ಕಲಬುರಗಿ : ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಯುವಜನತೆಗೆ ಆದರ್ಶವಾಗಿದ್ದಾರೆ ಅವರ ವಿಚಾರಗಳು ಇಂದಿಗೂ ನಮ್ಮ ಸಮಾಜವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ದೇಶಪ್ರೇಮಿ ಯುವಾಂದೋಲನ ಸಂಘಟನೆ ವಿಭಾಗೀಯ ಸಂಚಾಲಕರಾದ ಲಕ್ಷ್ಮಣ್ ಮಂಡಲಗೇರ ತಿಳಿಸಿದರು.
ನಗರದ ಜಿ ಡಿ ಎ ಬಡಾವಣೆಯಲ್ಲಿರುವ ಮೆಟ್ರಿಕ್ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ದೇಶಪ್ರೇಮಿ ಯುವಾಂದೋಲನ ಸಂಘಟನೆ ಆಯೋಜಿಸಿದ ಭಗತ್ ಸಿಂಗ್ ರಾಜಗುರು ಸುಖದೇವ್ ಅವರ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕರಾದ ರಾಜೇಂದ್ರ ರಾಜವಾಳ ಮಾತನಾಡಿ ಇಂದು ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಅವರ ಹುತಾತ್ಮ ದಿನವನ್ನು ದೇಶದಾದ್ಯಂತ ಸ್ಮರಿಸುತ್ತಿದ್ದೇವೆ. ಅವರು ಸಹಜ ಜೀವನವನ್ನು ಅನುಭವಿಸಬಹುದಾಗಿತ್ತು, ಆದರೆ ದೇಶದ ಸ್ವಾತಂತ್ರ್ಯ ಹಾಗೂ ಅದರ ಭವಿಷ್ಯದ ಪರಿಕಲ್ಪನೆಗಾಗಿ ತಮ್ಮ ಜೀವನವನ್ನು ಅರ್ಪಿಸಿದರು ಎಂದರು.
ಈ ಕಾಲದಲ್ಲಿ ದೇಶವು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯಿಂದ ಸಾಂಸ್ಕೃತಿಕ ಪಾತಾಳದತ್ತ ಬೀಳುತ್ತಿದೆ. ಹಣವಂತರಿಗೆ ಒಂದರೀತಿ ಮತ್ತು ಬಡವರಿಗೆ ಮತ್ತೊಂದರೀತಿ ಇರುವ ಶಿಕ್ಷಣ ವ್ಯವಸ್ಥೆ, ಉದ್ಯೋಗದ ಕೊರತೆ, ನಿರುದ್ಯೋಗದ ಭೀತಿಯ ನಡುವೆ ಯುವಜನರು ಬದುಕಲು ಹೋರಾಡುತ್ತಿದ್ದಾರೆ. ಭಗತ್ ಸಿಂಗ್ ಹೋರಾಡಿದ ಸ್ವಾತಂತ್ರ್ಯದ ದೃಷ್ಟಿಕೋಣ ಇಂದು ಶೋಷಣೆಯ ಹೊಸ ರೂಪಗಳಲ್ಲಿ ನಶಿಸುತ್ತಿರುವುದಂತಲ್ಲವೇ? ಈ ಹಿನ್ನೆಲೆಯಲ್ಲಿ ಸಿಂಗ್ ಹುತಾತ್ಮ ದಿನವನ್ನು ಹಮ್ಮಿಕೊಂಡಿದ್ದವು. ಈ ಸಂದರ್ಭದಲ್ಲಿ ಯುವಜನತೆ ಜಾತಿ-ಮತದ ಬೇಧವಿಲ್ಲದೆ ದೇಶದ ಸುಸ್ಥಿರ ಭವಿಷ್ಯದ ಕಡೆಗೆ ಗಮನ ಹರಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ದೇಶಪ್ರೇಮಿ ಯುವಾಂದೋಲನ ಜಿಲ್ಲಾ ಸಂಚಾಲಕ ಮೈಲಾರಿ ದೊಡ್ಮನಿ, ವಸತಿ ನಿಲಯದ ಮೇಲ್ವಿಚಾರಕರಾದ ನೀಲಕಂಟ ಸಿಂಗೆ, ವಸತಿ ನಿಲಯದ ವಿದ್ಯಾರ್ಥಿಗಳು ಮುಂತಾದವರು ಪಾಲ್ಗೊಂಡರು.