ಮಂಡ್ಯ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡುವ ಮಾರ್ಗದರ್ಶನದಂತೆ ನಡೆಯುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಜಿಲ್ಲೆಯ ಮಳವಳ್ಳಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ಕೂಡ ಒಳ್ಳೆಯ ಮಾರ್ಗದರ್ಶನ ನೀಡಿದರೆ ಅದನ್ನೂ ಪಾಲಿಸುತ್ತೇವೆ. ವಿಪಕ್ಷಗಳು ಟೀಕಿಸಿದರೂ ಬೇಸರವಿಲ್ಲ. ನಾವು ಮಾಡುವ ಕೆಲಸ ಮಾಡುತ್ತೇವೆ. ಜನರು ಎಲ್ಲವನ್ನೂಗಮನಿಸುತ್ತಿರುತ್ತಾರೆ ಎಂದರು.
ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಅಸೂಯೆಯಿಂದ ಕೂಡಿದೆ. ಅವರ ಅಸೂಯೆಗೆ ಮದ್ದಿಲ್ಲ. ರಾಜ್ಯದ ಬಗ್ಗೆ ಗೌರವ, ಸ್ವಾಭಿಮಾನ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿ. ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಕೊಡಿಸಲಿ ಎಂದು ಡಿಕೆಶಿ ತಿರುಗೇಟು ನೀಡಿದರು.
ಬಡವರ ಜೀವನದಲ್ಲಿ ಬದಲಾವಣೆ ತರಲು 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಬಿಜೆಪಿಯವರಿಗೆ ಹೃದಯ ಶ್ರೀಮಂತಿಕೆ ಇಲ್ಲ. ಸಮಾಜವನ್ನು ಒಡೆಯಲು ಹೋಗುತ್ತಿದ್ದಾರೆ. ನಾವು ಹಿಂದುಳಿದವರನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದೇವೆ. ಬಿಜೆಪಿಯವರು ಔಷಧ ತೆಗೆದುಕೊಂಡು ಹೊಟ್ಟೆಯುರಿ ಕಡಿಮೆ ಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.