ಅಭಿವೃದ್ಧಿ ಪಥದಲ್ಲಿ ಕಳೆದುಹೋಗುವ ಸಮಾಜ

Most read

76 ವರ್ಷಗಳ ಪ್ರಜಾಪ್ರಭುತ್ವವಾದಿ, ಸಂವಿಧಾನಬದ್ಧ ಆಳ್ವಿಕೆಯ ಹೊರತಾಗಿಯೂ ಇಂಡಿಗನತ್ತಗಳು, ಮೆಂದಾರೆಗಳು ಏಕೆ ಇನ್ನೂ ಕಾಣುತ್ತಿವೆ ? ಈ ಕುಗ್ರಾಮಗಳ ಆಸುಪಾಸಿನಲ್ಲೇ ತಮ್ಮ ಐಷಾರಾಮಿ ಬದುಕು ಸವೆಸುವ ಜನಪ್ರತಿನಿಧಿಗಳಿಗೆ ಈ ದುರಂತದ ಬದುಕು ಏಕೆ ಗೋಚರಿಸಲಿಲ್ಲ ? ಪಕ್ಷಾಂತರಿಯೋ, ತತ್ವಾಂತರಿಯೋ, ಮತಾಂತರಿಯೋ ಅಥವಾ ಬಣಾಂತರಿಯೋ, ಜನರಿಂದ ಚುನಾಯಿತರಾಗುವ ಅಥವಾ ತಿರಸ್ಕರಿಸಲ್ಪಡುವ ರಾಜಕೀಯ ನಾಯಕರಿಗೆ ಈ ಶೋಷಿತ ಜನರ ಬದುಕು ಏಕೆ ಗೋಚರಿಸುವುದಿಲ್ಲ ? – ನಾ ದಿವಾಕರ, ಚಿಂತಕರು

ಭಾರತದ ಸಾಮಾನ್ಯ ಜನತೆಯ ದೃಷ್ಟಿಯಿಂದ ಅಪೇಕ್ಷಿತ ಅಭಿವೃದ್ಧಿಗೂ, ಆಳ್ವಿಕೆಯ ಕೇಂದ್ರಗಳ ದೃಷ್ಟಿಯ ಪರಿಭಾವಿತ ಪ್ರಗತಿಗೂ, ನೆಲದ ವಾಸ್ತವಿಕತೆಯ ದೃಷ್ಟಿಯಿಂದ ಸಾಧಿಸಲ್ಪಟ್ಟ ಅಭಿವೃದ್ಧಿಗೂ ಇರುವ ಅಂತರವು ಈ ಏಳು ದಶಕಗಳ ಅಭಿವೃದ್ಧಿ ಮಾದರಿಗಳು ಮತ್ತು ಆಡಳಿತ ನೀತಿಗಳಿಗೆ ಕನ್ನಡಿ ಹಿಡಿದಂತಿರುತ್ತದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಪ್ರತಿಯೊಂದು ಸರ್ಕಾರವೂ ನೀಡುವ ಬಹುಮುಖ್ಯವಾದ ಆಶ್ವಾಸನೆ ಎಂದರೆ “ ಎಲ್ಲರ ಮನೆಗೂ ದೀಪ, ಎಲ್ಲ ಗ್ರಾಮಗಳಿಗೂ ರಸ್ತೆ, ಎಲ್ಲರಿಗೂ ಸೂರು ಇತ್ಯಾದಿ,,,”. ಸ್ವಚ್ಛಭಾರತ ಅಭಿಯಾನದ ನಂತರ ಇದಕ್ಕೆ ಶೌಚಾಲಯವೂ ಸೇರಿದೆ. ಅಂಕಿಅಂಶಗಳ, ದತ್ತಾಂಶಗಳ ದಸ್ತಾವೇಜುಗಳಿಂದ ಹೊರಬಂದು, ವಾಸ್ತವ ಜಗತ್ತಿಗೆ ತೆರೆದುಕೊಂಡಾಗ ಸಾಮಾನ್ಯರ ಕಣ್ಣಿಗೆ ಕಾಣುವುದು ಬೇರೆಯದೇ ಚಿತ್ರಣ. ಅಂತಹ ಒಂದು ಚಿತ್ರಣವನ್ನು ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆ ಸಮಾಜದ ಮುಂದಿಟ್ಟಿದೆ. ಇಂಡಿಗನತ್ತ-ಮೆಂದಾರೆ ಎಂಬ ಕುಗ್ರಾಮಗಳ ರೂಪದಲ್ಲಿ.

