ಹಾಸನ ಜಿಲ್ಲೆಯ ಹೆಣ್ಣುಮಕ್ಕಳ ಸಮಾಧಿ ಕಟ್ಟಲಾಗುತ್ತಿದೆ: ರೂಪ ಹಾಸನ್

Most read

ಹಾಸನ: ಇಲ್ಲಿ ನಡೆದಿರುವುದು ಕೇವಲ ಒಂದು ಲೈಂಗಿಕ ಹಗರಣವಲ್ಲ. ಇದು ವಿಕೃತ ಲೈಂಗಿಕ ಹತ್ಯಾಕಾಂಡ. ಹೆಣ್ಣುಮಕ್ಕಳ ಮಾನ, ಪ್ರಾಣ, ಕುಟುಂಬವನ್ನು ಲೆಕ್ಕಿಸದೆ ಸಂಸದನೊಬ್ಬ ನಡೆಸಿರುವ ಕಾಮಕೃತ್ಯ. ಅದನ್ನ ವಿಡಿಯೋ ಮಾಡಿದ್ದು, ತನ್ನ ನಿರ್ಲಕ್ಷ್ಯದಿಂದ ಮತ್ತೊಬ್ಬರಿಗೆ ಸಿಗುವಂತೆ ಮಾಡಿದ್ದು, ಹಾಗೂ ಚುನಾವಣಾ ದಾಳವಾಗಿ ಬಳಸಿಕೊಂಡು ಹಂಚಿದವರು, ಆ ವಿಡಿಯೋಗಳನ್ನು ಇಟ್ಟುಕೊಂಡು ಬೇಕಾದಂತೆ ಬಳಸಿಕೊಂಡವರು.. ಹೀಗೆ ಎಲ್ಲ ಹಂತಗಳನ್ನು ಖಂಡಿಸಬೇಕಿದೆ ಎಂದು ಸಾಹಿತಿ ರೂಪ ಹಾಸನ್‌ ಹೇಳಿದರು.

ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಷ್ಟೆಲ್ಲ ಹಂತಗಳಲ್ಲಿ ವಿಡಿಯೋ ಹರಿಬಿಡಲಾಗ್ತಿದೆ ಅನ್ನೋದು ಇಲ್ಲಿನ ಹೋರಾಟಗಾರರು, ಜನತೆಗೆ ಗೊತ್ತಿದೆ. ಇಲ್ಲಿನ ಹೆಣ್ಣುಮಕ್ಕಳ ಸಮಾಧಿ ಕಟ್ಟಲಾಗುತ್ತಿದ್ದು, ಹೆಣ್ಣುಮಕ್ಕಳ ಜರ್ಜರಿತರಾಗಿ ಸ್ಥಿತಿಯನ್ನು ನೋಡಿ ನೊಂದಿದ್ದೇವೆ. ಅತ್ಯಂತ ತಳಸಮುದಾಯದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಪ್ರಜ್ವಲ್ ತನ್ನ ಕಾಮಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಹಾಗಾಗಿ, ನಿಮ್ಮೊಂದಿಗೆ ನಾವಿದ್ದೇವೆ, ನೊಂದ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಬಂದು ಎಸ್ಐಟಿ ಮುಂದೆ ನಿಮ್ಮ ದೂರು ದಾಖಲಿಸಿ ಎಂದು ವಿನಂತಿಸುತ್ತೇವೆ ಎಂದರು.

ಸರ್ಕಾರಗಳೇ ಜವಾಬ್ದಾರಿಯಿಂದ ವರ್ತಿಸಬೇಕಿದೆ. ಪ್ರಜ್ವಲ್ ರೇವಣ್ಣನನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಕ್ಷಿಸುತ್ತಿವೆ. ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ರಾಜಕೀಯ ನಾಯಕರು ಈ ಆಟವನ್ನು ಇನ್ನಾದರೂ ನಿಲ್ಲಿಸಬೇಕು. ತಕ್ಷಣ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಇಂದಿಗೂ ಈ ಕ್ಷಣಕ್ಕೂ ವಿಡಿಯೋ ಹರಿಬಿಡುತ್ತಿರುವವರನ್ನು ಹೆಡೆಮುರಿಕಟ್ಟಿ, ಪ್ರಕರಣಕ್ಕೆ ಅಂತ್ಯ ಹಾಡಿ. ಇಲ್ಲದಿದ್ದರೆ ಸರ್ಕಾರಗಳ ಮೇಲೆ ನಂಬಿಕೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ನಿಮ್ಮ ರಾಜಕೀಯ ನಿಲ್ಲಿಸಿ. ಹೆಣ್ಣುಮಕ್ಕಳ ಸಮಾಧಿಯ ಮೇಲೆ ಭವ್ಯ ಬಂಗಲೆ ಕಟ್ಟುತ್ತಿರುವುದನ್ನು ನಿಲ್ಲಿಸಿ. ಸರ್ಕಾರಗಳು ಇನ್ನಾದರೂ ಜವಾಬ್ದಾರಿಯಿಂದ ವರ್ತಿಸದಿದ್ದರೆ ಅಂತಹ ಸರ್ಕಾರಗಳ ವಿರುದ್ಧ ಮತ್ತೊಂದು ರೀತಿಯ ಗಟ್ಟಿತನದ ಹೋರಾಟವನ್ನು ಕಟ್ಟಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

More articles

Latest article