ಧರ್ಮಸ್ಥಳ: ಚಿನ್ನಯ್ಯ ಹೇಳಿಕೆಗಳ ಬೆನ್ನು ಹತ್ತಿದ ಎಸ್‌ ಐಟಿ; ಮಹಿಳೆಯ ಕೊಲೆ ಬೆಳಕಿಗೆ; ʼಸಿ; ರಿಪೋರ್ಟ್‌ ಸಲ್ಲಿಸಿದ್ದ ಪೊಲೀಸರು

Most read

ಬೆಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ನೀಡಿರುವ ದೂರು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ ಐಟಿ)  ಧರ್ಮಸ್ಥಳದಲ್ಲಿ 2010ರಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿರುವುದನ್ನು ಪತ್ತೆಹಚ್ಚಿದೆ. ಚಿನ್ನಯ್ಯ ತೋರಿಸಿದ ಒಂದನೇ ಉತ್ಖನನ ಸ್ಥಳದಲ್ಲೇ ಮಹಿಳೆಯನ್ನು ಸುಟ್ಟು ಹೂತು ಹಾಕಲಾಗಿದೆ ಎಂದು ಎಸ್‌ ಐಟಿ ಮೂಲಗಳು ತಿಳಿಸಿವೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.

ಬಿಎನ್‌ ಎಸ್‌ ಎಸ್‌ 183ರ ಅಡಿಯಲ್ಲಿ ಚಿನ್ನಯ್ಯ ದಾಖಲಿಸಿದ ಎರಡನೇ ಹೇಳಿಕೆಯಲ್ಲೂ ಇದೇ ಅಂಶವನ್ನು ದಾಖಲಿಸಿದ್ದಾನೆ. ಸುಟ್ಟ ಸ್ಥಿತಿಯಲ್ಲಿದ್ದ ಮಹಿಳೆಯ ಶವವನ್ನು ತಾನು ತೋರಿಸಿದ ನಂ- 1 ಸ್ಥಳದಲ್ಲಿ  ಪೊಲೀಸರ ಸಮ್ಮುಖದಲ್ಲೇ ಹೂತು ಹಾಕಲಾಗಿದೆ ಎಂದು ಪುನರುಚ್ಚರಿಸಿದ್ದಾನೆ.

ಚಿನ್ನಯ್ಯ ಹೇಳಿಕೆಯನ್ನು ಕುರಿತು ಎಸ್‌ ಐಟಿ ತನಿಖೆ ನಡೆಸಿತಾದರೂ ಏನು ನಡೆದಿರಬಹುದು ಎಂದು ತಕ್ಷಣಕ್ಕೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಏಕಂದರೆ ಸ್ಥಳೀಯರೂ ಸಹ ಇಂತಹುದೊಂದು ಘಟನೆ ಸಂಭವಿಸಿದೆ ಎಂದು ನೆನೆಪು ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದರು. ತನಿಖೆ ನಡೆಯುತ್ತಿರುವಾಗ ಸ್ಥಳೀಯ ಪತ್ರಕರ್ತರೊಬ್ಬರು 2009ರಲ್ಲಿ ತಾನು ದ್ವಿಚಕ್ರ ವಾಹನ ಖರೀದಿಸಿದ ನಂತರ ಈ ಘಟನೆ ಸಂಭವಿಸಿದೆ ಎಂದು ಅಸ್ಪಷ್ಟವಾಗಿ ತಿಳಿಸಿದ್ದರು. ಆದರೆ ಆ ವರ್ಷದಲ್ಲಿ ಅಂತಹುದೊಂದು ಘಟನೆ ನಡೆದಿರುವುದನ್ನು ಖಚಿತ ಪಡಿಸಿಕೊಳ್ಳಲು ಎಸ್‌ ಐಟಿಗೆ ಸಾಧ್ಯವಾಗಲಿಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ ಐಟಿಯು ಪೊಲೀಸ್‌ ದಾಖಲೆಗಳನ್ನು ಪರಿಶೀಲಿಸಿ ಈ ನಿರ್ಧಿಷ್ಟ ಪ್ರಕರಣದಲ್ಲಿ ಎಫ್‌ ಐರ್‌ ದಾಖಲಾಗಿರುವುದನ್ನು ಪತ್ತೆ ಹಚ್ಚಿತ್ತು. 111/2010 ಇದು ಎಫ್‌ ಐಆರ್‌ ನಂಬರ್.‌ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿತ್ತು ಮತ್ತು ಶವದಲ್ಲಿ ಸುಟ್ಟ ಗಾಯಗಳ ಗುರುತುಗಳಿದ್ದವು ಎಂದು ಈ ಎಫ್‌ ಐಆರ್‌ ನಲ್ಲಿ ನಮೂದಾಗಿತ್ತು. ಶವವನ್ನು ಹೂತು ಹಾಕಿರುವುದು ಮತ್ತು ಅಂದಿನ ಪತ್ರಿಕೆಗಳಲ್ಲಿ ಈ ಮಹಿಳೆಯ ಶವದ ಭಾವಚಿತ್ರ ಮತ್ತು ಸುದ್ದಿ ಪ್ರಕಟವಾಗಿದ್ದನ್ನು ಎಸ್‌ ಐಟಿ ಪತ್ತೆ ಹಚ್ಚಿತ್ತು.  