ಸಾಂಸ್ಕೃತಿಕ ನಗರಿಗೆ ಸಮೀಪದ, ಮಲೆ ಮಹದೇಶ್ವರ ಬೆಟ್ಟದ ಕಾಲಬುಡದಲ್ಲೇ ನಡುವೆ ಇರುವ ಎರಡು ಗ್ರಾಮಗಳು ಇಂಡಿಗನತ್ತ ಹಾಗೂ ಮೆಂದಾರೆ. ಈ ಗ್ರಾಮಗಳ ವಸ್ತುಸ್ಥಿತಿ ಮತ್ತು ಜನಜೀವನ ಹೇಗಿದೆ ಹಾಗೂ ಅಭಿವೃದ್ಧಿ ರಾಜಕಾರಣದ ಫಲಾನುಭವಿಗಳು ಈ ಗ್ರಾಮಗಳಲ್ಲಿ ಕಾಣುತ್ತಾರೆಯೇ ಎಂಬ ಶೋಧನೆ ನಡೆಸುವ ಮೂಲಕ ಆಂದೋಲನ ಪತ್ರಿಕೆಯ ಸಿಬ್ಬಂದಿ ಮಿತ್ರರು ಹೊರಜಗತ್ತಿಗೆ ವಿಸ್ಮಯ ಎನಿಸುವ ಸುಡು ವಾಸ್ತವಗಳನ್ನು ತೆರೆದಿಟ್ಟಿದ್ದಾರೆ. (ಆಂದೋಲನ ವಿಶೇಷ ವರದಿಗಳು- ಮೇ 13 ರಿಂದ 18ರವರೆಗೆ) ಇಂಡಿಗನತ್ತ ಮತ್ತು ಮೆಂದಾರೆ ಎಂಬ ʼ ಕುಗ್ರಾಮಗಳು ʼ ನಮ್ಮ ನಡುವೆಯೇ ಇದೆ ಎಂದು ಜಗತ್ತಿನ ಗಮನ ಸೆಳೆಯಲು ಕ್ರೋಧಿತ ಜನರು ಒಂದು ಮತಗಟ್ಟೆ ಧ್ವಂಸ ಮಾಡಬೇಕಾಯಿತು, ಎರಡು ಸಮುದಾಯಗಳ ನಡುವೆ ಸಂಘರ್ಷ ಏರ್ಪಡಬೇಕಾಯಿತು,

ಇಂಡಿಗನತ್ತ ..

