ಪಕ್ಕಾ ಉಡಾಳನಾಗಿ ಬರ್ತಿದ್ದಾರೆ ನಟ ಚಂದನ್ ರಾಜ್;  ‘ರಾಜರತ್ನಾಕರ’ ಟ್ರೇಲರ್ ರಿಲೀಸ್

Most read

ಭರವಸೆಯ ನಟ ಚಂದನ್ ರಾಜ್ ನಟಿಸಿರುವ ‘ರಾಜರತ್ನಾಕರ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಚೌಮುದ ಬ್ಯಾನರ್  ಅಡಿ ಜಯರಾಮ ಸಿ.ಮಾಲೂರು ಅವರು ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವ ಚಿತ್ರ. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಚಂದನ್ ರಾಜ್ ಪಕ್ಕಾ ಉಡಾಳನಾಗಿ ಕಾಣಿಸಿಕೊಂಡಿದ್ದಾರೆ. ದುಡಿಬೇಕು ಅನ್ನೋದೆಲ್ಲ ಏನಿಲ್ಲ. ದುಡ್ ಮಾಡ್ಬೇಕು ಅಷ್ಟೇ. ಅದು ಫ್ಯಾಮಿಲಿನ ಇಕ್ಕಟ್ಟಿಗೆ ಸಿಲುಕಿಸಿಯಾದರೂ ಸರಿ ಎಂಬ ಉಡಾಫೆ ಬುದ್ದಿ ಇರುವವನೇ ಬುದ್ದಿವಂತ ಎಂದು ಸಾರುವ ಚಿತ್ರಕಥೆ ಹೊಂದಿರುವ ಚಿತ್ರ ಇದಾಗಿದೆ.  ಈ ಪಾತ್ರಕ್ಕೆ ಚಂದನ್ ರಾಜ್ ಹೇಳಿ ಮಾಡಿಸಿದ ನಟ ಎಂದು ಟ್ರೇಲರ್‌ ನೋಡಿರುವವರ ಅಭಿಪ್ರಾಯವಾಗಿದೆ.

ಇನ್ನು ಚಂದನ್ ರಾಜ್ ಗೆ ನಾಯಕಿಯಾಗಿ ಅಪ್ಸರಾ ಕಾಣಿಸಿಕೊಂಡಿದ್ದಾರೆ. ನಟನೆಯಲ್ಲಿ ಅಪ್ಸರೆಯೇ ಆಗಿದ್ದ ಅಪ್ಸರಾ ಸಿನಿಮಾ ತೆರೆಕಾಣುವುದಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇಡೀ ಚಿತ್ರತಂಡ ಅಪ್ಸರಾ ಅವರ ಅಗಲಿಕೆಗೆ ಕಂಬನಿ ಮಿಡಿದಿದೆ. ಅಪ್ಸರಾ ಪರವಾಗಿ ಅವರ ತಂದೆ ಮಾತನಾಡಿ, ಚಿತ್ರರಂಗ ಕುರಿತು ಮಗಳಿಗಿದ್ದ ಕನಸುಗಳನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ವಿರೇಶ್ ಬೊಮ್ಮಸಾಗರ, ತಮ್ಮ ಅಭಿಪ್ರಾಯ ಹಂಚಿಕೊಂಡು ನಾನು ಚಿತ್ರರಂಗಕ್ಕೆ ಕಾಲಿಟ್ಟು 10-12 ವರ್ಷಗಳಾಗಿವೆ. ಆದರೆ ಇದು ನನ್ನ ನಿರ್ದೇಶನದ ಚೊಚ್ಚಲ ಸಿನಿಮಾ. ಇದು ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷಟವಾಗುವ ಕಥೆ ಹೊಂದಿದೆ. ಎಲ್ಲರ ಮನೆಯಲ್ಲೂ ಇಂತಹ ಉಡಾಳನೊಬ್ಬ ಇದ್ದೇ ಇರುತ್ತಾನೆ. ಅಯ್ಯೋ! ಇದು ನಮ್ಮ ಮನೆಯಲ್ಲೇ ನಡೆದ ಘಟನೆ ಎಂದು ಮೆಲುಕು ಹಾಕದೆ ಇರಲಾರರು. ಹೀಗಾಗಿ ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತದೆ ಎಂದಿದ್ದಾರೆ.

