ಬೆಂಗಳೂರು : ವಿಮಾನವೊಂದು ನಾಲ್ಕು ಗಂಟೆಗಳ ಕಾಳ ಆಗಸದಲ್ಲಿ ಸುತ್ತು ಹೊಡೆದು ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿರುವ ಘಟನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್ನಿಂದ ಹುಬ್ಬಳ್ಳಿಗೆ ಹೊರಟ FLY91 ವಿಮಾನವು ಸಂಜೆ 4.30 ರ ವೇಳೆಗೆ ಹುಬ್ಭಳ್ಳಿಗೆ ಆಗಮಿಸಬೇಕಾಯಿತು. ಆದರೆ, ಹವಾಮಾನ ವೈಪರೀತ್ಯದಿಂದ ವಿಮಾನ ಹೆಚ್ಚು ಅಲುಗಾಡ ತೊಡಗಿತು. ಅಲ್ಲದೇ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಸಾದ್ಯವಾಗಲಿಲ್ಲ. ಇದರಿಂದ ವಿಮಾನದೊಳಗಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೀಡಾದರು.
ಲ್ಯಾಂಡಿಂಗ್ಗೆ ಸರಿಯಾದ ನಿಲ್ದಾಣ ಸಿಗದಿದ್ದರಿಂದ ವಿಮಾನ ಆಗಸದಲ್ಲೇ ಸುತ್ತು ಹೊಡೆಯಲಾರಂಭಿಸಿತು. ಸರಿ ಸುಮಾರು ನಾಲ್ಕು ಗಂಟೆಗಳ ಕಾಲ ವಿಮಾನದಲ್ಲಿದ್ದ ಪ್ರಯಾಣಿಕರು ಜೀವ ಹಿಡಿದುಕೊಂಡು ಕೂತಿದ್ದರು. ವಿಮಾನದಲ್ಲಿದ್ದ ಕೆಲ ಮಹಿಳಾ ಸಿಬ್ಬಂದಿಗಳು ಕೂಡ ಕಣ್ಣಿರಿಡುತ್ತಿದ್ದರು. ಅಲ್ಲದೇ, ಮಗುವೊಂದು ವಿಮಾನದಲ್ಲಿ ಬಿದ್ದ ಘಟನೆಯೂ ನಡೆಯಿತು. ಇವೆಲ್ಲವೂ ಪ್ರಯಾಣಿಕರನ್ನು ಇನ್ನು ಬದುಕುತ್ತೇವೋ ಇಲ್ಲವೋ ಎಂಬಂತೆ ಮಾಡಿತ್ತು. ತಮ್ಮ ಕುಟುಂಬಸ್ಥರಿಗೆ ವಿಡಿಯೋಗಳನ್ನು ಮಾಡಿ ಕಳುಹಿಸಿದ್ದರು. ಪ್ರಯಾಣಿಕರು ಗಾಬರಿಗೆ ಒಳಗಾಗಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.
ಕೊನೆಗೂ ವಿಮಾನ ಸಂಜೆ 7 ಗಂಟೆಗೆ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಯಿತು. ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಬೆಂಗಳೂರಿನಲ್ಲಿ ವಿಮಾನದಲ್ಲಿ ಇಳಿದ ನಂತರ ಅಲ್ಲಿನ FLY91 ಏರ್ಲೈನ್ಸ್ನ ಸಿಬ್ಬಂದಿ ಪ್ರಯಾಣಿಕರನ್ನು ನಡೆಸಿಕೊಂಡ ರೀತಿ ತೀವ್ರ ಅಸಮಾಧಾನ ಮೂಡಿಸಿದೆ.
ನಾಲ್ಕು ಗಂಟೆಗಳ ಕಾಲ ವಿಮಾನದಲ್ಲಿ ಜೀವ ಹಿಡಿದುಕೊಂಡು ಕೂತಿದ್ದ ಪ್ರಯಾಣಿಕರಿಗೆ ಕನಿಷ್ ಸಾಂತ್ವಾನವನ್ನು ಹೇಳಲಿಲ್ಲ. ಅವರಿಗೆ ಬೇಕಾದ ಅಗತ್ಯ ಸೌಲಭ್ಯವನ್ನು ಕಲ್ಪಿಸಲಿಲ್ಲ. ವೈದ್ಯಕೀಯ ಸಿಬ್ಬಂದಿಯೂ ಇರಲಿಲ್ಲ. ತಕ್ಷಣವೇ ಹುಬ್ಬಳ್ಳಿಗೆ ವಿಮಾನ ಹೊರಡಲಿದೆ. ಹತ್ತುವವರು ಹತ್ತಿ ಇಲ್ಲದಿದ್ದರೆ ಇಳಿಯಿರಿ ಎಂಬಂತೆ ಉದಾಸೀನ ಮಾತುಗಳು ಪ್ರಯಾಣಿಕರನ್ನು ಕಂಗೆಡುವಂತೆ ಮಾಡಿದೆ ಎಂದು ಪ್ರಯಾಣಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪ್ರಯಾಣಿಕರೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಏರ್ಲೈನ್ಸ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