800 ಜನಸಂಖ್ಯೆ ಇರುವ ಇಂಡಿಗನತ್ತ ಮತ್ತು ಕೇವಲ 200 ಜನರಿರುವ ಮೆಂದಾರೆ ನಗರದ ಒಂದು ಬಡಾವಣೆಗಿಂತಲೂ ಚಿಕ್ಕದು. ಮಹದೇಶ್ವರ ಮಲೆಯನ್ನೂ ಸೇರಿದಂತೆ 77 ಬೆಟ್ಟಗಳ ನಡುವೆ 8ಕಿಲೋಮೀಟರ್‌ ದೂರದಲ್ಲಿರುವ ಇಂಡಿಗನತ್ತ ಅಲ್ಲಿಂದ ಎರಡು ಕಿಲೋಮೀಟರ್‌ ದೂರದಲ್ಲಿರುವ ಮೆಂದಾರೆ ಈ ಎರಡೂ ಗ್ರಾಮಗಳಿಗೆ ತಲುಪಲು ಒಂದು ಕಚ್ಚಾ ರಸ್ತೆಯೂ ಇಲ್ಲ.  ಇಂಡಿನಗತ್ತ ದಾಟಿ ಮೆಂದಾರೆ ತಲುಪಲು ನಟರಾಜ ಸರ್ವೀಸ್‌ (ನಡಿಗೆ) ಒಂದೇ ಖಾಯಂ. ವಾಹನ ಯೋಗ್ಯ ರಸ್ತೆಯೂ ಇಲ್ಲಿಗೆ ಲಭ್ಯವಾಗಿಲ್ಲ. ಬೆಟ್ಟದ ಚಾರಣವೇ ದಾರಿ. ಇದಕ್ಕಿಂತಲೂ ಭೀಕರ ಪರಿಸ್ಥಿತಿ ಇರುವ 20ಕ್ಕೂ ಹೆಚ್ಚು ಗ್ರಾಮಗಳನ್ನು ಆಂದೋಲನ ವರದಿ ಉಲ್ಲೇಖಿಸಿದೆ. ಈ ಪ್ರತ್ಯಕ್ಷ ವರದಿಗಳ ಅನುಸಾರ ಕಳೆದ 15-20 ವರ್ಷಗಳಿಂದಲೂ ಈ ಗ್ರಾಮಗಳ ಜನತೆ ಕುಡಿಯುವ ನೀರು, ರಸ್ತೆ ಮತ್ತು ಮೂಲ ಸೌಕರ್ಯಗಳಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಅಂದರೆ ಅಲ್ಲಿಯವರೆಗೂ ಈ ಜನರ ಆಗ್ರಹಗಳೂ ಆಳ್ವಿಕೆಯ ವಾರಸುದಾರರ ಕಿವಿಗೆ ಬಡಿದಿರಲಿಲ್ಲ ಎಂದಾಯಿತು. ನಿಸರ್ಗದ ಒಡಲು ಎಂದೇ ಪರಿಗಣಿಸಲ್ಪಡುವ ದಟ್ಟ ಅರಣ್ಯಗಳ ನಡುವೆ ಇರುವ ಕುಗ್ರಾಮಗಳು ನೀರಿಗಾಗಿ, ಸೂರಿಗಾಗಿ, ಸಂಪರ್ಕಕ್ಕಾಗಿ ಪರದಾಡುವುದು ನಾಗರಿಕತೆಯ ಚೋದ್ಯ ಎನಿಸುವುದಿಲ್ಲವೇ ?

ತೋಕೆರೆ ಗ್ರಾಮದ ನಿವಾಸಿ ವೀರಣ್ಣ ಅವರ ಈ ಮಾತುಗಳು ಎಂತಹ ಅಸೂಕ್ಷ್ಮ ಮನಸ್ಸಿಗೂ ಚಾಟಿ ಏಟಿನಂತೆ ಕೇಳಿಸುತ್ತದೆ : “ ಮುಂದೆಲ್ಲ ಮಳೆ ಬೆಳೆ ಚೆಂದಗಾಗದು. 80 ಕಾಲ್ನಡ, 100 ಕಾಲ್ನಡ ದೊಡ್ಡಿ ಹೊಸ್ಗೊಳ್‌ ಸಾಕಿದ್ದೋ. ಯಾವಾಗ್ಲೂ ಕೆರೆ ತುಂಬಿರ್ತಿತ್ತು. ಈಗ ಕೆರೇಲಿ ನೀರೂ ಇಲ್ಲ. ತುಟಿಗೆ ಸವರ್ಕಳಕೂ ತುಪ್ಪ ಇಲ್ಲ. ಯಾರಾದರೂ ಉಷಾರ್‌ ತಪ್ಪದ್ರ ಡೋಲೀಲಿ ಹೊತ್ಕ ಹೋಗ್ಬೇಕು. ದಾರಿ ಮಧ್ಯ ಸತ್ರ ಅಲ್ಲೇ ಹೆಣ ಬಿಸಾಕ್ಬುಟ್ಟು ವಾಪಸ್‌ ಬರ್ಬೇಕು ಅಂಗಾಗದ ನಮ್‌ ಸ್ಥಿತಿ ”.

ಮೆಂದಾರೆ ಪೋಡಿನ ಗಿರಿಜನರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಮತ್ತೋರ್ವ ಕೊಕ್ಕಬೋರೆಯ ನಿವಾಸಿ ಬೊಮ್ಮಮ್ಮ ಅವರ ಮಾತು ಕೇಳಿ : “ ಊರಿಗ್‌ ಇರದೇ ಒಂದ್ಬೋರು. ಅದೂ ದಾರದಂಗೆ ನೀರು. ಮನೆಗೊಂದು ಹೆಂಗ್ಸು ನೀರು ಹಿಡಿಯಕೇ ದಿನ್ವೆಲ್ಲಾ ಕಾಯ್ಕ ಕೂತ್ಕಬೇಕು. ದಿನಾಲು ಸಿಕ್ಕ 5 ಬಿಂದ್ಗ ನೀರ್ಲೇ ಮನಲಿರೋರ್‌ ವ್ಯವಾರ. ಈ ಗೋಳು ಯಾವ್‌ ಕಾಲಕ್‌ ತೀರಿದೋ ”. (ಆಂದೋಲನ ವರದಿ 17 ಮೇ 2024)

