿಯ ಯಾವುದೇ ನಾಯಕರ ಮಕ್ಕಳು ಇರುವುದಿಲ್ಲ. ಬಡವರು, ಜನ ಸಾಮಾನ್ಯರ ಮಕ್ಕಳು ಕೋಮುಗಲಭೆಗೆ ಬಲಿಯಾಗುತ್ತಿದ್ದಾರೆ” ಎಂದರು.

ಬಿಜೆಪಿಯವರು ಕೇವಲ ಹಿಂದೂಗಳು ಮಾತ್ರ ಮುಂದು ಎನ್ನುತ್ತಾರೆ. ಆದರೆ ನಾವು, ಹಿಂದೂ ಮುಸ್ಲಿಂ, ಕ್ರೈಸ್ತ, ಜೈನ, ಒಕ್ಕಲಿಗ, ಪರಿಶಿಷ್ಟರು ಸೇರಿದಂತೆ ಎಲ್ಲರೂ ಒಂದು ಎನ್ನುತ್ತಿದ್ದೇವೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ನಾವು ಹುಟ್ಟುವಾಗ ಇಂತಹುದೇ ಧರ್ಮ, ಇಂತಹುದೇ ಜಾತಿಯಲ್ಲಿ  ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಲು ಸಾಧ್ಯವೇ? ಸೂರ್ಯ, ಚಂದ್ರ, ಗಾಳಿ, ನೀರಿಗೆ ಜಾತಿ, ಧರ್ಮದ ಬೇಧವಿದೆಯೇ? ಬಿಜೆಪಿಯವರು ಸಮಾಜ ಒಡೆದು ರಾಜಕಾರಣ ಮಾಡಿದರೆ, ಕಾಂಗ್ರೆಸ್ ಸಮಾಜವನ್ನು ಒಂದುಗೂಡಿಸುತ್ತದೆ ಎಂದು ತಿಳಿಸಿದರು.

ಕುಮಾರಸ್ವಾಮಿಗೆ ಕಿಂಚಿತ್ತೂ ಉಪಕಾರ ಸ್ಮರಣೆಯಿಲ್ಲ:

ಕಳೆದ ಚುನಾವಣೆ ವೇಳೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಐದು ವರ್ಷ ಅಧಿಕಾರ ನೀಡಿದೆವು. ಆದರೆ ಕುಮಾರಸ್ವಾಮಿಗೆ ಕಿಂಚಿತ್ತೂ ಉಪಕಾರ ಸ್ಮರಣೆ ಇಲ್ಲ. ಅವರಿಗೆ ಸರ್ಕಾರ ಉಳಿಸಿಕೊಳ್ಳಲಾಗದೇ, ನಮ್ಮ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ನಾವು ನೋಡುವಷ್ಟು ನೋಡಿದೆವು. ಮೈತ್ರಿ ಸರ್ಕಾರವನ್ನು ಬೀಳಿಸಿದವರ ಜತೆ ಕುಮಾರಸ್ವಾಮಿ ಈಗ ಆಲಿಂಗನ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಹಾಸನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಲು ಸಾಧ್ಯವೇ? ಮೈತ್ರಿ ಸರ್ಕಾರವನ್ನು ಕೆಡವಲು ಕಾಂಗ್ರೆಸ್ ಪಕ್ಷವನ್ನು ಬಿಟ್ಟ ಎಲ್ಲಾ ಶಾಸಕರಿಗೂ ನಾನು ಸದನದಲ್ಲಿ ಒಂದು ಮಾತು ಹೇಳಿದ್ದೆ. ಬಿಜೆಪಿಯಲ್ಲಿ ನೀವೆಲ್ಲರೂ ರಾಜಕೀಯ ಸಮಾಧಿಯಾಗುತ್ತೀರಿ ಎಂದು ಹೇಳಿದ್ದೆ. ಈಗ ಅದು ನಿಜವಾಗಿದೆ ಎಂದರು.

ಇವರಲ್ಲಿ ಕೆಲವರು ಪಕ್ಷದಿಂದ ಹೋಗಿದ್ದೇ ಒಳ್ಳೆಯದಾಯ್ತು. ಪಕ್ಷ ಬಿಟ್ಟು ಹೋದವರಿಗೆ ಈಗ ಕಾಂಗ್ರೆಸ್ ಪಕ್ಷವೇ ಸರಿ ಎಂದು ಅರಿವಾಗಿದೆ. ನಾನು ಈಗಲೂ ದಳದ ಕಾರ್ಯಕರ್ತರಿಗೆ ಹೇಳುತ್ತಿದ್ದೇನೆ. ನೀವು ನಿಮ್ಮ ನಾಯಕರನ್ನು ನಂಬಿಕೊಂಡು ಕೂತರೆ ರಾಜಕೀಯ ಭವಿಷ್ಯವಿಲ್ಲ. ಅದು ಪಕ್ಷ ಅಲ್ಲ, ಕೇವಲ ಕುಟುಂಬ. ನನ್ನ ತಮ್ಮನನ್ನು ಸೋಲಿಸಲು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದರು. ನನಗೆ ತಂತ್ರ ಮಾಡಲು ಗೊತ್ತಿಲ್ಲವೇ? ಅದಕ್ಕೆ ಚನ್ನಪಟ್ಟಣದಲ್ಲಿ ಅವರ ಮೊಮ್ಮಗನನ್ನು ಸೋಲಿಸಿದೆವು. ಅವರಿಂದ ಕಲಿತ ಪಾಠವೇ ಬೇಕಾದಷ್ಟಿದೆ ಎಂದರು.

ಇಂದು ನೀವೆಲ್ಲರೂ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೀರಿ ಸಂತೋಷ. ಇನ್ನು ಮೇಲೆ ನೀವುಗಳು ಒಬ್ಬೊಬ್ಬರು ಐದು ಜನರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಬೇಕು. ಶ್ರೀಕಂಠೇಗಡರು ಹಾಗೂ ಪುಟ್ಟಸ್ವಾಮಿ ಗೌಡರ ನಾಯಕತ್ವದಲ್ಲಿ ಈ ಹಿಂದೆ ನಿಮ್ಮ ಜಿಲ್ಲೆಯಲ್ಲಿ 7ಕ್ಕೆ 7 ಸ್ಥಾನಗಳನ್ನು ಸ್ಥಾನ ಗೆದ್ದಿದ್ದೆವು ಎಂದು ನೆನಪಿಸಿದರು.

ಚನ್ನರಾಯಪಟ್ಟಣದ ಜೆಡಿಎಸ್ ಮುಖಂಡ ಹಾಗೂ ಹಾಸನ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎ.ಇ ಚಂದ್ರಶೇಖರ್, ಬಿಜೆಪಿಯ ಸಿ.ವಿ ರಾಜಪ್ಪ, ಜೆಡಿಎಸ್ ನ ಹೆಚ್.ಎಸ್. ಶ್ರೀಕಂಠಯ್ಯ, ಚನ್ನರಾಯಪಟ್ಟಣ ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಎ.ಸಿ. ಆನಂದ್ ಕುಮಾರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಶ್ರೀಮತಿ ಶ್ವೇತ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಹೆಚ್.ಎನ್. ಲವಣ ಮತ್ತಿತರ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡರು.

More articles

Latest article