ಮುಂಬೈ: ಏರ್ ಇಂಡಿಯಾ ಗ್ರಹಗತಿಗಳು ಸಿರಿ ಇದ್ದ ಹಾಗೆ ಕಾಣಿಸುತ್ತಿಲ್ಲ. ಇಂದು ದೆಹಲಿಯಿಂದ ಪುಣೆಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ವಿಮಾನಯಾನ ಸಂಸ್ಥೆಯು ಪುಣೆಯಿಂದ ದೆಹಲಿಗೆ ಹೋಗಬೇಕಿದ್ದ ವಿಮಾನ ಸಂಚಾರವನ್ನು ರದ್ದುಪಡಿಸಿದೆ.
ದೆಹಲಿಯಿಂದ ಹೊರಟ ವಿಮಾನವು ಸುರಕ್ಷಿತವಾಗಿ ಪುಣೆಯಲ್ಲಿ ಇಳಿದಿದೆ. ಲ್ಯಾಂಡಿಂಗ್ ಆದ ನಂತರ ಪರಿಶೀಲಿಸಿದಾಗ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿರುವುದು ಪತ್ತೆಯಾಗಿದೆ ಎಂದು ಏರ್ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಪುಣೆಯಿಂದ ದೆಹಲಿಗೆ ತೆರಳಲು ನಿಗದಿಯಾಗಿದ್ದ AI2470 ವಿಮಾನವು ಪಕ್ಷಿ ಡಿಕ್ಕಿ ಹೊಡೆದ ಕಾರಣ ರದ್ದುಗೊಂಡಿದೆ. ವಿಮಾನವು ಪುಣೆಯಲ್ಲಿ ಸುರಕ್ಷಿತವಾಗಿ ಇಳಿದ ನಂತರ ಎಂಜಿನಿಯರಿಂಗ್ ತಂಡವು ವ್ಯಾಪಕ ತಪಾಸಣೆ ನಡೆಸುತ್ತಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರಿಗೆ ವಸತಿ ಸೌಕರ್ಯ ಒದಗಿಸಲಾಗುತ್ತದೆ. ಇತರ ನೆರವನ್ನೂ ನೀಡಲಾಗುತ್ತದೆ ಎಂದು ತಿಳಿಸಿದೆ.
ಟಿಕೆಟ್ ರದ್ದತಿ, ಮರುನಿಗದಿ, ಮರುಪಾವತಿ ಆಯ್ಕೆಯನ್ನು ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ಯಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದೂ ಏರ್ ಇಂಡಿಯಾ ತಿಳಿಸಿದೆ.
ಜೂನ್ 12 ರಂದು ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 242 ಜನರನ್ನು ಹೊತ್ತು ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 ಅಹಮದಾಬಾದ್ನಲ್ಲಿ ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ 275 ಪ್ರಯಾಣಿಕರು, ಸಿಬ್ಬಂದಿ ಮೃತಪಟ್ಟಿದ್ದರು.