ಈ ಮಾತುಗಳಲ್ಲಿ ಉತ್ಪ್ರೇಕ್ಷೆಯಿಲ್ಲ. ಆಕ್ರೋಶವೂ ಇಲ್ಲ. ಮನದಾಳದ ವೇದನೆಯ ನುಡಿಗಳಿವು. ಕಾಡು ಮೇಡುಗಳ ನಡುವೆ ನಿಸರ್ಗದ ಒಡಲಲ್ಲಿ ವಾಸಿಸುತ್ತಾ ತಮ್ಮ ಅಲ್ಪ ಜಮೀನಿನ ವ್ಯವಸಾಯ ಮಾಡುತ್ತಾ ಬದುಕುತ್ತಿರುವ ಈ ನೂರಾರು ಕುಟುಂಬಗಳಿಗೆ ಶಿಕ್ಷಣ, ಆರೋಗ್ಯ, ವಿದ್ಯುತ್‌ ದೀಪ, ಕುಡಿಯುವ ನೀರು, ಶಾಲೆ, ಆಸ್ಪತ್ರೆ ಎಲ್ಲವೂ ಸಹ ಹೊರಜಗತ್ತಿನ ಲಕ್ಷುರಿಗಳಂತೆಯೇ ಕಾಣುತ್ತವೆ.  “ ಈ ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು 18 ಕೋಟಿ ರೂ ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧವಾಗಿದೆ. ಈ ಗ್ರಾಮಗಳ ಜನರು ವಾಹನದಲ್ಲಿ ಓಡಾಡುವಂತೆ ಮಾಡಲು 4-5 ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಇತ್ಯಾದಿ, ಇತ್ಯಾದಿ,,,,” ಅಧಿಕಾರ ಕೇಂದ್ರಗಳ ಈ ಮಾತುಗಳು ಸಾಮಾನ್ಯ ಜನರಲ್ಲಿ ಕಿಂಚಿತ್ತು ಭರವಸೆಯನ್ನೂ ಹುಟ್ಟಿಸುವುದಿಲ್ಲ. ಅಧಿಕಾರಶಾಹಿಯ ಕಡತ ವಿಲೇವಾರಿಯಲ್ಲಿ ಆಗುವ ವಿಳಂಬ, ಕಡತಗಳ ಪ್ರತಿಯೊಂದು ಹೆಜ್ಜೆಗೂ ಅಡ್ಡಿಯಾಗುವ ನಿಯಮಗಳು, ಲಂಚಗುಳಿತನ, ರಾಜಕೀಯ ಮೇಲಾಟ ಇವೆಲ್ಲವೂ ಇಂತಹ ಗ್ರಾಮಗಳ ಪಾಲಿಗೆ ಯಮಕಂಟಕವಾಗಿಯೇ ಕಾಣುತ್ತವೆ. 263 ಜನರ 63 ಕುಟುಂಬಗಳಿರುವ ಮೆಂದಾರೆಯಲ್ಲಿ ಎಷ್ಟು ಮನೆಗಳಿವೆ, ಅವರಿಗೆ ಹೊರಗಡೆ ಎಷ್ಟು ಭೂಮಿಯ ಅವಶ್ಯಕತೆ ಇದೆ, ಪುನರ್ವಸತಿಗೆ ಎಷ್ಟು ಜಾಗಬೇಕು ಎಂಬ ವಿವರಗಳನ್ನು ಅಂದಾಜುಪಟ್ಟಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎನ್ನುತ್ತಾರೆ ಜಿಲ್ಲಾಧಿಕಾರಿಗಳು. (ಆಂದೋಲನ ವರದಿ 14 ಮೇ 2024).

