ದೇವಾಲಯಗಳ 1 ಟನ್‌ ಚಿನ್ನವನ್ನು ಠೇವಣಿಯಾಗಿ ಇರಿಸಿದ ತಮಿಳುನಾಡು ಸರ್ಕಾರ

Most read

ಚೆನ್ನೈ:ದೇವಾಲಯಗಳಿಗೆ ಭಕ್ತರು ಕೊಡುಗೆಯಾಗಿ ನೀಡಿದ ಆದರೆ ಬಳಸಲಾಗದ ಸುಮಾರು 1 ಟನ್‌ ಗೂ ಅಧಿಕ ಚಿನ್ನವನ್ನು ಕರಗಿಸಿ 24 ಕ್ಯಾರೆಟ್‌ ನ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಮಿಳುನಾಡು ರಾಜ್ಯ ಮುಜರಾಯಿ ಇಲಾಖೆ ತಿಳಿಸಿದೆ. ಈ ರೀತಿ ಬಿಸ್ಕತ್‌ ಗಳನ್ನಾಗಿ ಪರಿವರ್ತಿಸಲಾದ 1 ಟನ್‌ಗೂ ಅಧಿಕ ಚಿನ್ನವನ್ನು ಬ್ಯಾಂಕುಗಳಲ್ಲಿ ಠೇವಣಿ (ಚಿನ್ನದ ಹೂಡಿಕೆ) ಇರಿಸಲಾಗಿದೆ ಎಂದು ಹೇಳಿದೆ.

ಈ ರೀತಿ ಠೇವಣಿಯಾಗಿ ಇರಿಸಿದ್ದರಿಂದ ಬ್ಯಾಂಕುಗಳಿಂದ ವಾರ್ಷಿಕವಾಗಿ  ರೂ.17.82 ಕೋಟಿ ಬಡ್ಡಿ ಲಭಿಸುತ್ತದೆ. ಈ ಬಡ್ಡಿ ಹಣವನ್ನು ಸಂಬಂಧಿತ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ. ಕಳೆದ ಮಾರ್ಚ್ 31 ರಂದು ಎಲ್ಲ ಚಿನ್ನವನ್ನು (10,74,123.488 ಗ್ರಾಂಗಳು) ಠೇವಣಿ ಇಡಲಾಗಿದೆ ಎಂದು ತಮಿಳುನಾಡು ಮುಜರಾಯಿ ಸಚಿವ ಪಿ.ಕೆ. ಶೇಖರ್ ಬಾಬು ತಿಳಿಸಿದ್ದಾರೆ.

ತಮಿಳುನಾಡಿನ 21 ಹಿಂದೂ ದೇವಾಲಯಗಳಿಗೆ ಈ ಚಿನ್ನ ಸೇರಿದೆ. ಅದರಲ್ಲಿ ತಿರುಚಿರಾಪಳ್ಳಿ ಜಿಲ್ಲೆಯ ಸಮಯಾಪುರಂನ ‘ಅರಳ್ಮಿಗು ಮಾರಿಯಮ್ಮನ್’ ದೇವಾಲಯದ ಚಿನ್ನವೇ ಹೆಚ್ಚಿನ ಪ್ರಮಾಣದಲ್ಲಿದೆ. 426.26 ಕೆ.ಜಿ ಚಿನ್ನವನ್ನು ಆ ದೇವಾಲಯದವರು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಕ್ತರು ದೇವಾಲಯಗಳಿಗೆ ಆಭರಣ ಅಥವಾ ಮತ್ತೊಂದು ರೂಪದಲ್ಲಿ ನೀಡಲಾದ ಆದರೆ, ಅವುಗಳನ್ನು ದೇವರು/ದೇವತೆಗಳಿಗೆ ಬಳಸದೇ ತೆಗೆದು ಇಟ್ಟಿದ್ದ ಚಿನ್ನವನ್ನು ಮಾತ್ರ ಈ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಶೇಖರ್ ಬಾಬು ತಿಳಿಸಿದ್ದಾರೆ. 21 ಹಿಂದೂ ದೇವಾಲಯಗಳಿಂದ ಪಡೆಯಲಾದ ಚಿನ್ನವನ್ನು ಮುಂಬೈನ ಸರ್ಕಾರಿ ಟಂಕಸಾಲೆಯಲ್ಲಿ ಕರಗಿಸಿ ಚಿನ್ನದ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯವನ್ನು ಮೇಲುಸ್ತುವಾರಿ ಮಾಡಲು ಮೂರು ಸಮಿತಿಗಳನ್ನು ರಚಿಸಲಾಗಿದ್ದು, ಪ್ರತಿ ಸಮಿತಿಗೂ ನಿವೃತ್ತ ನ್ಯಾಯಮೂರ್ತಿಗಳನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ದೇವಾಲಯಗಳನ್ನು ಪ್ರಾದೇಶಿಕವಾರು ವಿಂಗಡಿಸಿ ಸಮಿತಿಗಳನ್ನು ನೇಮಿಸಲಾಗಿದೆ ಎಂದು ಸಚಿವ ಬಾಬು ತಿಳಿಸಿದ್ದಾರೆ.

More articles

Latest article