ವೃತ್ತಿಯಲ್ಲಿ ರೈತನಾಗಿರುವ ನಿರ್ಮಾಪಕ ಜಯರಾಮ್ ತಮ್ಮ ಬೆವರಿನ ದುಡಿಮೆಯ ಹಣವನ್ನು ಸಿನಿಮಾ ನಿರ್ಮಾಣಕ್ಕೆ ಸುರಿದಿದ್ದಾರೆ. ಈ ಚಿತ್ರದ ಕಥೆಯೇ ನಾನು ಈ ಸಿನಿಮಾ  ಮಾಡುವುದಕ್ಕೆ ಕಾರಣವಾಗಿದೆ.  ‘ರಾಜರತ್ನಾಕರ’ ಚಿತ್ರದ ತಾಯಿ, ಮಗ, ಫ್ರೆಂಡ್, ಲವ್ವರ್ ಎಲ್ಲಾ ಪಾತ್ರದಲ್ಲೂ ಎಮೋಷನ್ಸ್‌ ಇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರದ ನಾಯಕ ಚಂದನ್ ಮಾತನಾಡಿ, ಈ ಸಿನಿಮಾದಲ್ಲಿ ಈ ರೀತಿಯ ಕಥೆ ನನಗೆ ಸಿಕ್ಕಿರುವುದು ನನ್ನ ಅದೃಷ್ಟ ಎಂದೇ ಭಾವಿಸುತ್ತೇನೆ. ನಮ್ಮ ನೇಟಿವಿಟಿ ಕಥೆಗಳನ್ನ ಮಾಡಬೇಕು ಎಂಬುದು ನನ್ನ ಬಹುದಿನಗಳ ಅಭಿಲಾಷೆಯಾಗಿತ್ತು. ನಾನು ಹುಟ್ಟಿ ಬೆಳೆದಿದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ. ಆದ್ದರಿಂದ ಈ ಪರಿಸರದ ಕಥೆಯನ್ನೇ ಆಧಾರವಾಗಿಟ್ಟುಕೊಂಡು ಒಂದು ಸಿನಿಮಾ ಮಾಡುವ ಕನಸು ಈಗ ನನಸಾಗಿದೆ. ನಿರ್ಮಾಪಕರು, ನಿರ್ದೇಶಕರ ಸಹಕಾರದಿಂದ ಸಾಧ್ಯವಾಗಿದೆ  ಎಂದರು.

 ಈ ಚಿತ್ರದಲ್ಲಿ ತಾಯಿಯಾಗಿ ಮನೋಜ್ಞವಾಗಿ ಅಭಿನಯಿಸಿರುವ  ಯಮುನಾ ಶ್ರೀನಿಧಿ ಮಾತನಾಡಿ, ವಿರೇಶ್ ಅವರು ನನಗೆ ಕಥೆಯ ಹೂರಣವನ್ನು ವಿವರಿಸಿದರು. ಮರು ಮಾತನಾಡದೆ ಅಭಿನಯಿಸುವುದಾಗಿ ಒಪ್ಪಿಕೊಂಡೆ. ತಾಯಿ ಪಾತ್ರ ನನ್ನ ಮನಸ್ಸನ್ನು ತಟ್ಟಿತ್ತು. ಅನೇಕ ಚಿತ್ರಗಳಲ್ಲಿ  ತಾಯಿಯಾಗಿ ಅಭಿನಯಿಸಿದ್ದರೂ ಈ ಚಿತ್ರದ ತಾಯಿ ಪಾತ್ರ ಇದುವರೆಗೂ ಅಭಿನಯಿಸಿದ ತಾಯಿ ಪಾತ್ರಗಳಿಗಿಂತ ವಿಭಿನ್ನವಾಗಿದೆ. ತೆರೆ ಮೇಲೆ ಸಿನಿಮಾ ನೋಡಿದಾಗ ಎಲ್ಲರಿಗೂ ಈ ಚಿತ್ರ ಕನೆಕ್ಟ್ ಆಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಹಾಸ್ಯನಟ ಚೇತನ್ ದುರ್ಗ  ಮಾತನಾಡಿ, ಇಷ್ಟು ದಿನ ಕಾಮಿಡಿಯನ್ ಆಗಿ ಅಭಿನಯಿಸುತ್ತಾ ಬಂದಿದ್ಧೇನೆ. ಆದರೆ ರಾಜರತ್ನಾಕರ ಸಿನಿಮಾದಲ್ಲಿ ಬೇರೆಯದ್ದೇ ರೀತಿಯ ಪಾತ್ರ ಇದೆ. ನಾನು ನಾಯಕನ ಒಳ್ಳೆಯ ಫ್ರೆಂಡ್ಸ್. ಒಂಥರಾ ಸೈಲೆಂಟ್ ಪಾತ್ರ. ಪೂರ್ಣಪ್ರಮಾಣದ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಅಂದರೆ ಉತ್ತಮ ಪಾತ್ರಗಳು ದಕ್ಕಬೇಕು. ಅಂತಹ ಪಾತ್ರ ನನಗೆ ದೊರಕಿದ್ದು ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

ಈ ಚಿತ್ರದಲ್ಲಿ ನಾಗರಾಜ್ ರಾವ್, ಯಮುನಾ ಶ್ರೀನಿಧಿ, ಚೇತನ್ ದುರ್ಗಾ, ಸಿದ್ದು, ಡಿಂಗ್ರಿ ನರೇಶ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ರಾಜರತ್ನಾಕರ ಮೂವಿ ನೋಡದಿದರೆ ಏನನ್ನೋ ಕಳೆದುಕೊಂಡಂತೆ ಅನ್ನಿಸದೆ ಇರದು, ನೋಡಿದರೆ ಏನನ್ನೋ ಗಳಿಸಿದ ಅನುಭವ ಖಂಡಿತಾ ಆಗದೆ ಇರದು.

More articles

Latest article