ಬುಡಕಟ್ಟು ಜನಾಂಗಗಳಾದ ಸೋಲಿಗರು ಮತ್ತು ಬೇಡಗಂಪಣರು ವಾಸಿಸುವ ಈ ಕುಗ್ರಾಮಗಳು ಜನಾಂಗೀಯವಾಗಿಯೇ ವಿಭಜನೆಗೂ ಒಳಗಾಗಿರುವುದು ನಾಗರಿಕತೆಯ ದುರಂತ.  ಮತದಾನ ಬಹಿಷ್ಕರಿಸಲು ಎರಡೂ ಗ್ರಾಮದ ಜನರು ಒಮ್ಮತದ ತೀರ್ಮಾನ ಕೈಗೊಂಡಿದ್ದರೂ, ಕೊನೆಯ ಗಳಿಗೆಯಲ್ಲಿ ಪೊಲೀಸರ ಮನವೊಲಿಕೆಗೆ ಮಣಿದು ಮತದಾನ ಮಾಡಲು ಮುಂದಾದ ಮೆಂದಾರೆ ಗ್ರಾಮದ ಜನರು ಇಂಡಿಗನತ್ತ ಗ್ರಾಮದ ಜನರಿಂದ ಹಲ್ಲೆಗೊಳಗಾಗಿರುವುದು ನಮ್ಮ ಜಾತಿ ಪೀಡಿತ ಸಮಾಜದ ಒಳಸೂಕ್ಷ್ಮಗಳಿಗೆ ಕನ್ನಡಿ ಹಿಡಿದಂತಿದೆ. ಈ ಸಂಘರ್ಷದ ಫಲ 40ಕ್ಕೂ ಹೆಚ್ಚು ಜನರ ಬಂಧನ, ಬಿಡುಗಡೆ, ಕೋರ್ಟ್‌ ವ್ಯಾಜ್ಯ, ವರ್ಷಗಟ್ಟಲೆ ಕೋರ್ಟ್‌ಗೆ ಅಲೆತ ಇತ್ಯಾದಿ.

ಮತದಾನ ಬಹಿಷ್ಕರಿಸಲು ಸಭೆ

ಈ ಇಡೀ ಪ್ರಕರಣದಲ್ಲಿ ನಾಗರಿಕ ಪ್ರಪಂಚಕ್ಕೆ ಕಾಣಿಸಬೇಕಿರುವುದು ನಮ್ಮ ಆಳ್ವಿಕೆಯ ಅಭಿವೃದ್ಧಿ ಮಾದರಿ ಮತ್ತು ಅದರಿಂದ ಉಂಟಾಗುವಂತಹ ಅಸಮಾನತೆಯ ನೆಲೆಗಳು. ಅಮೃತ ಕಾಲದತ್ತ ಧಾವಿಸುತ್ತಿರುವ ನವ ಭಾರತ ಇಂತಹ ಲಕ್ಷಾಂತರ ಕುಗ್ರಾಮಗಳ ತವರು ಎನ್ನುವುದು ಸುಡು ವಾಸ್ತವ. ಇಂಡಿಗನತ್ತ-ಮೆಂದಾರೆ ಕೇವಲ ದಟ್ಟಾರಣ್ಯದ ಸಸಿಗಳಷ್ಟೇ. ಇಲ್ಲಿ ಸಂವಿಧಾನದ ಫಲಾನುಭವಿ ನಾಗರಿಕ ಸಮಾಜವನ್ನು ಹಲವು ಪ್ರಶ್ನೆಗಳು ಕಾಡಬೇಕಿವೆ.  76 ವರ್ಷಗಳ ಪ್ರಜಾಪ್ರಭುತ್ವವಾದಿ, ಸಂವಿಧಾನಬದ್ಧ ಆಳ್ವಿಕೆಯ ಹೊರತಾಗಿಯೂ ಇಂಡಿಗನತ್ತಗಳು, ಮೆಂದಾರೆಗಳು ಏಕೆ ಇನ್ನೂ ಕಾಣುತ್ತಿವೆ ? ಈ ಕುಗ್ರಾಮಗಳ ಆಸುಪಾಸಿನಲ್ಲೇ ತಮ್ಮ ಐಷಾರಾಮಿ ಬದುಕು ಸವೆಸುವ ಜನಪ್ರತಿನಿಧಿಗಳಿಗೆ ಈ ದುರಂತದ ಬದುಕು ಏಕೆ ಗೋಚರಿಸಲಿಲ್ಲ ? ಪಕ್ಷಾಂತರಿಯೋ, ತತ್ವಾಂತರಿಯೋ, ಮತಾಂತರಿಯೋ ಅಥವಾ ಬಣಾಂತರಿಯೋ,  ಜನರಿಂದ ಚುನಾಯಿತರಾಗುವ ಅಥವಾ ತಿರಸ್ಕರಿಸಲ್ಪಡುವ ರಾಜಕೀಯ ನಾಯಕರಿಗೆ ಈ ಶೋಷಿತ ಜನರ ಬದುಕು ಏಕೆ ಗೋಚರಿಸುವುದಿಲ್ಲ ? ಬುದ್ಧ-ಬಸವ-ಫುಲೆ-ನಾರಾಯಣಗುರು-ಅಂಬೇಡ್ಕರ್‌ ಹೆಸರಿನಲ್ಲಿ ರಾಜಕಾರಣ ಮಾಡುವವರಿಗಾಗಲೀ, ಹಿಂದೂ-ಮುಸ್ಲಿಂ-ಕ್ರೈಸ್ತ, ರಾಮ-ಕೃಷ್ಣ-ಏಸು-ಅಲ್ಲಾಹುವಿನ ಹೆಸರಿನಲ್ಲಿ ರಾಜಕೀಯ ಸಾಮ್ರಾಜ್ಯ ವಿಸ್ತರಿಸಿಕೊಳ್ಳುವ ಪಕ್ಷಗಳಿಗಾಗಲೀ  ಈ ದುರಂತದ ಬದುಕು ಏಕೆ ಗೋಚರಿಸಲಿಲ್ಲ ?

