ಕೊಚ್ಚಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯೊಬ್ಬನಿಗೆ ವಿವಾಹವಾಗಲು ಕೇರಳ ಹೈಕೋರ್ಟ್ 15 ದಿನಗಳ ಪೆರೋಲ್ ನೀಡಿ ಆದೇಶಿಸಿದೆ.
ಜುಲೈ 13 ರಂದು ವಿವಾಹವಾಗಲು ಅವಕಾಶ ನೀಡುವಂತೆ ಅಪರಾಧಿ ಪ್ರಶಾಂತ್ ಅವರ ಪರವಾಗಿ ಅವರ ತಾಯಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ ಕುನ್ಹಿಕೃಷ್ಣನ್ ಅವರು ಪೆರೋಲ್ ನೀಡಿ ಆದೇಶಿಸಿದ್ದಾರೆ.
ಪ್ರಶಾಂತ್ ಗೆ ನ್ಯಾಯಾಲಯ ಜುಲೈ 12 ರಿಂದ 15 ದಿನಗಳ ಕಾಲ ಪೆರೋಲ್ ಮಂಜೂರು ಮಾಡಿ. ಜುಲೈ 26 ರಂದು ಸಂಜೆ 4 ಗಂಟೆಯೊಳಗೆ ಜೈಲಿಗೆ ಹಿಂತಿರುಗಬೇಕೆಂದು ನಿರ್ದೇಶನ ನೀಡಿದ್ದಾರೆ. ಪೆರೋಲ್ ಅರ್ಜಿಯನ್ನು ವಜಾಗೊಳಿಸಿದ್ದ ವಿಯ್ಯೂರು ಜೈಲಿನ ಅಧೀಕ್ಷಕರ ಆದೇಶವನ್ನು ಪ್ರಶ್ನಿಸಿ ಪ್ರಶಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಪರಾಧಿಯನ್ನು ಮದುವೆಯಾಗಲು ಆ ಯುವತಿಯೇ ನಿರ್ಧರಿಸಿದ್ದಾರೆ. ಆ ದೃಷ್ಟಿಕೋನದಿಂದ ಪ್ರಕರಣವನ್ನು ನೋಡುತ್ತಿರುವುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರವೂ ಆಕೆಯ ಪ್ರೀತಿ ಹಾಗೆಯೇ ಉಳಿದಿದೆ. ತಅನು ಮದುವೆಯಾಬೇಕಿದ್ದ ಯುವಕ ಜೈಲಿನಲ್ಲಿದ್ದು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆಂದು ತಿಳಿದಿದ್ದರೂ, ಆಕೆ ಆತನನ್ನು ಮದುವೆಯಾಗಲು ಸಿದ್ಧವಾಗಿದ್ದಾರೆ. ಆಕೆಯ ಧೈರ್ಯಶಾಲಿ ನಿಲುವನ್ನು ನ್ಯಾಯಾಲಯ ನಿರ್ಲಕ್ಷಿಸಲು ಸಾಧ್ಯವಿಲ್ಲ. ನನಗಿರುವ ವಿಶೇಷ ಕಾರ್ಯವ್ಯಾಪ್ತಿಯನ್ನು ಮೀರಿ ಅಪರಾಧಿಗೆ 15 ದಿನಗಳ ಅವಧಿಗೆ ಪೆರೋಲ್ ನೀಡುತ್ತಿದ್ದೇನೆ ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಅಮೆರಿಕದ ಖ್ಯಾತ ಕವಯಿತ್ರಿ ಮಾಯಾ ಏಂಜೆಲೋ ಬರೆದ, ‘ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ. ಅದು ತನ್ನ ಎಲ್ಲಾ ಎಲ್ಲೆಗಳನ್ನು ಮೀರಿ ಗುರಿ ಮುಟ್ಟುತ್ತದೆ’ ಎಂಬ ಸಾಲುಗಳನ್ನು ತಮ್ಮ ಆದೇಶದಲ್ಲಿ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ. ಜತೆಗೆ ಆ ಯುವತಿ ತನ್ನ ಜೀವನದಲ್ಲಿ ಸುಖವಾಗಿರಲಿ ಎಂದು ಈ ನ್ಯಾಯಾಲಯ ಆಶೀರ್ವಾದಿಸುತ್ತದೆ ಎಂದೂ ನ್ಯಾಯಮೂರ್ತಿ ತಿಳಿಸಿದ್ದಾರೆ.