ಬೆಂಗಳೂರು: ಮನೆಯೊಂದರಲ್ಲಿ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಬಸವೇಶ್ವರ ನಗರ ಠಾಣೆ ಪೊಲೀಸರು ಅವರಿಂದ ರೂ.35 ಲಕ್ಷ ಮೌಲ್ಯದ 382 ಗ್ರಾಂ ಚಿನ್ನಾಭರಣ ಹಾಗೂ 286 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಠಾಣಾ ವ್ಯಾಪ್ತಿಯ ಸಾಯಿಬಾಬಾ ಬಡಾವಣೆಯ ಮನೆಯೊಂದರಲ್ಲಿ ನಾಲ್ಕು ಮಂದಿಯ ಕುಟುಂಬವೊಂದು ವಾಸವಾಗಿತ್ತು. ಸಂಜೆ ವೇಳೆ ಪೋಷಕರು ತಮ್ಮ ಕೆಲಸದ ನಿಮಿತ್ತ ಹೊರಹೋಗಿದ್ದರೆ ಸಹೋದರಿ ವಾಯು ವಿಹಾರಕ್ಕೆ ತೆರಳಿರುತ್ತಾರೆ. ಸಹೋದರ ಬಾಲ್ಕನಿಯ ಬಾಗಿಲು ತೆರೆದು ತಮ್ಮ ಕೊಠಡಿಯಲ್ಲಿ ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಿರುತ್ತಾರೆ.
ಆ ಸಂದರರ್ಭವನ್ನು ನೋಡಿಕೊಂಡಿದ್ದ ಕಳ್ಳರು ಬಾಲ್ಕನಿಯಿಂದ ಒಳನುಗ್ಗಿ ವಾರ್ಡ್ ರೋಬ್ ನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ವಾಕಿಂಗ್ ಮುಗಿಸಿಕೊಂಡು ಬಂದ ಸಹೋದರಿ ವಾರ್ಡ್ ರೋಬ್ ನಲ್ಲಿದ್ದ ಆಭರಣಗಳು ಕಳ್ಳತನವಾಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರು ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕುರುಬರ ಹಳ್ಳಿ ವೃತ್ತದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ ಮತ್ತಿಬ್ಬರು ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಕೆಲವು ಆಭರಣಗಳನ್ನು ಮಣಪ್ಪುರಂ ಅಸೆಟ್ ಫೈನಾನ್ಸ್ ನಲ್ಲಿ ಗಿರವಿಯಿಟ್ಟಿದ್ದು, ಉಳಿದ ಆಭರಣಗಳನ್ನು ರಾಜಾಜಿನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ.
35 ಲಕ್ಷ ರೂ. ಮೌಲ್ಯದ ಪ್ಲ್ಯಾಟಿನಂ ಚೈನ್, 3 ಜೊತೆ ಚಿನ್ನದ ಓಲೆ, ಸನ್ ಗ್ಲಾಸ್, 300 ಅಮೆರಿಕನ್ ಡಾಲರ್, 1.50 ಲಕ್ಷ ರೂ. ಮೌಲ್ಯದ ವೈಲ್ ಕಂಪನಿಯ ಕೈಗಡಿಯಾರ ಸೇರಿದಂತೆ ಎಲ್ಲ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.