ಬೆಂಗಳೂರು: ಪಕ್ಷಾಂತರ ಭೀತಿಯಿಂದಾಗಿ ಬಿಡದಿಯ ವಂಡರ್ ಲಾ ರೆಸಾರ್ಟ್ ನಲ್ಲಿ ತಂಗಿರುವ ಅಸ್ಸಾಂನ ಕಾಂಗ್ರೆಸ್ ಶಾಸಕರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಚುನಾವಣೆಗೆ ಮುನ್ನ ಬಿಜೆಪಿ ಸೇರದಂತೆ ತಡೆಯುವ ಸಲುವಾಗಿ ಪಕ್ಷದ ಮುಖಂಡರು 12 ಶಾಸಕರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.
2026ರ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮೊದಲು ಪಕ್ಷಾಂತರದ ಪರ್ವ ಆರಂಭವಾಗಿದ್ದು, ಹಾಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಆಪರೇಷನ್ ಕಮಲಕ್ಕೆ ಒಳಗಾಗುವ ಭೀತಿಗೆ ಸಿಲುಕಿರುವ ಶಾಸಕರು ಬೆಂಗಳೂರಿನ ರೆಸಾರ್ಟ್ ನಲ್ಲಿ ರಕ್ಷಣೆ ಪಡೆದಿದ್ದಾರೆ.
ಶಾಸಕರ ರಕ್ಷಣೆಯ ಹೊರೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಹೊತ್ತುಕೊಂಡಿದ್ದು, ಶಾಸಕರು ವಾಸ್ತವ್ಯ ಹೂಡಿರುವ ರೆಸಾರ್ಟ್ ಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಶಾಸಕರ ರೆಸಾರ್ಟ್ ಯಾತ್ರೆಯನ್ನು ಅಸ್ಸಾಂ ಕಾಂಗ್ರೆಸ್ ಸಮರ್ಥಿಸಿಕೊಂಡಿದ್ದು, ಪಕ್ಷವನ್ನು ಚುನಾವಣಾಪೂರ್ವದಲ್ಲಿ ಒಟ್ಟಾಗಿ ಇಟ್ಟುಕೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಬಿಜೆಪಿ ಮುಖಂಡ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರೆಸಾರ್ಟ್ ಯಾತ್ರೆಯನ್ನು ಲೇವಡಿ ಮಾಡಿದ್ದು, ಕಾಂಗ್ರೆಸ್ನ ಆಂತರಿಕ ಭಯ ಮತ್ತು ಅಸ್ಥಿರತೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

