ಲಖನೌ: ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಕನ್ವರ್ ಯಾತ್ರಾ ಮಾರ್ಗದಲ್ಲಿ ಧಾಬಾ ಮತ್ತು ಹೋಟೆಲ್ ಗಳ ಮಾಲೀಕರ ಪ್ಯಾಂಟ್ ಬಿಚ್ಚಿಸಿ ಧರ್ಮ ಪರಿಶೀಲಿಸುತ್ತಿರುವುದನ್ನು ಎಐಎಂಐಎಂ ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿರುವ ಕೆಲವು ಧಾಬಾ ಮಾಲೀಕರಿಗೆ ಅವರ ಧರ್ಮವನ್ನು ಪರಿಶೀಲಿಸಲು ಕೆಲವು ಸಂಘಟನೆಗಳ ಸದಸ್ಯರು ಪ್ಯಾಂಟ್ ಬಿಚ್ಚಿಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಮುಜಾಫರ್ ನಗರ ಹೆದ್ದಾರಿಯುದ್ದಕ್ಕೂ ಹಲವಾರು ಹೋಟೆಲ್ಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. 10 ವರ್ಷಗಳ ಹಿಂದೆ ಈ ಸ್ಥಳಗಳಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ. ಈಗ ಏನು ಸಮಸ್ಯೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇಲ್ಲಿ ಮೊದಲು ಕನ್ವರ್ ಯಾತ್ರೆ ಶಾಂತಿಯುತವಾಗಿ ನಡೆಯುತ್ತಿತ್ತು. ಈಗ ಇದೆಲ್ಲ ಏಕೆ ನಡೆಯುತ್ತಿದೆ ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಹೋಟೆಲ್ ಮಾಲೀಕರಿಗೆ ತಮ್ಮ ಪ್ಯಾಂಟ್ ಬಿಚ್ಚಲು ಈ ಸಂಘಟನೆಗಳಿಗೆ ಅಧಿಕಾರ ಕೊಟ್ಟವರು ಯಾರು? ಅವರು ಸರ್ಕಾರವನ್ನು ನಡೆಸುತ್ತಿದ್ದಾರೆಯೇ ಅಥವಾ ಆಡಳಿತದ ಉಸ್ತುವಾರಿ ವಹಿಸಿದ್ದಾರೆಯೇ? ಮೊದಲು ಪೊಲೀಸರು ಅವರನ್ನು ಬಂಧಿಸಬೇಕು ಎಂದು ಓವೈಸಿ ಆಗ್ರಹಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಮಾಜಿ ಸಂಸದ ಎಸ್.ಟಿ. ಹಸನ್ ಅವರೂ ಈ ಕ್ರಮವನ್ನು ಖಂಡಿಸಿ ಉತ್ತರಾಖಂಡದ ಕನ್ವರ್ ಯಾತ್ರೆ ಮಾರ್ಗದಲ್ಲಿ ಕೆಲವು ಹಿಂದೂ ಸಂಘಟನೆಗಳು ಹೋಟೆಲ್ ಮಾಲೀಕರ ಧರ್ಮ ಪರಿಶೀಲಿಸುತ್ತಿರುವುದು ಭಯೋತ್ಪಾದನೆಯ ಒಂದು ರೂಪ ಎಂದು ಟೀಕಿಸಿದ್ದಾರೆ.
ಈ ರೀತಿ ಗುರುತು ಪತ್ತೆ ಹಚ್ಚುವಾಗ ಮುಸ್ಲಿಮರು ಎಂದು ಕಂಡು ಬಂದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಅವರ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.