ದೇಶದ 36 ಪ್ರದೇಶಗಳ ಮೇಲೆ ದಾಳಿ: ಪಾಕ್‌ ನ 400 ಡ್ರೋಣ್‌ ಹೊಡೆದುರುಳಿಸಿದ ಸೇನೆ

Most read

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಪಾಕ್‌ ಪಡೆಗಳು ಡ್ರೋಣ್ ದಾಳಿಯನ್ನು ನಿರಂತರವಾಗಿ ಮುಂದುವರಿಸಿದ್ದು, ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ ನಲ್ಲಿರುವ ಅಂತರರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಆಗಾಗ್ಗೆ ಸ್ಫೋಟಗಳ ಶಬ್ಧ ಕೇಳಿ ಬರುತ್ತಲೇ ಇದೆ.
ಏಪ್ರಿಲ್‌ 22ರಂದು ಪಹಲ್ಗಾಮ್‌ ನಲ್ಲಿ ನಡೆದ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸಿದ್ದವು. ಇದರಿಂದ ಕಂಗೆಟ್ಟ ಪಾಕಿಸ್ತಾನ ಪಡೆಗಳು ಭಾರತದ ನಾಗರಿಕರು ಮತ್ತು ಸೇನಾ ನೆಲೆಗಳನ್ನು ಗರಿಯಾಗಿಸಿ ಗಡಿಯುದ್ದಕ್ಕೂ ದಾಳಿ ಮಾಡುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾರಾಮುಲ್ಲಾ, ಶ್ರೀನಗರ, ಅವಂತಿಪುರ, ನಾಗ್ರೋಟಾ, ಜಮ್ಮು, ಫಿರೋಜ್‌ ಪುರ, ಪಠಾಣ್‌ ಕೋಟ್, ಫಜಿಲ್ಕಾ, ಲಾಲ್‌ ಗಢ್ ಜಟ್ಟಾ, ಜೈಸಲ್ಮೇರ್, ಬಾರ್ಮರ್, ಭುಜ್, ಕುವಾರ್ಬೆಟ್ ಮತ್ತು ಲಖಿ ನಲಾ ಪ್ರದೇಶಗಳಲ್ಲಿ ಡ್ರೋಣ್ಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಶ್ರೀನಗರ ವಿಮಾಣ ನಿಲ್ದಾಣದ ಸಮೀಪ ಭಾರಿ ಸ್ಫೋಟಗಳು ಕೇಳುತ್ತಿದ್ದಂತೆ, ಪಂಜಾಬ್‌ನ ಪಠಾಣ್‌ಕೋಟ್‌, ಅಮೃತಸರ ಮತ್ತು ಪಿರೋಜ್‌ಪುರ ಜಿಲ್ಲೆಗಳಲ್ಲಿ ಬ್ಲಾಕ್‌ ಔಟ್‌ ಮಾಡಲಾಯಿತಾದರೂ ಪಾಕಿಸ್ತಾನ ಕತ್ತಲಲ್ಲೇ ಡ್ರೋಣ್‌ ಗಳನ್ನು ಹಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್‌ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್, ಸೇನಾಪಡೆಗಳ ಮುಖ್ಯಸ್ಥ ಲೆ. ಜನರಲ್‌ ಅನಿಲ್ ಚೌಹಾಣ್ ಹಾಗೂ ಮೂರು ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಶುಕ್ರವಾರ ಸಭೆ ನಡೆಸಿ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಿದ್ದಾರೆ.

ವೈಮಾನಿಕ ದಾಳಿಗಳನ್ನು ಹಿಮ್ಮೆಟ್ಟಿಸಲಾಗುತ್ತಿದೆ. ಸಶಸ್ತ್ರ ಪಡೆಗಳು ನಿಕಟ ಹಾಗೂ ನಿರಂತರವಾಗಿ ಕಟ್ಟೆಚ್ಚರ ವಹಿಸಿವೆ. ಅಗತ್ಯಾನುಸಾರ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ. ನಾಗರಿಕರು ವಾಸಿಸುವ ಪ್ರದೇಶಗಳಲ್ಲಿ ಅದರಲ್ಲೂ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ. ಭಾರತದ ಯಾರೊಬ್ಬರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ.ಆದರೆ ಜಾಗರೂಕರಾಗಿದ್ದು, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಕಿಸ್ತಾನ ಸೇನೆಯು ಲೇಹ್‌ನಿಂದ ಸರ್‌ ಕ್ರೀಕ್‌ವರೆಗಿನ ಪಶ್ಚಿಮ ಗಡಿಯುದ್ದಕ್ಕೂ ಭಾರತೀಯ ಪಡೆಗಳ ಮೇಲೆ ಹಲವು ಬಾರಿ ದಾಳಿ ನಡೆಸಿದೆ. 36 ಪ್ರದೇಶಗಳ ಮೇಲೆ ದಾಳಿ ಮಾಡಲು ಸುಮಾರು 300-400 ಡ್ರೋಣ್‌ ಗಳನ್ನು ಬಳಸಿದೆ. ಅವುಗಳನ್ನು ಭಾರತೀಯ ಪಡೆಗಳು ಹೊಡೆದುರುಳಿಸಿವೆ. ಡ್ರೋಣ್‌ ಗಳ ಮೂಲದ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಇವು ಟರ್ಕಿಯ ಡ್ರೋಣ್‌ ಗಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಭಾರತವು ಪ್ರತಿದಾಳಿ ನಡೆಸುತ್ತಿದ್ದರೂ, ‘ವೈಮಾನಿಕ ಗುರಾಣಿ’ಗಳನ್ನಾಗಿ ಬಳಸುವ ಸಲುವಾಗಿ ನಾಗರಿಕ ವಿಮಾನಗಳಿಗೆ ಅಂತರರಾಷ್ಟ್ರೀಯ ಗಡಿ ಸಮೀಪ ಹಾರಾಟ ನಡೆಸಲು ಅನುಮತಿಸುವ ಮೂಲಕ ಪಾಕಿಸ್ತಾನ ಬೇಜವಾಬ್ದಾರಿ ವರ್ತನೆ ಪ್ರದರ್ಶಿಸಿದೆ ಎಂದು ಖುರೇಷಿ ಟೀಕಿಸಿದ್ದಾರೆ. ಪಾಕ್‌ ಪಡೆಗಳು ಗಡಿಯುದ್ದಕ್ಕೂ ನಡೆಸಿದ ದಾಳಿಯಲ್ಲಿ ತಂಗ್‌ಧರ್‌, ಉರಿ, ಪೂಂಚ್‌, ಮೆಂಧರ್‌, ರಜೌರಿ, ಅಖ್ನೂರ್‌ ಮತ್ತು ಉಧಮ್‌ಪುರ್‌ ಪ್ರದೇಶಗಳಲ್ಲಿನ ಹಲವು ಗ್ರಾಮಗಳಲ್ಲಿ ಭಾರಿ ಹಾನಿಯುಂಟಾಗಿದೆ ಎಂದೂ ಹೇಳಿದ್ದಾರೆ.

More articles

Latest article