ಬೆಂಗಳೂರು: ಬೆಂಗಳೂರು ಮತ್ತು ವಿಜಯಪುರ ನಡುವಿನ ಪ್ರಯಾಣವನ್ನು 10 ಗಂಟೆಗೆ ತಗ್ಗಿಸಲು ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಅವರು ಕರ್ನಾಟಕ ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (K ride) ನ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
- ಸಭೆ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಎಂ.ಬಿ ಪಾಟೀಲ್, ರಾಜ್ಯದ ಬಹುತೇಕ ಚಾಲ್ತಿಯಲ್ಲಿರುವ ಹಾಗೂ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಎಲ್ಲ ರೈಲ್ವೆ ಯೋಜನೆಗಳ ಕುರಿತು ಚರ್ಚಿಸಲಾಗಿದೆ. ಬೆಂಗಳೂರಿನಿಂದ ವಿಜಯಪುರ ನಡುವಿನ ರೈಲ್ವೆ ಪ್ರಯಾಣಕ್ಕೆ ಪ್ರಸ್ತುತ 14-15 ಗಂಟೆಗಳು ತಗುಲುತ್ತಿದ್ದು, ಒಮ್ಮೊಮ್ಮೆ 15-16 ಗಂಟೆಯೂ ಆಗುತ್ತಿದೆ. ಆದ್ದರಿಂದ ಈ ಪ್ರಯಾಣದ ಅವಧಿಯನ್ನು 10 ಗಂಟೆಗಳಿಗೆ ಇಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಭೆಯಲ್ಲಿ K-RIDE ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಎನ್. ಮಂಜುಳಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
ಸಚಿವರು ನೀಡಿದ ಇತರ ಸೂಚನೆಗಳು:
- ಗದಗ–ವಿಜಯಪುರ ಜೋಡಿ ಮಾರ್ಗ ಯೋಜನೆ ಕೊನೆಯ ಹಂತದಲ್ಲಿದ್ದು, ಬಾಗಲಕೋಟೆ ಸಮೀಪದ ಬಾಕಿ ಇರುವ ಭಾಗಕ್ಕೆ ಆದ್ಯತೆ ನೀಡಬೇಕು.
- ರೈಲ್ವೆ ವಿದ್ಯುದ್ದೀಕರಣ ಯೋಜನೆ ತ್ವರಿತಗತಿಯಲ್ಲಿ ಮುಗಿಸಬೇಕು. ನಂತರ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಅನುಕೂಲವಾಗಲಿದೆ.
- ಬಾಗಲಕೋಟೆ–ಕುಡಚಿ ಮಾರ್ಗದ ಖಜ್ಜಿದೋಣಿ–ಲೋಕಾಪುರ ಭಾಗದಲ್ಲಿರುವ ತೊಡಕುಗಳನ್ನು ನಿವಾರಿಸಬೇಕು.
- ಧಾರವಾಡ–ಕಿತ್ತೂರು–ಬೆಳಗಾವಿ ಹೊಸ ಮಾರ್ಗ ಈಗಾಗಲೇ ಮಂಜೂರಾಗಿದ್ದು, ಮೊಮ್ಮಿಗಟ್ಟಿ ಸಮೀಪ ಮಾರ್ಗ ಬದಲಾವಣೆಗಾಗಿ ಭೂಸ್ವಾಧೀನ ವಿಳಂಬವಾಗುತ್ತಿದೆ. ಇದನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿಶೇಷ ಸಭೆ ನಡೆಸಬೇಕು.
- ಲಿಂಗನಬಂಡಿ–ಕುಷ್ಟಗಿ, ಕುಷ್ಟಗಿ–ಜಿಮಲಾಪುರ, ತುಮಕೂರು–ದಾವಣಗೆರೆ ಮಾರ್ಗಗಳ ಪ್ರಗತಿ ಕುರಿತು ಸಮಾಲೋಚನೆ.
- ಹುಬ್ಬಳ್ಳಿ–ಅಂಕೋಲಾ ಮಾರ್ಗದ ಮರು ಸಮೀಕ್ಷೆ ಅಂತಿಮಗೊಂಡಿದ್ದು, ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಬೇಕು.