ಬೆಂಗಳೂರು: ರಾಜ್ಯದ ಎಲ್ಲ ಗುಡಿ, ಮಸೀದಿ, ಚರ್ಚ್ ಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಬೇಕು ಎಂದು ರಾಮ ಮನೋಹರ ಲೋಹಿಯಾ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿ.ಆರ್. ಅಂಬೇಡ್ಕರ್ ನೀಡಿರುವ ಸಂವಿಧಾನದ ಪ್ರಕಾರವೇ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತವೆ. ನ್ಯಾಯಾಧೀಶರು ಸಂವಿಧಾನ ಓದುತ್ತಾರೆ. ಆದರೆ ನ್ಯಾಯಾಲಯಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸದೇ ಇರುವುದು ವಿಷಾದನೀಯ. ಹೈಕೋರ್ಟ್ ಆದೇಶದ ಮೂಲಕ ನ್ಯಾಯಾಂಗ ವ್ಯವಸ್ಥೆಯ ಕಚೇರಿಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗುಡಿಗಳಲ್ಲಿ ಭಗವದ್ಗೀತೆ ಇರುವ ಹಾಗೆ ಸಂವಿಧಾನದ ಪುಸ್ತಕವೂ ಇರಬೇಕು. ಅರ್ಚಕರು ಪೂಜೆ ಆರಂಭಿಸುವ ಮೊದಲು ಸಂವಿಧಾನದ ಮುನ್ನುಡಿ ಓದಬೇಕು. ಚರ್ಚ್ಗಳಲ್ಲಿ ಫಾದರ್ ಗಳು ಬೈಬಲ್ ಓದುವುದಕ್ಕೆ ಮುನ್ನ ಸಂವಿಧಾನ ಓದಬೇಕು. ಮಸೀದಿಗಳಲ್ಲಿ ಮುಲ್ಲಾ, ಮೌಲ್ವಿಗಳು ಕುರಾನ್ ಪಠಣ ಮಾಡುವುದಕ್ಕೆ ಮುನ್ನ ಸಂವಿಧಾನ ಪಠಣ ಮಾಡಬೇಕು. ಜೈನ ಬಸದಿ, ಗುರುದ್ವಾರಗಳಲ್ಲೂ ಸಂವಿಧಾನದ ಮುನ್ನುಡಿ ಓದಿ ಧಾರ್ಮಿಕ ಆಚರಣೆ ಆರಂಭಿಸುವುದು ಕಡ್ಡಾಯವಾಗಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಸಂವಿಧಾನದ ಪ್ರತಿಗಳನ್ನು ರಾಜ್ಯ ಸರ್ಕಾರವೇ ದೇವಾಲಯ, ಚರ್ಚ್, ಮಸೀದಿ, ಬಸದಿ, ಗುರುದ್ವಾರಗಳಿಗೆ ಉಚಿತವಾಗಿ ಒದಗಿಸಬೇಕು ಎಂದು ಅವರು ಹೇಳಿಕೆ ನೀಡಿದ್ದಾರೆ. ಬಿಜೆಪಿಯವರ ಮನೋಭಾವ ಯಾವಾಗಲೂ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ವಿರೋಧಿಯಾಗಿರುತ್ತದೆ. ಮನುವಾದವನ್ನು ಪ್ರಚಾರ ಮಾಡುವುವದೇ ಬಿಜೆಪಿಯವರ ಉದ್ದೇಶವಾಗಿದ್ದು ಈ ಪಕ್ಷದ ಬಗ್ಗೆ ಅಹಿಂದ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಜನರು ಸದಾ ಎಚ್ಚರಿಕೆಯಿಂದ ಇರಬೇಕು. ಅಂಬೇಡ್ಕರ್ ವಾದದ ಬಗ್ಗೆ ಹೆಚ್ಚು ತಿಳಿವಳಿಕೆ ಪಡೆಯಬೇಕು ಎಂದೂ ಶಿವಣ್ಣ ತಿಳಿಸಿದ್ದಾರೆ.