ಈ ಪ್ರಕರಣದಲ್ಲಿ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದು ಬೆಳ್ತಂಗಡಿ ಪೊಲೀಸರು ʼಸಿʼ ರಿಪೋರ್ಟ್‌ ಸಲ್ಲಿಸಿದ್ದರು. ಚಿನ್ನಯ್ಯ ಪ್ರತಿಪಾದಿಸುತ್ತಿರುವುದರಲ್ಲಿ ಸತ್ಯಾಂಶ ಇದೆ ಎನ್ನುವುದು ಈ ವರದಿ ಎತ್ತಿ ತೋರಿಸಿತ್ತು. ಚಿನ್ನಯ್ಯನ ಹೇಳಿಕೆಗಳನ್ನು “ಸತ್ಯ ಮತ್ತು ಸುಳ್ಳುಗಳ ಮಿಶ್ರಣ” ಎಂದು ಮೂಲಗಳು ಪ್ರತಿಪಾದಿಸುತ್ತಿವೆ.

ಬೆಳ್ತಂಗಡಿ ನ್ಯಾಯಾಲಯಕ್ಕೆ ನವಂಬರ್‌ 20 ರಂದು ಸಲ್ಲಿಸಲಾದ ದೂರು ವರದಿಯಲ್ಲಿ ಹೋರಾಟಗಾರರು, ಧರ್ಮಸ್ಥಳದ ಮುಖ್ಯಸ್ಥರ ವಿರುದ್ಧ ಯಾವುದೇ ಪಿತೂರಿ ನಡೆಸಿಲ್ಲ ಎಂಬ ತೀರ್ಮಾನಕ್ಕೆ ಬಂದಿಲ್ಲ ಎಂದು ಎಸ್‌ ಐಟಿ ಮೂಲಗಳು ಖಚಿತಪಡಿಸಿವೆ. ಹೋರಾಟಗಾರರು ಪಿತೂರಿ ನಡೆಸಲು ಸಂಚು ರೂಪಿಸಿದ್ದಾರೆಯೇ ಹೊರತು ಧರ್ಮಸ್ಥಳದ ಮುಖ್ಯಸ್ಥರ ವಿರುದ್ಧ ಅಲ್ಲ ಎಂದೂ ತಿಳಿದು ಬಂದಿದೆ.

ಹಾಗೆಯೇ ಎಸ್‌ ಐಟಿಯು ಧರ್ಮಸ್ಥಳ ಮುಖ್ಯಸ್ಥರಿಗೆ ಕ್ಲೀನ್‌ ಚಿಟ್‌ ಕೂಡಾ ನೀಡಿಲ್ಲ ಎನ್ನುವುದು ಮುಖ್ಯ. ಅಸ್ವಾಭಾವಿಕ ವರದಿಗಳು, ಮಿಸ್ಸಿಂಗ್‌ ದೂರುಗಳು ಮತ್ತು ಬಂಗ್ಲೆಗುಡ್ಡಕ್ಕೆ ಸಂಬಂಧಪಟ್ಟ ವಿಷಯಗಳ ತನಿಖೆಯನ್ನು ಎಸ್‌ ಐಟಿ ಮುಂದುವರೆಸಿದೆ ಎಂದು ಮೂಲಗಳು ಖಚಿತಪಡಿಸಿವೆ.  

More articles

Latest article