ಬೆಂಗಳೂರು: ವರ್ಷಾಂತ್ಯದಲ್ಲಿ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಎನ್ನುವುದು ಬಿಜೆಪಿಯ ಮುಂದುವರೆದ ಚುನಾವಣಾ ತಂತ್ರದ ಕುತಂತ್ರ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.
ಜನಸಾಮಾನ್ಯರ ಜೀವನ ಕುರಿತು ಬಿಜೆಪಿ ಆಸಕ್ತಿ ತೋರುವುದಿಲ್ಲ. ಕೇವಲ ಚುನಾವಣೆ, ದೇವರು, ಧರ್ಮ ಎಂದು ಹೇಳಿಕೊಂಡು ಬದುಕಿರುವ ಬಿಜೆಪಿ ಈಗ ಬಿಹಾರದ ಚುನಾವಣೆ ಸಮಯದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ ಐಆರ್) ಎಂಬ ಹೊಸ ತಂತ್ರವನ್ನು ಬಳಸಲು ಆರಂಭಿಸಿದೆ. ಈ ಬಾರಿಯ ಚುನಾವಣಾ ಸಮೀಕ್ಷೆಗಳು ಎನ್ ಡಿಎ ಪಕ್ಷಗಳ ಪರವಾಗಿಲ್ಲ. ಹಾಗಾಗಿ, ಮತದಾನದ ಮೇಲೆ ಪ್ರಭಾವ ಬೀರುವ ದೃಷ್ಟಿಯಿಂದ ಮತದಾರರ ಪರಿಷ್ಕರಣೆ ಎಂಬ ಹೊಸ ಕುತಂತ್ರ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.
ಪರಿಷ್ಕರಣೆ ನೆಪದಲ್ಲಿ ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮತದಾರರನ್ನು ಮತದಾನದಿಂದ ಹೊರಗಿಡುವ ಸಂಚು ಮಾಡುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎನ್ನುವ ಬದಲು, ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಇದ್ದಾರೆಯೇ ಎಂದು ಹೇಳುತ್ತಾ ಗೊಂದಲ ಸೃಷ್ಟಿ ಮಾಡುತ್ತಿದೆ. ಇಲ್ಲಿ ಮೂಲ ಮತದಾರರೆಲ್ಲರಿಗೂ ಎಣಿಕೆ ಪತ್ರವನ್ನು ತುಂಬಲು ಸೂಚಿಸಲಾಗಿದೆ. ಇದೇ ಮೊದಲ ಬಾರಿ ಬಿಹಾರದಲ್ಲಿ ಇಂತಹ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಸಚಿವ ಮಹದೇವಪ್ಪ ಟೀಕಿಸಿದ್ದಾರೆ.