ಭಾರತ ಅನುಸರಿಸುತ್ತಿರುವ ನವ ಉದಾರವಾದಿ ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕತೆಯ ದೃಷ್ಟಿಯಲ್ಲಿ ಈ ಶೋಷಣೆ, ಬಡತನ ಮತ್ತು ಅಸಮಾನತೆಗಳು ಸಹಜ ಪ್ರಕ್ರಿಯೆಗಳಾಗಿ ಕಾಣುತ್ತವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೈಗೊಳ್ಳಲಾಗಿರುವ ಜನಕಲ್ಯಾಣ ಯೋಜನೆಗಳಿಂದ ಹೊರಬಂದು ನೋಡಿದರೆ ಭಾರತ ಅನುಸರಿಸಿಕೊಂಡು ಬಂದಿರುವುದು ಇದೇ ಬಂಡವಾಳಶಾಹಿಯ ಕ್ರೂರ ಹಾದಿಯನ್ನೇ . ಈ ಹಾದಿಯಲ್ಲಿ ಶೋಷಿತ ಜನರು ಬದುಕಲು ಸಾಧ್ಯವಾಗುವಂತಹ ಅನುಕೂಲಗಳನ್ನು ಪೂರೈಸಲಾಗುತ್ತದೆ ಆದರೆ ಸಾಮುದಾಯಿಕವಾಗಿ ಇದೇ ಜನರು ಮುಂದಕ್ಕೆ ಸಾಗಲು ಅಗತ್ಯವಾದ ದಾರಿಗಳಲ್ಲಿ ಕಂದಕಗಳನ್ನು ತೋಡಲಾಗುತ್ತದೆ. ಗೋಡೆಗಳನ್ನು ಕಟ್ಟಲಾಗುತ್ತದೆ. ಜಾತಿ, ಬುಡಕಟ್ಟು ಮತ್ತು ಸಾಮುದಾಯಿಕ ಅಸ್ಮಿತೆಗಳಿಂದಾಚೆ ನಿಂತು ನೋಡಿದಾಗ ಇಲ್ಲಿ ಶೋಷಿತ ವರ್ಗಗಳನ್ನೂ ಗುರುತಿಸಬಹುದು.  ನಾಗರಿಕ ಪ್ರಪಂಚವು ಗಮನಿಸಬೇಕಿರುವುದು ಈ ವರ್ಗಗಳ ವರ್ಗೀಕರಣಗಳನ್ನು ಹಾಗೂ ಭಾರತ ಅನುಸರಿಸುತ್ತಿರುವ ಮಾರುಕಟ್ಟೆ ಆರ್ಥಿಕತೆಯಲ್ಲಿ ಈ ವರ್ಗೀಕೃತ ಸಮುದಾಯಗಳು ಎದುರಿಸಬೇಕಾದ ಅಪಾಯಗಳನ್ನು.

ನಾ.ದಿವಾಕರ

ಚಿಂತಕರು

More articles

Latest article