ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಬಂಧೀಖಾನೆಗಳಲ್ಲಿ ಕಳೆದ 36 ಗಂಟೆಗಳಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಮೊಬೈಲ್, ಚಾಕು, ಚೂರಿ ಗಾಂಜಾ ಸೇರಿದಂತೆ ಅನೇಕ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ (ಕಾರಾಗೃಹ) ಅಲೋಕ್ ಕುಮಾರ್ತಿಳಿಸಿದ್ದಾರೆ. ಅವರು ಕಾರಾಗೃಹ ಡಿಜಿಪಿಯಾಗಿ ನೇಮಕವಾಗುತ್ತಿದ್ದಂತೆ ಜೈಲುಗಳ ಮೇಲೆ ದಾಳಿ ಚುರುಕುಗೊಂಡಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಆರು ಮೊಬೈಲ್, ನಾಲ್ಕು ಚಾಕುಗಳು, ಮೈಸೂರು ಜೈಲಿನಿಂದ ಒಂಬತ್ತು ಮೊಬೈಲ್ ಮತ್ತು 11 ಸಿಮ್ ಕಾರ್ಡ್, ‘ಬೆಳಗಾವಿ ಜೈಲಿನಲ್ಲಿ ನಾಲ್ಕು ಮೊಬೈಲ್, ಹೊರಗಿನಿಂದ ಎಸೆದಿದ್ದ 366 ಗ್ರಾಂ ಗಾಂಜಾ, ಮಂಗಳೂರು ಜೈಲಿನಿಂದ ನಾಲ್ಕು ಮೊಬೈಲ್ ಮತ್ತು ವಿಜಯಪುರ ಜೈಲಿನಿಂದ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆಎಂದು ಅವರು ‘ಎಕ್ಸ್‘ನಲ್ಲಿ ಹಂಚಿಕೊಂಡಿದ್ದಾರೆ.
ಜೈಲುಗಳ ಒಳಗೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದೂ ಹೇಳಿದ್ದಾರೆ.

