ರೈಲು ಪ್ರಯಾಣದರ ಹೆಚ್ಚಿಸದಂತೆ ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಆಗ್ರಹ

Most read

ಚೆನ್ನೈ: ರೈಲ್ವೆ ಪ್ರಯಾಣದರವನ್ನು ಏರಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಖಂ ಡಿಸಿದ್ದಾರೆ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಪ್ರಯಾಣ ದರವನ್ನು ಏರಿಕೆ ಮಾಡದಂತೆ ಒತ್ತಾಯಿಸಿದ್ದಾರೆ.

ಜುಲೈ ಒಂದರಿಂದ ರೈಲು ಪ್ರಯಾಣದ ದರ ಏರಿಕೆಯಾಗಲಿದೆ. ಆದರೆ ಸಾಮಾನ್ಯ ಬೋಗಿಗಳ ಸಂಖ್ಯೆಯಲ್ಲಿ ಕಡಿತ ಮಾಡಲಾಗಿದೆ. ಈ ನಿರ್ಧಾರ ಜನರ ಸಂತೋಷವನ್ನು ಕಸಿದುಕೊಂಡಿದೆ ಎಂದು ಚೆನ್ನೈನಿಂದ ಕಟ್ಪಾಡಿಗೆ ರೈಲಿನಲ್ಲಿ ಪ್ರಯಾಣಿಸಿದ ಸ್ಟಾಲಿನ್ ಹೇಳಿದ್ದಾರೆ.

ಹವಾನಿಯಂತ್ರಿತ ಬೋಗಿಗಳನ್ನು ಹೆಚ್ಚಿಸಲು ಸಾಮಾನ್ಯ ರೈಲು ಬೋಗಿಗಳನ್ನು ಕಡಿಮೆ ಮಾಡುವ ಅಗತ್ಯವಿಲ್ಲ, ರೈಲು ಪ್ರಯಾಣ ದರಗಳನ್ನೂ ಹೆಚ್ಚಿಸುವ ಅಗತ್ಯವಿಲ್ಲ ಎಂದು ಸ್ಟಾಲಿನ್ ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.

ಮಧ್ಯಮ ವರ್ಗದ ಕುಟುಂಬಗಳು ಈಗಾಗಲೇ ಬೆಲೆ ಏರಿಕೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯ ಬಿಸಿಯಿಂದ ನಲುಗಿವೆ. ರೈಲು ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ಅವರ ಸಂಕಷ್ಟಗಳನ್ನು ಮತ್ತಷ್ಟು ಹೆಚ್ಚಿಸಬಾರದು. ಭಾರತೀಯ ರೈಲ್ವೆ ಕೇವಲ ಒಂದು ಸೇವೆಯಲ್ಲ. ಅದೊಂದು ಕುಟುಂಬ! ಎಂದು ಸ್ಟಾಲಿನ್‌ ಬಣ್ಣಿಸಿದ್ದಾರೆ.

ಜುಲೈ 1ರಿಂದ ಅನ್ವಯವಾಗುವಂತೆ, ಮೇಲ್‌, ಎಕ್ಸ್‌ ಪ್ರೆಸ್‌ ರೈಲುಗಳ ಎ.ಸಿ, ನಾನ್‌ ಎ.ಸಿ ಹಾಗೂ ಎರಡನೇ ದರ್ಜೆ ಪ್ರಯಾಣದ ಟಿಕೆಟ್‌ ದರಗಳನ್ನು ಕೊಂಚ ಹೆಚ್ಚಳ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ನಾನ್‌ ಎ.ಸಿ ಪ್ರಯಾಣ ದರದಲ್ಲಿ ಪ್ರತಿ ಕಿ.ಮೀ.ಗೆ ಕನಿಷ್ಠ 1 ಪೈಸೆ ಹೆಚ್ಚಳ, ಎ.ಸಿ ದರ್ಜೆ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಿಸುವ ಪ್ರಸ್ತಾವ ಮಾಡಿದೆ.ಉಪನಗರ ರೈಲು, ಮಾಸಿಕ ಟಿಕೆಟ್‌ ದರಗಳಲ್ಲಿ ಯಾವುದೇ ಹೆಚ್ಚಳ ಇಲ್ಲ. ಎರಡನೇ ದರ್ಜೆ ಸಾಮಾನ್ಯ ಟಿಕೆಟ್‌ಗೆ ಸಂಬಂಧಿಸಿ 500 ಕಿ.ಮೀ.ವರೆಗಿನ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ. 500 ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ ಅರ್ಧಪೈಸೆಯಷ್ಟು ಹೆಚ್ಚಳ ಮಾಡುವ ಪ್ರಸ್ತಾವ ಇದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

More articles

Latest article